ಮೋದಿ ಮ್ಯಾಜಿಕ್ ಎಲ್ಲೂ ನಡೆಯಲ್ಲ : ಅಖಿಲೇಶ್
ಮೈಸೂರು, ಜೂ.14: ಎರಡು ದಿನಗಳ ಕಾಲ ಕರ್ನಾಟಕ ಪ್ರವಾಸಕ್ಕೆ ಆಗಮಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮ್ಯಾಜಿಕ್ ಕರ್ನಾಟಕದಲ್ಲಿಯಾಗಲಿ, ಉತ್ತರ ಪ್ರದೇಶದಲ್ಲಾಗಲಿ ನಡೆಯುವುದಿಲ್ಲ ಎಂದು ಘೋಷಿಸಿದ್ದಾರೆ.
ಮೈಸೂರಿಗೆ ಭೇಟಿ ನೀಡಿದ್ದು ಖುಷಿಯಾಗಿದೆ. ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ವಿರೋಧಿ ಅಲೆ ಇದೆ.ತೃತೀಯ ರಂಗ ಸ್ಥಾಪನೆಗೆ ಈಗ ಕಾಲ ಉತ್ತಮ ಅವಕಾಶವಿದೆ ಎಂದು ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಹೇಳಿದ್ದಾರೆ.
ಇದಕ್ಕೂ ಮುನ್ನ, ರಾಜ್ಯದ ಇತಿಹಾಸದಲ್ಲೆ ಮೊಟ್ಟ ಮೊದಲ ಬಾರಿಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿದ ಸಂಭ್ರಮ ಮತ್ತೊಮ್ಮೆ ಚನ್ನಪ್ಪಟ್ಟಣದಲಿ ಕಂಡು ಬಂದಿತ್ತು. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸಿ.ಪಿ.ಯೋಗೇಶ್ವರ್ ಅವರು ಪಕ್ಷದ ಮುಖಂಡ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.
ಚನ್ನಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪ ಇರುವ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಸುಮಾರು 500ಕ್ಕೂ ಅಧಿಕ ಬಸ್ ಗಳಿಂದ ಜನ ಬಂದಿದ್ದರು. ಎಲ್ಲೆಡೆ ಸಮಾಜವಾದಿ ಪಕ್ಷದ ಚಿನ್ಹೆ ಸೈಕಲ್ ರಾರಾಜಿಸುತ್ತಿತ್ತು. ಸಿ.ಪಿ ಯೋಗೇಶ್ವರ್ ಹಾಗೂ ಅಖಿಲೇಶ್ ಯಾದವ್ ಆವರ ಕಟೌಟ್ ಗಳು ರಸ್ತೆಗಳ ಇಕ್ಕೆಲಗಳಲ್ಲಿ ಕಂಡು ಬಂದಿತು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬೃಹತ್ ಜಾಹೀರಾತುಗಳನ್ನು ಸಮಾಜವಾದಿ ಪಕ್ಷದಿಂದ ಒಂದು ದಿನಕ್ಕೆ ಕೊಂಡು ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರ ಕರ್ನಾಟಕ ಪ್ರವಾಸದ ಮುಂದಿನ ವಿವರಗಳನ್ನು ಚಿತ್ರ ಸರಣಿಯಲ್ಲಿ ನೋಡಿ

ಆದಿಚುಂಚನಗಿರಿ ಮಠದಲ್ಲಿ ಯಾದವ್
ಮೈಸೂರಿಗೆ ತೆರಳುವ ಮುನ್ನ ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಯುಪಿ ಸಿಎಂ ಅಖಿಲೇಶ್ ಭೇಟಿ ನೀಡಿದರು. ಶ್ರೀನಿರ್ಮಲಾನಂದ ಸ್ವಾಮೀಜಿಗಳು ಅಖಿಲೇಶ್ ಅವರಿಗೆ ಆಶೀರ್ವಾದ ನೀಡಿದರು. ಸ್ವಾಮೀಜಿಗಳನ್ನು ಅಭಿನಂದಿಸಿ ಮೈಸೂರಿಗೆ ಯಾದವ್ ತೆರಳಿದರು.
