ಬಸ್ ಪ್ರಯಾಣ ದರ ಭರ್ಜರಿ ಏರಿಕೆ, ಇಂದಿನಿಂದ ಜಾರಿ
ಬೆಂಗಳೂರು, ಜೂ. 15 : ಸುದ್ದಿ ತಿಳಿಯದೆ ಬಸ್ ಏರುವವರಿಗೆ ಭಾನುವಾರದಿಂದ ಭಾರೀ ಶಾಕ್ ಕಾದಿರುತ್ತದೆ. ಡೀಸೆಲ್ ಬೆಲೆ ನಿರಂತರವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣ ದರವನ್ನು ಶೇ.10.5ರಷ್ಟು ಏರಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿರ್ಧರಿಸಿದ್ದು, ಜೂ.15ರ ಮಧ್ಯರಾತ್ರಿಯಿಂದಲೇ ನೂತನ ಪರಿಷ್ಕೃತ ದರಗಳು ಜಾರಿಗೆ ಬರಲಿವೆ.
ಹಾಲು, ಹಣ್ಣು, ತರಕಾರಿ, ದಿನಸಿ ಬೆಲೆಗಳು ಗಗನಕ್ಕೇರಿ ಜನಸಾಮಾನ್ಯರನ್ನು ಕಂಗೆಡಿಸಿರುವ ಸಂದರ್ಭದಲ್ಲಿ, ಕೆಎಸ್ಆರ್ಟಿಸಿ ಬೆಲೆ ಏರಿಗೆ ಬರಸಿಡಿಲಿನಂತೆ ಬಂದೆರಗಿದೆ. ಬಿಎಂಟಿಸಿ ಬಸ್ ದರಗಳು ಕೂಡ ಶೇ.16ರಷ್ಟು ಏರಿಕೆಯಾಗಿವೆ. ಬಸ್ ದರದ ಜೊತೆಗೆ ವಿದ್ಯಾರ್ಥಿಗಳ ಪಾಸ್ ದರ ಏರಿದರೂ ಅಚ್ಚರಿಯಿಲ್ಲ.

ಜನವರಿಯಿಂದ ಡೀಸೆಲ್ ಬೆಲೆಯನ್ನು ಏರಿಸಲು ತೈಲ ಕಂಪನಿಗಳಿಗೆ ಮುಕ್ತಹಸ್ತ ನೀಡಿದ್ದರಿಂದ ಡೀಸೆಲ್ ಬೆಲೆಗಳು ನಿರಂತರವಾಗಿ ಏರುತ್ತಲೇ ಇದೆ. ಶನಿವಾರದಿಂದಲೇ ಪೆಟ್ರೋಲ್ ದರದಲ್ಲಿ ಲೀಟಲಿಗೆ 2 ರು. ಮತ್ತು ಡೀಸೆಲ್ ದರದಲ್ಲಿ ಲೀಟರಿಗೆ 50 ಪೈಸೆ ಏರಿಕೆಯಾಗಿದ್ದು, ಗ್ರಾಹಕರಿಗೆ ಡಬಲ್ ಶಾಕ್ ನೀಡಿದಂತಾಗಿದೆ.
ಡೀಸೆಲ್ ದರ ತೀವ್ರವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣ ದರ ಏರಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರಾಜ್ಯ ಸರಕಾರಕ್ಕೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ವಿಧಾನಸಭೆ ಚುನಾವಣೆಯ ಕಾರಣ ಪ್ರಸ್ತಾವನೆಯನ್ನು ಸರಕಾರ ಮುಂದೂಡುತ್ತಲೇ ಬಂದಿತ್ತು.
ಡೀಸೆಲ್ ದರ ಏರುತ್ತಿರುವುದರಿಂದ ಮತ್ತು ಬಸ್ ದರ ಏರಿಸದಿರುವುದರಿಂದ ರಸ್ತೆ ಸಾರಿಗೆ ಸಂಸ್ಥೆ ನಷ್ಟ ಅನುಭವಿಸುತ್ತಿದೆ ಎಂದು ಸಂಸ್ಥೆ ಹೇಳಿತ್ತು. ಕಡೆಗೂ ಕೆಎಸ್ಆರ್ಟಿಸಿ ಒತ್ತಡಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮಣಿದಿದ್ದು, ದರ ಪರಿಷ್ಕರಣೆಗೆ ಒಪ್ಪಿಗೆ ನೀಡಿದ್ದಾರೆ. ಜೂ.16ರಿಂದ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಈ ದರ ಏರಿಕೆ ಭಾರೀ ಹೊಡೆತ ನೀಡಲಿದೆ.












Click it and Unblock the Notifications