ಪ್ರತಿತಂತ್ರಕ್ಕೆ ಕುಮಾರಸ್ವಾಮಿ ಜೆಡಿಎಸ್ ಕಾವಲುಪಡೆ ಸಜ್ಜು
ಬೆಂಗಳೂರು, ಜೂನ್ 14- ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ ಅವರು ಪ್ರತಿಪಕ್ಷ ಸ್ಥಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸಲು ಅಣಿಗೊಳ್ಳುತ್ತಿದ್ದಾರೆ.
ಈ ಮಧ್ಯೆ, ತಾಜಾ ವರದಿಗಳ ಪ್ರಕಾರ ಜೆಡಿಎಸ್ ಮಾಜಿ ಶಾಸಕ ಮುದ್ದಹನುಮೇಗೌಡ ಅವರು ಪಕ್ಷದಿಂದ ದೂರವಾಗಿದ್ದು, ಕೆಪಿಸಿಸಿ ಕಚೇರಿಯಲ್ಲಿಂದು ಕಾಂಗ್ರೆಸ್ ಕೈಹಿಡಿದಿದ್ದಾರೆ.
Shadow cabinet: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿರ್ಣಾಯಕ ಸಮರ ಸಾರಿರುವ ಕುಮಾರಸ್ವಾಮಿ ಅವರು ಪ್ರತಿಪಕ್ಷ ನಾಯಕನಾಗಿ ತಮ್ಮ ಜವಾಬ್ದಾರಿ ನಿಭಾಯಿಸಲು 9 ಮಂದಿ ಅಧಿಕಾರಿಗಳ ಸಲಹಾ ತಂಡವೊಂದನ್ನು ರಚಿಸಿಕೊಂಡಿದ್ದಾರೆ.

ಸುಬ್ರಹ್ಮಣ್ಯ ನೇತೃತ್ವದ ಮಾಜಿ ಐಎಎಸ್ ಕಾರ್ಯಪಡೆ
ಮಾಜಿ ಐಎಎಸ್ ಅಧಿಕಾರಿ ಡಾ. ಎಸ್ ಸುಬ್ರಹ್ಮಣ್ಯ ನೇತೃತ್ವದ ಮಾಜಿ ಐಎಎಸ್ ಅಧಿಕಾರಿಗಳ ತಂಡ ಇದಾಗಿದೆ. ತಂಡದ ಸಲಹೆ ಮೇರೆಗೆ ಕುಮಾರಸ್ವಾಮಿ ಯಶಸ್ವಿ Leader of Opposition ಆಗಿ ರೂಪುಗೊಳ್ಳಲು ಬಯಸಿದ್ದಾರೆ. ತಂಡದ ಅಧಿಕಾರಗಳು ಕುಮಾರಸ್ವಾಮಿಗೆ ಮಾರ್ಗದರ್ಶನ ಮಾಡಲಿದ್ದು, ಈ ಮೂಲಕ ಸರ್ಕಾರದ ವೈಫಲ್ಯಗಳನ್ನು ಬಯಲಿಗೆಳೆಯಲು ಕಾರ್ಯತಂತ್ರ ರೂಪಿಸಿದ್ದಾರೆ.
ರಾಜ್ಯದ ಇತಿಹಾಸದಲ್ಲಿ ಹಿಂದೆ ಯಾವುದೇ ಪ್ರತಿಪಕ್ಷ ನಾಯಕರು ಇಷ್ಟೊಂದು ಪ್ರಮಾಣದಲ್ಲಿ ಉನ್ನತ ಅಧಿಕಾರಿಗಳ ಸಲಹಾ ಮಂಡಳಿ ರಚಿಸಿಕೊಂಡಿರಲಿಲ್ಲ. ಆದರೆ ಕುಮಾರಸ್ವಾಮಿ ಮಾತ್ರ ಕಾಂಗ್ರೆಸ್ ಸರಕಾರದ ಲೋಪ ದೋಷಗಳನ್ನು ಸಮರ್ಥವಾಗಿ ಬಯಲಿಗೆಳೆಯುವ ನಿಟ್ಟಿನಲ್ಲಿ ಈ ಅಧಿಕಾರಿಗಳ ತಂಡ ಸೂಕ್ತ 'ಅಸ್ತ್ರಗಳನ್ನು' ಪೂರೈಸಲಿದೆ.

ಇಲಾಖಾವಾರು ಹಂಚಿಕೆ
ತಂಡದಲ್ಲಿ ಪ್ರತಿಯೊಬ್ಬ ಅಧಿಕಾರಿಗೂ ಪ್ರಮುಖ ಇಲಾಖೆಗಳ ಜವಾಬ್ದಾರಿಯನ್ನು ನೀಡಲಾಗಿದೆ. ಅಲ್ಲಿನ ಆಯಾ ಇಲಾಖೆಯಲ್ಲಿನ ಕಾರ್ಯಚಟುವಟಿಕೆ, ಲೋಪದೋಷ ಮತ್ತಿತರ ಮಾಹಿತಿಯನ್ನು ಹೆಕ್ಕಿ ತೆಗೆದು ಕುಮಾರಸ್ವಾಮಿ ಅವರಿಗೆ ಅವರು ಹಸ್ತಾಂತರಲಿದ್ದಾರೆ.
ಅಂದಹಾಗೆ, ಬಿಬಿಎಂಪಿ ಆಯುಕ್ತರಾಗಿದ್ದಾಗ 2011ರ ಮಾರ್ಚ್ ತಿಂಗಳಲ್ಲಿ ಸುಬ್ರಹ್ಮಣ್ಯ ಅವರು ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಗೆ ಸೇರ್ಪಡೆಯಾಗಿದ್ದರು.

