ಕೇಂದ್ರ ಸಂಪುಟ ವಿಸ್ತರಣೆ, ಖರ್ಗೆ ಆಸೆ ಚಿಗುರು

ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವ ಅಜಯ್ ಮಕಾನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೆ ರೈಲ್ವೆ ಖಾತೆ ಸಚಿವ ಸಿ.ಪಿ.ಜೋಷಿ ಕೂಡ ರಾಜೀನಾಮೆ ಸಲ್ಲಿಸಿದ್ದು ಸದ್ಯದ ಪ್ರಮುಖ ಬೆಳವಣಿಗೆಯಾಗಿದೆ. ಈ ನಡುವೆ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಉತ್ತಮ ಖಾತೆ ದೊರೆಯುವ ನಿರೀಕ್ಷೆ ಮತ್ತೊಮ್ಮೆ ಚಿಗುರೊಡೆದಿದೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಈ ಇಬ್ಬರು ಸಚಿವರ ರಾಜಿನಾಮೆಯನ್ನು ಅಂಗೀಕರಿಸಿದ್ದಾರೆ. ಈ ನಡುವೆ ಕೇಂದ್ರ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಜಯರಾಂ ರಮೇಶ್ ಕೂಡ ರಾಜೀನಾಮೆ ನೀಡಲಿದ್ದಾರೆಂಬ ವದಂತಿ ದಟ್ಟವಾಗಿ ಕೇಳಿ ಬಂದಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಏನು ಹೊರಬಿದ್ದಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರ್ನಾಟಕದ ಮುಖ್ಯಮಂತ್ರಿ ಪಟ್ಟ ತಪ್ಪಿರುವುದರಿಂದ ರೈಲ್ವೆ ಖಾತೆ ಸಚಿವರಾಗುವ ಕನಸು ಕಾಣುತ್ತಿದ್ದಾರೆ.
ಹೊಸ ಸಮಿತಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಅಜಯ್ ಮಾಕೇನ್, ಸಿಪಿ ಜೋಶಿ ಹಾಗೂ ದಿಗ್ವಿಜಯ್ ಸಿಂಗ್ ಅವರನ್ನು ಸೇರಿಸಿಕೊಳ್ಳಲಾಗಿದೆ ಹಾಗೂ ಇಬ್ಬರು ಸಚಿವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೇರಿಸಲಾಗಿದೆ ಎಂದು ಶುಕ್ರವಾರ ಕಾಂಗ್ರೆಸ್ ವಕ್ತಾರರು ಪ್ರಕಟಿಸಿದ್ದಾರೆ. ದೆಹಲಿಯಲ್ಲಿ ಶೀಲಾ ದೀಕ್ಷಿತ್ ಅವರ ಸ್ಥಾನಕ್ಕೆ ಅಜಯ್ ಮಾಕೇನ್ ಅವರನ್ನು ತಂದು ಕೂರಿಸುವ ಪ್ರಯತ್ನಗಳು ನಡೆದಿವೆಯಾದರೂ ಅಜಯ್ ಅವರಿಗೆ ದೆಹಲಿ ಸಿಎಂ ಪಟ್ಟ ಸುಲಭಕ್ಕೆ ಸಿಗುವಂತಿಲ್ಲ. ಹೆಚ್ಚಿನ ವಿವರಗಳಿಗೆ
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಹಿರಿಯ ತಲೆಗಳನ್ನು ಪಕ್ಷದ ಸಂಘಟನೆಗೆ ತೊಡಗಿಸಿಕೊಂಡು ಯುವಕರಿಗೆ ಸಂಪುಟದಲ್ಲಿ ಆದ್ಯತೆ ನೀಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.
ಕೇಂದ್ರ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದ್ದು, ಯುವ ಮುಖಗಳನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಪ್ರಧಾನಮಂತ್ರಿ ಮನಮೋಹನಸಿಂಗ್ ತೀರ್ಮಾನಿಸಿದ್ದಾರೆ.
ಅಶ್ವನಿ ಕುಮಾರ್, ಅಜಯ್ ಕುಮಾರ್ ಬನ್ಸಾಲ್ ರಾಜೀನಾಮೆ ನೀಡಿದ್ದರಿಂದ ಎರಡೂ ಖಾತೆಗಳು ಹಾಗೆಯೇ ಉಳಿದಿವೆ. ಹೆಚ್ಚುವರಿಯಾಗಿ ಇರುವ ಖಾತೆಗಳನ್ನು ಕಿರಿಯರು ಮತ್ತು ಹಿರಿಯರಿಗೆ ನೀಡಲು ಪ್ರಧಾನಮಂತ್ರಿ ಒಲವು ತೋರಿದ್ದಾರೆಂದು ತಿಳಿದುಬಂದಿದೆ.
ಹೆಚ್ಚುವರಿ ಖಾತೆಗಳನ್ನು ಯುವಕರಿಗೆ ಆದ್ಯತೆ ನೀಡುವುದು ಹಾಗೂ ರಾಜ್ಯ ಸಚಿವರನ್ನು ಸಂಪುಟ ದರ್ಜೆಗೆ ನೀಡುವುದು ಯುಪಿಎ ಸರ್ಕಾರದ ಲೆಕ್ಕಾಚಾರವಾಗಿದೆ.
ಯಾರಿಗೆ ಚಾನ್ಸ್?: ಯುವ ಮುಖಗಳಾದ ಜ್ಯೋತಿರಾಧ್ಯ ಸಿಂಧ್ಯಾ, ಸಚಿನ್ ಪೈಲೆಟ್ ಗೆ ಸಂಪುಟ ಖಾತೆ ದೊರಕುವ ಸಂಭವವಿದೆ. ಉಳಿದಂತೆ ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಜತೆಯೂ ಮಾತುಕತೆ ನಡೆದಿದೆ.
ಡಿಸೆಂಬರ್ ತಿಂಗಳ ಅಂತ್ಯಕ್ಕೆ ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಅತ್ಯಂತ ಮಹತ್ವ ಎನಿಸಿದ ಈ ನಾಲ್ಕೂ ರಾಜ್ಯಗಳ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಹಿರಿಯರ ಸಂಘಟನೆಗಾಗಿ ಹೈಕಮಾಂಡ್ ಈ ತೀರ್ಮಾನ ಕೈಗೊಂಡಿದೆ.
ಪಂಚರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ಲೋಕಸಭೆ ಚುನಾವಣೆ ಎದುರಾಗಲಿದ್ದು, ಹ್ಯಾಟ್ರಿಕ್ ಕನಸಿನಲ್ಲಿರುವ ಕಾಂಗ್ರೆಸ್ ಹಿರಿಯರನ್ನು ಪಕ್ಷ ಸಂಘಟನೆಗೆ, ಕಿರಿಯರನ್ನು ಸಂಪುಟಕ್ಕೆ ತೆಗೆದುಕೊಂಡು ಭಿನ್ನಮತಕ್ಕೆ ಆಸ್ಪದವಿಲ್ಲದಂತೆ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ.












Click it and Unblock the Notifications