ನಂತರ ಮಾತನಾಡಿದ ಸ್ವಾಮೀಜಿ, ಇದೊಂದು ಸೌಜನ್ಯದ ಭೇಟಿ, ಮುಲಾಯಂ ಸಿಂಗ್ ಅವರು ಬಾಲಗಂಗಾಧರನಾಥ ಸ್ವಾಮೀಜಿಗಳ ಭಕ್ತರಾಗಿದ್ದರು.ಮೇಲಾಗಿ, ಅಖಿಲೇಶ್ ಹಾಗೂ ನಾನು ಒಂದೇ ಕಾಲೇಜಿನಲ್ಲಿ ಒಟ್ಟಿಗೆ ವ್ಯಾಸಂಗ ಮಾಡಿದ್ದರಿಂದ ಪರಿಚಯವಿದೆ ಎಂದರು.ನೋಯ್ಡಾದಲ್ಲಿ ಬಿಜಿಎಸ್ ಶಾಖಾ ಮಠ ಸ್ಥಾಪನೆ, ಶಿಕ್ಷಣ ಸಂಸ್ಥೆ ನಿರ್ಮಾಣ ಬಗ್ಗೆ ಚರ್ಚೆ ಕೂಡಾ ನಡೆದಿದೆ
ಸಿಪಿವೈ ಫುಲ್ ಖುಷ್
ಲೋಕಸಭೆ ಚುನಾವಣೆ ಎದುರಾಗಲಿರುವುದರಿಂದ ರಾಜ್ಯದಲ್ಲಿ ಖಾತೆ ತೆರೆಯಲು ಅಖಿಲೇಶ್ ಯಾದವ್ ಮುಖಂಡರೊಂದಿಗೆ ಮಾತುಕತೆ ನಡೆಸಲು ಆರಂಭಿಸಿದ್ದಾರೆ.
ಈ ನಡುವೆ ಸಮಾಜವಾದಿ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷರನ್ನಾಗಿ ಸಿ.ಪಿ.ಯೋಗೇಶ್ವರ್ ಅವರನ್ನು ನೇಮಕ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಇದೇ ಖುಷಿಯಲ್ಲಿ ಯೋಗೇಶ್ವರ್ ಅವರು ಅಖಿಲೇಶ್ ಹಿಂದೆ ಮುಂದೆ ಸುತ್ತುತ್ತಿದ್ದಾರೆ.
ಕಾಲೇಜಿಗೆ ಬಂದ ಅಖಿಲೇಶ್
ಚನ್ನಪಟ್ಟಣದಲ್ಲಿ ಭಾಷಣ ಮಾಡಿದ ನಂತರ ಸುತ್ತೂರು ಮಠಕ್ಕೆ ಅಖಿಲೇಶ್ ಭೇಟಿ ಕೊಟ್ಟು ಸ್ವಾಮೀಜಿಗಳ ಆಶೀರ್ವಾದ ಪಡೆದರು.
ನಂತರ, ತಾವು ಓದಿದ ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್ ಗೆ ಭೇಟಿ ನೀಡಿ ಅಲ್ಲಿನ ಬೋಧಕ ಸಿಬ್ಬಂದಿ ಹಾಗೂ ಕಾಲೇಜಿನ ಹಳೆ ಮಿತ್ರರೊಡನೆ ಅನೌಪಚಾರಿಕ ಮಾತುಕತೆ ನಡೆಸಲಿದ್ದಾರೆ.ಎಸ್ ಜೆ ಆರ್ ಸಿ ಕಾಲೇಜಿನಲ್ಲಿ 90ರ ದಶಕದಲ್ಲಿ ಪರಿಸರ ವಿಜ್ಞಾನ ಇಂಜಿನಿಯರಿಂಗ್ ವಿಷಯದಲ್ಲಿ ಅಖಿಲೇಶ್ ಯಾದವ್ ಅವರು ಪದವಿ ಪಡೆದಿದ್ದರು.|
ಕಾಲೇಜಿನಲ್ಲಿ ಫುಟ್ಬಾಲ್ ಆಟವಾಡುತ್ತಿದ್ದ ಅಖಿಲೇಶ್ ಕನ್ನಡ ಭಾಷೆ ಕಲಿಯಲಿಲ್ಲ ಎಂಬ ಕೊರಗಿದೆ ಎಂದು ಶುಕ್ರವಾರ ಕೂಡಾ ಹೇಳಿಕೊಂಡರು. ಫೇಸ್ ಬುಕ್ ನಲ್ಲಿ ಕಾಲೇಜಿಗೆ ಭೇಟಿ ಕೊಡುವ ವಿಷಯ ಹಾಕಿದ್ದೆ ತಡ ಕಾಮೆಂಟ್ ಗಳ ಮಹಾಪೂರವೇ ಹರಿದು ಬಂದಿದೆ.
