ಮೈಸೂರು-ಗೋವಾ ವಿಮಾನ ಹಾರಾಟ ಸಾಧ್ಯವೇ?

ಗೋವಾಗೆ ಬರುವ ಪ್ರವಾಸಿಗರು ಮೈಸೂರಿಗೆ ಬರುತ್ತಿಲ್ಲ. ಗೋವಾದಿಂದ ಮೈಸೂರಿಗೆ ಮಂಗಳೂರು ಮಾರ್ಗವಾಗಿ ವಿಮಾನ ಹಾರಾಟ ಆರಂಭಿಸಿದರೆ ಪ್ರವಾಸಿಗರನ್ನು ಸೆಳೆಯಬಹುದು ಎಂದು ಸಚಿವ ದೇಶಪಾಂಡೆ ಹೇಳಿದ್ದಾರೆ. ಪ್ರವಾಸೋದ್ಯಮ ಕೇಂದ್ರಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಹೊಸ ಪ್ರವಾಸೋದ್ಯಮ ನೀತಿ ರೂಪಿಸಲಾಗುವುದು ಎಂದು ಹೇಳಿದರು.
ಮೈಸೂರು ವಿಮಾನ ಹಾರಾಟದ ಕಥೆ: ಮೈಸೂರಿನಲ್ಲಿ ವಿಮಾನ ನಿಲ್ದಾಣವಿದ್ದರೂ ವಿಮಾನಗಳೇ ಹಾರಾಡುತ್ತಿಲ್ಲ ಎಂಬ ಕೊರಗು ಬಹಳ ವರ್ಷಗಳಿಂದ ಇತ್ತು. 2010 ಅಕ್ಟೋಬರ್ 1ರಿಂದ ವಿಜಯ್ ಮಲ್ಯ ಒಡೆತನದ ಕಿಂಗ್ಫಿಷರ್ ವಿಮಾನ ಮೈಸೂರಿನಿಂದ ಬೆಂಗಳೂರು ಮೂಲಕ ಚೆನ್ನೈಗೆ ಹಾರಾಟ ನಡೆಸಿತು.
ಮೈಸೂರು ನಗರದ ದಕ್ಷಿಣಕ್ಕೆ ನಂಜನಗೂಡಿಗೆ ತೆರಳುವ ರಸ್ತೆಯಲ್ಲಿ ಸುಮಾರು ಹತ್ತು ಕಿ.ಮೀ. ದೂರದಲ್ಲಿರುವ ಮಂಡಕಳ್ಳಿಯಲ್ಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಕಾಣಲು 2010ರ ತನಕ ಕಾಯಬೇಕಾಯಿತು. ಆದರೆ, 2005ರಲ್ಲೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ಮತ್ತು ರಾಜ್ಯ ಸರ್ಕಾರದ ನಡುವೆ ಒಡಂಬಡಿಕೆ ಪತ್ರ (MoU)ಕ್ಕೆ ಸಹಿ ಹಾಕಲಾಗಿತ್ತು.
ಪ್ರತಿದಿನ ಮಧ್ಯಾಹ್ನ 12ಗಂಟೆಗೆ ಬೆಂಗಳೂರಿನಿಂದ ಹೊರಟು 12.45ಕ್ಕೆ ಮೈಸೂರು ತಲುಪಿ, ಬಳಿಕ ಮೈಸೂರಿನಿಂದ 2.45ಕ್ಕೆ ಹೊರಟು 3.30ಕ್ಕೆ ಬೆಂಗಳೂರು ತಲುಪಿ ಅಲ್ಲಿಂದ ಮತ್ತೆ ಚೆನ್ನೈಗೆ ಹೊರಡುತ್ತಿತ್ತು. ಆದರೆ, ನಂತರ ಕಿಂಗ್ ಫಿಷರ್ ಸಂಸ್ಥೆ ನಷ್ಟ ಅನುಭವಿಸಿದ ನಂತರ ಹಾರಾಟ ನಿಲ್ಲಿಸಲಾಯಿತು.
