ಆಸ್ತಿ ವಿವಾದ : ಡಿಜಿಪಿ ಕಚೇರಿಯಲ್ಲಿ ಆತ್ಮಹತ್ಯೆ ಯತ್ನ

ತುಮಕೂರಿನ ಕೆ.ಆರ್.ಬಡಾವಣೆ ನಿವಾಸಿಗಳಾದ ಎಸ್.ದಾಕ್ಷಾಯಿಣಿ (32), ಆಕೆಯ ಪತಿ ಕೆ.ಮಹೇಶ್ (38) ಹಾಗೂ ಮಕ್ಕಳಾದ ವಿದ್ಯಾ ಮತ್ತು ಚಂದನ್ ಆತ್ಮಹತ್ಯೆಗೆ ಯತ್ನಿಸಿದವರು. ಡಿಜಿಪಿ ಕಚೇರಿ ಸಿಬ್ಬಂದಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಂಜೆ ನಾಲ್ಕು ಗಂಟೆಗೆ ಸುಮಾರಿಗೆ ಡಿಜಿಪಿ ಕಚೇರಿಗೆ ಬಂದ ಮಹೇಶ್ ದಂಪತಿ, ಡಿಜಿಪಿ ಅವರು ಕಚೇರಿಯಲ್ಲಿ ಇಲ್ಲದ ಕಾರಣಕ್ಕಾಗಿ ಅಧಿಕಾರಿಗಳಿಗೆ, ಮನವಿ ಪತ್ರ ನೀಡಿದರು. ಕೆಲವೇ ಕ್ಷಣದಲ್ಲಿ ಮಹೇಶ್ ಪತ್ನಿ, ದಾಕ್ಷಾಯಿಣಿ ವಾಂತಿ ಮಾಡಿಕೊಂಡು ಕುಸಿದು ಬಿದ್ದಿದ್ದಾರೆ.
ಇದರ ಬೆನ್ನಲ್ಲೇ ಇಬ್ಬರು ಮಕ್ಕಳು ಕೂಡ ಅಸ್ವಸ್ಥಗೊಂಡು ಕುಸಿದು ಬಿದ್ದರು. ಕೂಡಲೇ ಕಚೇರಿಯ ಸಿಬ್ಬಂದಿ ಹತ್ತಿರದ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಕರೆದೊಯ್ದು ಎಲ್ಲರಿಗೂ ಚಿಕಿತ್ಸೆ ಕೊಡಿಸಿದ್ದಾರೆ. ಈ ದಂಪತಿ ಡಿಜಿಪಿ ಕಚೇರಿ ಪ್ರವೇಶಿಸುವ ಮುನ್ನವೇ ವಿಷ ಸೇವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ತಿ ವಿವಾದ : ತುಮಕೂರಿನ ಅರಕೆರೆ ಗ್ರಾಮದ ದಾಕ್ಷಾಯಿಣಿ, ಕೆ.ಮಹೇಶ್ ದಂಪತಿ ಕೆ.ಆರ್.ಬಡಾವಣೆಯಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ದಾಕ್ಷಾಯಿಣಿ ಸೋದರರಾದ ಕಾಂತರಾಜು ಮತ್ತು ಸೋಮಶೇಖರ್ ಅರಕೆರೆಯಲ್ಲಿ ಆಸ್ತಿ ಮಾಡೋಣ ಎಂದು, ದಾಕ್ಷಾಯಿಣಿ ಮತ್ತು ಮಹೇಶ್ ರಿಂದ 45 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ ಎಂಬುದು ಆರೋಪ.
ಸೋದರರ ವಂಚನೆ ಕುರಿತು 2010ರಲ್ಲಿ ತಮಕೂರು ಸಿವಿಲ್ ಕೋರ್ಟ್ನಲ್ಲಿ ದಾಕ್ಷಾಯಿಣಿ ದೂರು ನೀಡಿದ್ದರು. ಆದರೆ, ತುಮಕೂರು ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ನಗರದಲ್ಲಿ ಎಸಿಪಿಯಾಗಿ ನಿವೃತ್ತವಾಗಿರುವ ಸುಬ್ಬಣ್ಣ ಮಧ್ಯಪ್ರವೇಶಿಸಿ ದೂರನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು.