ಮೋದಿ ವಿರೋಧಿ ಹೇಳಿಕೆ ಏಕೆ?
2002ರ ಗೋಧ್ರ ಹತ್ಯಾಕಾಂಡ ಹಿನ್ನೆಲೆಯಲ್ಲಿ ಮೋದಿಯನ್ನು ವಿರೋಧಿಸಿ ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಅವರು ಅಡ್ವಾಣಿ ಪರ ಮೃದು ನಿಲುವು ಹೊಂದಿರುವುದು ಏಕೆ? ಉತ್ತರ ಪ್ರದೇಶದ ಅನೇಕ ಕೋಮುಗಲಭೆ, ಅಯೋಧ್ಯಾ ಪ್ರಕರಣಗಳಲ್ಲಿ ಅಡ್ವಾಣಿ ಆರೋಪಿಯಾಗಿರುವುದು ಎಸ್ ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹಾಗೂ ಪುತ್ರ ಅಖಿಲೇಶ್ ಗೆ ಮರೆತು ಹೋಗಿದೆಯೇ? ಕಾಲವೇ ಉತ್ತರಿಸಬೇಕು.

ಅಖಿಲೇಶ್ ಭೇಟಿ ಉದ್ದೇಶವೇನು?
ಒಂದು ವೇಳೆ ತೃತೀಯ ರಂಗ ರಚನೆಯಾದರೆ, ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ಬೆಂಬಲ ನೀಡುವಂತೆ ಕೇಳುವುದು. ಆತ್ಮವಿಶ್ವಾಸ ಕಳೆದುಕೊಂಡಿರುವ ಬಿಎಸ್ ಅರ್ ಕಾಂಗ್ರೆಸ್ ಪಕ್ಷಕ್ಕೆ ಹೊಸ ಆಸೆ ತೋರಿಸಿ, ಬಿಎಸ್ ಶ್ರೀರಾಮುಲು ಅವರನ್ನು ಕರ್ನಾಟಕ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿಸುವುದು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಗೆ ಸಣ್ಣ ಮಟ್ಟಿನ ಹೊಡೆತವಾದರೂ ನೀಡುವುದು ಅಖಿಲೇಶ್ ಉದ್ದೇಶ

ಸೆಕ್ಯುಲರ್ ಮಂತ್ರ
ಸೆಕ್ಯುಲರ್ ಮಂತ್ರ ಜಪಿಸುವ ಸಮಾಜವಾದಿ ಸೈಕಲ್ ಸವಾರಿ ಪದ್ಮನಾಭನಗರದ ಕಡೆ ತಿರುಗಿ ಮಾಜಿ ಪ್ರಧಾನಿ ದೇವೇಗೌಡರ ಮನೆ ಮುಂದೆ ನಿಂತರೂ ಅಚ್ಚರಿಯೇನಿಲ್ಲ. ಆದರೆ, ಜೆಡಿಎಸ್ ಮುಖಂಡರೊಡನೆ ಭೇಟಿ ಬಗ್ಗೆ ಅಖಿಲೇಶ್ ಅವರು ಉತ್ತರಿಸಿಲ್ಲ.
ಈ ಹಿಂದೆ ಜೆಡಿಎಸ್ ಬಿಎಸ್ ಪಿ ಮಾಯಾವತಿ ಜೊತೆ ಕೈ ಜೋಡಿಸಿದ್ದರಿಂದ ಈ ಬಾರಿ ಹೇಗೋ ಏನೋ ಹೇಳಲು ಬರುವುದಿಲ್ಲ. ಒಟ್ಟಾರೆ, ಅಖಿಲೇಶ್ ಭೇಟಿ ರಾಜಕೀಯವಾಗಿ, ವೈಯಕ್ತಿಕವಾಗಿ ಸಮಾಜವಾದಿ ಪಕ್ಷಕ್ಕೆ ಮಾತ್ರ ಲಾಭದಾಯಕ. ಕರ್ನಾಟಕಕ್ಕೆ ಎಳ್ಳಷ್ಟೂ ಉಪಯೋಗವಿಲ್ಲ.











Click it and Unblock the Notifications