ಪಕ್ಷದ ಯಶಸ್ಸು ಕೋರಿ
ಸದನದಲ್ಲಿ ಯಾವ ವಿಷಯಗಳನ್ನು ಪ್ರಸ್ತಾಪಿಸಬೇಕು. ಯಾವ ವಿಚಾರಗಳಿಗೆ ಆದ್ಯತೆ ನೀಡಬೇಕು ಎನ್ನುವ ಕುರಿತು ಮಾರ್ಗದರ್ಶನ ಮಾಡಲಿದ್ದಾರೆ. ಪ್ರತಿಪಕ್ಷ ಸ್ಥಾನದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಮುಂದಿನ ಚುನಾವಣೆಗಳಲ್ಲಿ ಪಕ್ಷಕ್ಕೆ ಯಶಸ್ಸು ಸಿಗುವಂತೆ ಮಾಡಬೇಕೆಂದು ಕುಮಾರಸ್ವಾಮಿ ಪಣತೊಟ್ಟಿದ್ದು, ಅದಕ್ಕಾಗಿ ಈಗಿನಿಂದಲೇ ಕಾರ್ಯಪ್ರವೃತ್ತರಾಗಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿಗಳಿಗೆ ಸಂಬಂಧಪಟ್ಟ ಇಲಾಖೆಗಳ ಬಗ್ಗೆ ಸಮಗ್ರ ಮಾಹಿತಿ ಇರುತ್ತದೆ. ಅಲ್ಲಿನ ಸಮಸ್ಯೆಗಳ ಆಳ, ಅಗಲವನ್ನು ಬಲ್ಲರು. ಹಾಗಾಗಿ ಅವರ ನೆರವಿನ ಮೂಲಕ ಸಿದ್ದರಾಮಯ್ಯ ಸರಕಾರಕ್ಕೆ ಮೂಗುದಾರ ಹಾಕಬಹುದು ಎನ್ನುವ ಆತ್ಮವಿಶ್ವಾಸ/ ಎಣಿಕೆ ಕುಮಾರಸ್ವಾಮಿ ಅವರದಾಗಿದೆ.

ದೇವೇಗೌಡರ ನಿರುತ್ಸಾಹ
ವಿಶೇಷವೆಂದರೆ ಕುಮಾರಸ್ವಾಮಿ ಅವರ ಇಂತಹ ನಿಲುವಿಗೆ ಮಾಜಿ ಪ್ರಧಾನಿ ದೇವೇಗೌಡರಿಂದ ಅಷ್ಟೇನು ಪೂರಕ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಪ್ರತಿಪಕ್ಷದ ನಾಯಕರಾದವವರು ಎಲ್ಲಾ ವಿಚಾರಗಳ ಬಗ್ಗೆ ತಾವೇ ಆಳಕ್ಕಿಳಿದು ಅಧ್ಯಯನ ನಡೆಸಿದರೆ ಇನ್ನಷ್ಟು ಅನುಭವ ದೊರೆತಂತಾಗುತ್ತದೆ. ತನ್ನ ಜವಾಬ್ದಾರಿ ನಿಭಾಯಿಸಲು ನಿವೃತ್ತ ಅಧಿಕಾರಿಗಳ ಮೊರೆ ಹೋಗುವುದು ಸರಿಯಲ್ಲ ಎನ್ನುವುದು ಅವರ ಅಭಿಪ್ರಾಯ.
ವಿಷಯಗಳ ಬಗ್ಗೆ ಅಧ್ಯಯನ ನಡೆಸಬೇಕು. ಈ ಕುರಿತಂತೆ ಚರ್ಚೆ ಮಾಡುವುದು ತಪ್ಪಲ್ಲ. ಆದರೆ ಅಧಿಕಾರಿಗಳನ್ನೇ ನಂಬಿಕೊಂಡು ಕೆಲಸ ಮಾಡುವುದು ಸಮರ್ಥನೀಯವಲ್ಲ ಎಂದಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆ ಅಸ್ತ್ರ ಜೋರಾಗಿದೆ:
ತಾವು ಪ್ರತಿಪಕ್ಷ ನಾಯಕರಾಗಿದ್ದ ಕಾಲದಲ್ಲಿ ತಮಗೆ ಮಾಹಿತಿಯೇ ದೊರೆಯುತ್ತಿರಲಿಲ್ಲ. ಈಗ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿದೆ. ಗೋಪ್ಯತೆ ಇಲ್ಲವಾಗಿದೆ. ಹಾಗಾಗಿ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಸರ್ಕಾರದ ವೈಫಲ್ಯಗಳನ್ನು ಬಯಲಿಗೆ ಎಳೆಯಬೇಕು ಎಂಬುದು ದೇವೇಗೌಡರ ದೃಢ ನಿಲುವು.












Click it and Unblock the Notifications