ಪೊಲೀಸರು ಸಂಧಾನ ನಡೆಸುತ್ತಾರೆ ಎಂದು ದಾಕ್ಷಾಯಿಣಿ ಅವರು ದೂರು ವಾಪಸ್ ಪಡೆದಿದ್ದಾರೆ. ಆದರೆ, ಎಸಿಪಿ ಮತ್ತು ಪೊಲೀಸರು ಸೋದರರರಿಂದ ಹಣಪಡೆದು, ಈಗ ದಾಕ್ಷಾಯಿಣಿ ಕುಟುಂಬದವರಿಗೆ ಬೆದರಿಕೆ ಹಾಕುತ್ತಿದ್ದಾರೆ.
2013ರ ಫೆ.21ರಂದು ದಾಕ್ಷಾಯಿಣಿ ಕುಟುಂಬ ಮಾಧ್ಯಮಗಳ ಮುಂದೆ ಬಂದು ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ನಂತರ ಶೀಘ್ರವೇ ವಿವಾದ ಇತ್ಯರ್ಥಪಡಿಸುವುದಾಗಿ ಸುಬ್ಬಣ್ಣ ಭರವಸೆ ನೀಡಿದ್ದರು.
ಆದರೆ, ನಿವೃತ್ತಿಯಾಗಿರುವ ಅವರು ನನಗೂ ನಿಮ್ಮ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ, ಎಂದು ದಂಪತಿಗಳನ್ನು ವಂಚಸುವ ಮೂಲಕ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ದಾಕ್ಷಾಯಿಣಿ ದೂರಿದ್ದಾರೆ.
ಸಾವಿನ ನಂತರ ನ್ಯಾಯ ದೊರೆಯಲಿ : ವಂಚನೆ ಕುರಿತು ತುಮಕೂರು ನಗರದ ಪೊಲೀಸ್, ಎಸ್ಪಿ, ರಾಜ್ಯಪಾಲರು, ಗೃಹಸಚಿವರು, ರಾಜ್ಯ ಡಿಜಿಪಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ, ಮಹಿಳಾ ಆಯೋಗ, ಲೋಕಾಯುಕ್ತ, ಮಾನವ ಹಕ್ಕುಗಳ ಆಯೋಗ ಮತ್ತು ಡಿಸಿಪಿಗಳಾದ ಹರ್ಷ ಮತ್ತು ರೇವಣ್ಣ ಅವರಿಗೆ ಕುಟುಂಬದವರು ದೂರು ನೀಡಿದ್ದಾರೆ.
ಆದರೆ, ಯಾರು ನ್ಯಾಯ ದೊರಕಿಸಿಲ್ಲ. ಆದ್ದರಿಂದ ದಂಪತಿ ಸಾವಿನ ಮೊರೆ ಹೋಗಿದ್ದಾರೆ. ಸಾವಿನ ಬಳಿಕವಾದರೂ ತಮಗೆ ಕಿರುಕುಳ ನೀಡಿದವರಿಗೆ ಶಿಕ್ಷೆ ಆಗಬಹುದು ಎಂಬುದು ನಮ್ಮ ಆಶಯವಾಗಿದೆ ಎಂದು ಆತ್ಮಹತ್ಯೆ ಯತ್ನಕ್ಕೂ ಮುನ್ನ ಬರೆದ ಪತ್ರದಲ್ಲಿ ದಂಪತಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ತನಿಖೆ ನಡೆಸುತ್ತೇವೆ : ಘಟನೆಯ ವಿವರ ಪಡೆದು ಆಸ್ಪತ್ರೆಗೆ ಭೇಟಿ ನೀಡಿದ, ಹೆಚ್ಚುವರಿ ಪೊಲೀಸ್ ಆಯಕ್ತ ಕಮಲ್ ಪಂತ್, ನಿವೃತ್ತ ಎಸಿಪಿಯೊಬ್ಬರು ಮಧ್ಯೆ ಪ್ರವೇಶಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.












Click it and Unblock the Notifications