ಹೊಸ ಬಾರ್ ಗೆ ಅನುಮತಿ ಇಲ್ಲವೇ ಇಲ್ಲ: ಸತೀಶ್
ಬೆಂಗಳೂರು, ಮೇ 27: ರಾಜ್ಯದಲ್ಲಿ ಹೊಸ ಬಾರ್ ಗಳಿಗೆ ಅನುಮತಿ ನೀಡುವುದಿಲ್ಲ. ಅಗ್ಗದ ಮದ್ಯ ಮತ್ತೆ ಪರಿಚಯಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಅಬಕಾರಿ ಸಚಿವ ಸತೀಶ್ ಜಾರಕೀಹೊಳಿ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಮೊದಲ ಬಾರಿಗೆ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಅಗ್ಗದ ಮದ್ಯ ತಯಾರಿಕೆ ಬಗ್ಗೆ ಇಲಾಖೆ ಯಾವುದೇ ರೀತಿಯ ಚರ್ಚೆ ಮಾಡಿಲ್ಲ. ಸದ್ಯಕ್ಕೆ ಅಗ್ಗದ ಮದ್ಯ ಜಾರಿಗೆ ತರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಬಕಾರಿ ಲಾಬಿಗೆ ಸರ್ಕಾರ ಮಣಿಯುವುದಿಲ್ಲ. 1992ರ ನಿಯಮವನ್ನು ಇಂದು ಕೂಡಾ ಪಾಲಿಸಿಕೊಂಡು ಬರಲಾಗುತ್ತದೆ. ಹೊಸ ಲೈಸನ್ಸ್ ನೀಡಿಕೆಗಾಗಿ ಮತ್ತೆ ನಿಯಮ ಬದಲಾವಣೆ ಮಾಡುವ ಅಗತ್ಯವಿಲ್ಲ ಎಂದರು.
ಇಲಾಖೆಗೆ ಹೊಸ ಕಾಯಕಲ್ಪ ನೀಡಲು ಪ್ರಯತ್ನ ನಡೆದಿದೆ. ಎರಡೂವರೆ ಸಾವಿರ ಹುದ್ದೆಗಳು ಖಾಲಿ ಇದ್ದು, ನೇರ ನೇಮಕಾತಿ ಮುಖಾಂತರ ಭರ್ತಿ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಇಲಾಖೆ ಅಧಿಕಾರಿಗಳ ಮಕ್ಕಳಿಗೂ ಕಲ್ಯಾಣ ಕಾರ್ಯಕ್ರಮ ರೂಪಿಸುವುದಾಗಿ ಚರ್ಚೆ ಮಾಡಲಾಗಿದೆ ಎಂದು ಸಚಿವ ಸತೀಶ್ ಹೇಳಿದರು.

ಕಳ್ಳಭಟ್ಟಿಯಲ್ಲಿ ನಿರತರಾಗಿರುವ ಕುಟುಂಬಗಳಿಗೆ ಪರ್ಯಾಯ ಉದ್ಯೋಗ ಸೃಷ್ಟಿಮಾಡುವ ಮತ್ತು ಪುನರ್ವಸತಿ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಲಾಯಿತು. ಕಳ್ಳಭಟ್ಟಿಯಲ್ಲಿ ನಿರತವಾಗಿರುವ 80 ಹಳ್ಳಿಗಳನ್ನು ಗುರುತಿಸಲಾಗಿದೆ ಎಂದರು.
ಅಬಕಾರಿ ಇಲಾಖೆ ಸರ್ಕಾರಕ್ಕೆ ಆದಾಯ ತರುವ ಪ್ರಮುಖ ಇಲಾಖೆಯಾಗಿದೆ. ಆದರೆ, ಇತರೆ ಇಲಾಖೆಗಳು ಆದಾಯದ ಜತೆಗೆ ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಳ್ಳುತ್ತವೆ. ಅದೇ ರೀತಿ ಇನ್ನು ಮುಂದೆ ಅಬಕಾರಿ ಇಲಾಖೆ ಮೂಲಕವೂ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಸುಮಾರು 3,914 ವೈನ್ ಸ್ಟೋರ್ ಗಳು, 3,531 ಬಾರ್ ಹಾಗೂ ರೆಸ್ಟೋರೆಂಟ್ ಗಳು ಲೈಸನ್ ಪಡೆದಿವೆ. ಬೆಂಗಳೂರಿನಲ್ಲಿ ಅಧಿಕೃತವಾಗಿ 1,346 ಬಾರ್ ಗಳು, 857 ವೈನ್ ಸ್ಟೋರ್ ಗಳಿದೆ.