ಹಾಲಿ ರನ್ ವೇ 1.7ಕಿ.ಮೀ. ಉದ್ದವಿದ್ದು, ಇದು 50-60 ಆಸನಗಳ ಸಾಮರ್ಥ್ಯದ ಎಟಿಆರ್ 72 ವಿಮಾನ ಹಾರಾಟಕ್ಕೆ ಮಾತ್ರ ಸೂಕ್ತವಾಗಿದೆ ಎನ್ನಬಹುದಾದರೂ ಸುರಕ್ಷತೆ ಬಗ್ಗೆ ಅಪಸ್ವರ ಇದೆ. ಎರಡನೇ ಹಂತದಲ್ಲಿ ಈ ರನ್ವೇಯನ್ನು 2.4ಕಿ.ಮೀ.ವಿಸ್ತರಿಸಲು ನಿರ್ಧರಿಸಲಾಗಿದೆ. ಅಲ್ಲದೆ ಇದಕ್ಕಾಗಿ 333 ಎಕರೆ ಭೂಮಿ ಅಗತ್ಯವಿದ್ದು, ಇದರಲ್ಲಿ 188 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೂಚಿಸಿದ್ದರು.
ಆದರೆ, 240 ಎಕರೆ ಸ್ವಾದೀನ ಪಡಿಸಿಕೊಳ್ಳಲಾಯಿತು. ಸುಮಾರು 200 ಕೋಟಿ ರು ವೆಚ್ಚದಲ್ಲಿ ವಿಮಾನ ನಿಲ್ದಾಣದ ಮೂಲ ಸೌಕರ್ಯಗಳ ಸುಧಾರಣೆಗೆ ಚಾಲನೆ ನೀಡಲಾಯಿತು. ಮೈಸೂರು ನಂಜನಗೂಡು ಹೆದ್ದಾರಿ ಅಡ್ಡ ಬರುವುದರಿಂದ ಎರಡನೇ ಹಂತದ ಕಾಮಗಾರಿ ವಿಳಂಬವಾಯಿತು. ಸ್ಥಳೀಯ ಶಾಸಕರು, ಸಚಿವರ ಹಿತಾಸಕ್ತಿಯೂ ಸೇರಿ ಮೈಸೂರಿನಲ್ಲಿ ವಿಮಾನವೂ ಇಲ್ಲ ಕಾಮಗಾರಿಯೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಯಿತು.
ಕಳೆದ ದಸರೆ ಸಂದರ್ಭದಲ್ಲಿ ಸ್ಪೈಸ್ ಜೆಟ್ ವಿಮಾನಗಳು ಚೆನ್ನೈ ನಿಂದ ಬೆಂಗಳೂರು ಮಾರ್ಗವಾಗಿ ಮೈಸೂರು ತಲುಪುವ ಸಾಹಸ ಮಾಡಿದರೂ ಮಂಡಕಳ್ಳಿಯಲ್ಲಿ ವಿಮಾನ ಹಾರಾಟ ಇನ್ಮುಂದೆ ಸಾಧ್ಯವೇ ಎಂಬ ಪ್ರಶ್ನೆ ಇದ್ದೇ ಇದೆ.
ಇದರ ಜೊತೆಗೆ ಮಾನ್ಯ ಸಚಿವ ದೇಶಪಾಂಡೆ ಅವರು, ಮಾಜಿ ಪ್ರಧಾನಿ ದೇವೇಗೌಡರ ಕನಸಾದ ಹಾಸನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಏರ್ ಪೋರ್ಟ್, ಚಿಕ್ಕಮಗಳೂರು, ಗದಗ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣ, ಶಿವಮೊಗ್ಗದ ಗ್ರೀನ್ ಏರ್ ಪೋರ್ಟ್ ಕಡೆ ಕೂಡಾ ಗಮನ ಹರಿಸಿದರೆ ಒಳ್ಳೆಯದು.
ಖಾಸಗಿ ವಿವಿ ಪುನರ್ ಪರಿಶೀಲನೆ: ಬಿಜೆಪಿ ಸರ್ಕಾರ ಖಾಸಗಿ ವಿವಿಗಳಿಗೆ ನೀಡಿರುವ ಅನುಮತಿ ಬಗ್ಗೆ ಮರುಪರಿಶೀಲನೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು. ವಿವಿಗಳಿಗೆ ಅನುಮತಿ ನೀಡುವಾಗ ಮೂಲ ಸೌಕರ್ಯಗಳಿರುವ ಬಗ್ಗೆ ಖಚಿತಪಡಿಸಿಕೊಂಡಿದೆಯೇ ಅಥವಾ ಯಾವುದಾದರೂ ಅಕ್ರಮ ನಡೆದಿದೆಯೇ ಎಂದು ಪರಿಶೀಲಿಸಲಾಗುವುದು. ಎಲ್ಲವೂ ಕ್ರಮಬದ್ಧವಾಗಿದ್ದರೆ ಅನುಮತಿ ಮುಂದುವರಿಸಲಾಗುವುದು ಎಂದರು.












Click it and Unblock the Notifications