ದ್ವೇಷ ಸಾಧಿಸಿದ ಸಿಎಂ ಸಿದ್ದುಗೆ ಕುಮಾರಸ್ವಾಮಿ ಗುದ್ದು

ಕಾಪು ಸಿದ್ದಲಿಂಗಸ್ವಾಮಿ ಪ್ರಕರಣದಲ್ಲಿ ಸಿದ್ದರಾಮಯ್ಯ ಪುತ್ರ ರಾಕೇಶನನ್ನು A1 ಮಾಡಿದ ತಪ್ಪಿಗೆ ನಜರ್ ಬಾದ್ ಇನ್ಸ್ ಪೆಕ್ಟರ್ ಮೋಹನ್ ಅವರನ್ನು ಖುದ್ದು ಮುಖ್ಯಮಂತ್ರಿಯೇ ಮನೆಗೆ ಕಳಿಸಿದ್ದಾರೆ ಎಂದು ಆಕ್ರೋಶಗೊಂಡ ಜನ ಇಂದು ಮೈಸೂರಿನಲ್ಲಿ ಪ್ರತಿಭಟನೆಗಳನ್ನೂ ನಡೆಸಿದ್ದಾರೆ. ಇನ್ಸ್ ಪೆಕ್ಟರ್ ಮೋಹನ್ ಅವರನ್ನು ಮತ್ತೆ ಸೇವೆಗೆ ತೆಗೆದುಕೊಳ್ಳಬೇಕು ಎಂಬ ಆಗ್ರಹ ಎಲ್ಲೆಡೆ ಕೇಳಿಬಂದಿದೆ.
ಈ ಮಧ್ಯೆ, ಮೈಸೂರು ಪೊಲೀಸ್ ಆಯುಕ್ತ ಕೆಎಲ್ ಸುಧೀರ್ ಅವರಿಗೆ ಪ್ರಕರಣದಿಂದ ತೀವ್ರ ಮುಜುಗುರವಾಗಿದ್ದು, ದೀರ್ಘ ರಜೆ ಮೇಲೆ ತೆರಳಿದ್ದಾರೆ ಎಂಬ ಗಾಳಿಸುದ್ದಿ ಚಾಮುಂಡಿ ಬೆಟ್ಟದ ಸುತ್ತ ಬಲವಾಗಿ ಬೀಸುತ್ತಿದೆ.
ಇದೇ ವೇಳೆ, ಪಿರಿಯಾಪಟ್ಟಣ ಚುನಾವಣೆ ನಿಮಿತ್ತ ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿರುವ ಜೆಡಿಎಸ್ ಶಾಸಕಾಂಗ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಸಿಎಂ ಸಿದ್ದು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
'ರಾಜ್ಯದಲ್ಲಿ ಸಿದ್ಧರಾಮಯ್ಯಂದು ಹಿಟ್ಲರ್ ಆಡಳಿತ ನಡೆಯುತ್ತಿದೆ. ಅವರದು ಸರ್ವಾಧಿಕಾರಿ ಧೋರಣೆಯಾಗಿದೆ. ತಮ್ಮ ಮಗನ ಮೇಲೆ ಕೇಸು ದಾಖಲಿಸಿದ್ದಕ್ಕೆ ಅಧಿಕಾರಿಯನ್ನು ಅಮಾನತುಗೊಳಿಸಿದರೆ ಗತಿಯೇನು?' ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
'ಚುನಾವಣೆ ವೇಳೆ ತಮ್ಮ ಮಗನ ಮೇಲೆ ಎಫ್ಐಆರ್ ದಾಖಲಿಸಿದ್ದಕ್ಕಾಗಿ ಪೊಲೀಸ್ ಅಧಿಕಾರಿಯೊಬ್ಬರನ್ನು ಸಸ್ಪೆಂಡ್ ಮಾಡಿಸುವ ಮೂಲಕ ಮುಖ್ಯಮಂತ್ರಿ ತಮ್ಮ ಸ್ಥಾನದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ದ್ವೇಷದ ರಾಜಕಾರಣ ನಿಲ್ಲಿಸದಿದ್ದರೆ ಅವರಿಗೇ ಮುಳುವಾಗಲಿದೆ' ಎಂದೂ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
'ತಾವು ವಕೀಲರು ಎಂದು ಹೇಳಿಕೊಳ್ಳುವ ಸಿದ್ಧರಾಮಯ್ಯ ಅವರಿಗೆ ಎಫ್ಐಆರ್ ಎಂದರೆ ಏನೆಂದು ಗೊತ್ತಿದೆಯೇ? ತನಿಖೆ ನಡೆಸದೆ FIR ಹೇಗೆ ಹಾಕಿದರು ಎಂದು ಡಿಐಜಿ ಅವರನ್ನೇ ಪ್ರಶ್ನಿಸುವ ಮೂಲಕ ಸಿದ್ದರಾಮಯ್ಯ ರಾಜ್ಯದಲ್ಲಿ ಹೊಸ ಕಾನೂನು ತರಲು ಹೊರಟಿದ್ದಾರೆಯೇ?' ಎಂದು ಅವರು ಲೇವಡಿ ಮಾಡಿದ್ದಾರೆ.












Click it and Unblock the Notifications