ಡಿಸ್ಕೋಥೆಕ್, ಡ್ಯಾನ್ಸ್ ಬಾರ್, ಮಾಲ್ ಸಂಸ್ಕೃತಿ, ಸ್ಟಾರ್ ಹೋಟೆಲ್ ಗಳು ಹೆಚ್ಚಿದ್ದಂತೆ ಬಾರ್ ಗಳ ಲೈಸನ್ಸ್ ಗಾಗಿ ಸರ್ಕಾರದ ಮೇಲೆ ಒತ್ತಡ ಬೀಳುವುದು ಸಹಜವಾಗಿದೆ. ಸರ್ಕಾರ ಕೂಡಾ ಲೈಸನ್ಸ್ ನೀಡಿಕೆಯಲ್ಲಿ ಸಮತೋಲನ ಕಾಯ್ದುಕೊಂಡು ಬಂದಿದೆ.
1992ರಲ್ಲಿ ವೀರಪ್ಪ ಮೊಯ್ಲಿ ಸರ್ಕಾರ ಅಬಕಾರಿ ನೀತಿಗೆ ತಿದ್ದುಪಡಿ ಮಾಡಿ ಹೊಸ ಬಾರ್ ಗಳಿಗೆ ಲೈಸನ್ ನೀಡಿಕೆಯನ್ನು ನಿಲ್ಲಿಸಿದ್ದರು. ಹೀಗಾಗಿ ಲೈಸನ್ಸ್ ಪಡೆದ ಬಾರ್ ಮಾಲೀಕರು ತಮಗೆ ಸಿಕ್ಕಿರುವ ಪರ್ಮೀಟನ್ನು ಕೋಟ್ಯಂತರ ರುಪಾಯಿಗಳಿಗೆ ವರ್ಗಾವಣೆ ಮಾಡಿಕೊಂಡಿರುವ ಉದಾಹರಣೆಗಳು ಸಿಕ್ಕಿದೆ.
ಅಬಕಾರಿ ಇಲಾಖೆ ನೀಡಿದ ಮಾಹಿತಿ ಪ್ರಕರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(BIA) ರಸ್ತೆ ಪ್ರದೇಶದ ಲೈಸನ್(CL9-ಬಾರ್ ಹಾಗೂ ರೆಸ್ಟೋರೆಂಟ್) ಪರ್ಮೀಟ್ ಸುಮಾರು 1.06 ಕೋಟಿ ರು ಗೆ ಮಾರಾಟವಾಗಿದೆ. ಮಿಕ್ಕಂತೆ CL-9 ಲೈಸನ್ ಗೆ 80-90 ಲಕ್ಷ ರು ಬೆಲೆ ಇದೆ. ವೈನ್ ಸ್ಟೋರ್ ಲೈಸನ್ (CL-2) ಬೆಲೆ 70 ಲಕ್ಷ ರು ಇದೆ. ಈ ಬೆಲೆ ಕೂಡಾ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗಲಿದೆ.
ಈ ಹಿಂದಿನ ಅಬಕಾರಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಹೊಸ ಲೈಸನ್ಸ್ ನೀಡಿಕೆಗೆ ಒಲವು ತೋರಿದ್ದರು. ಹೆಚ್ಚಾಗಿರುವ ಜನಸಂಖ್ಯೆ, ಸರ್ಕಾರದ ಬೊಕಸಕ್ಕೆ ಭರ್ಜರಿ ಆದಾಯ, ಬಾರ್ ಗಳಿಗಾಗಿ ಬೇಡಿಕೆ ಮುಂತಾದ ಕಾರಣ ನೀಡಿದ್ದರು. ಆದರೆ, ಅಂದಿನ ಸಿಎಂ ಯಡಿಯೂರಪ್ಪ ಅವರು ಇದಕ್ಕೆ ಒಪ್ಪಿರಲಿಲ್ಲ. ಮತ ಬ್ಯಾಂಕ್ ರಾಜಕೀಯದಿಂದ ಎಲ್ಲಾ ಸರ್ಕಾರಗಳು ಹೊಸ ಲೈಸನ್ಸ್ ನೀಡಿಕೆಗೆ ಹಿಂಜರಿಯುತ್ತಲೇ ಬಂದಿರುವುದು ಸ್ಪಷ್ಟವಾಗಿದೆ.












Click it and Unblock the Notifications