ಮೋದಿ ವಿರುದ್ಧ ಕೆಂಪುಬಾವುಟ ಹಾರಿಸಿದ ಅಡ್ವಾಣಿ
ನವ ದೆಹಲಿ, ಮೇ 25: ಒಂದೆಡೆ ಮುಂದಿನ ವರ್ಷದ ಲೋಕಸಭೆ ಚುನಾವಣೆಗೆ ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಈಗಿಂದಲೇ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿ, ಮುಂಚೂಣಿಗೆ ತರಬೇಕು ಎಂಬ ಮಾತುಗಳು ಕೇಳಿಬರುತ್ತಿರುವಾಗ ಆ ವಿಷಯವಾಗಿಯೇ ಪಕ್ಷದಲ್ಲಿ ಹಿರಿಯ ನಾಯಕರು ವಿರೋಧಾಭಾಸವಾಗಿ ನಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಪಕ್ಷದ ಸಕ್ರಿಯ ಅತ್ಯಂತ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರೇ ಕೆಂಪುಬಾವುಟ ಹಾರಿಸಿದ್ದಾರೆ.
ಅದೂ ಪಕ್ಷದ ಪ್ರಧಾನಿ ಅಭ್ಯರ್ಥಿಯೆಂದೇ ಎಲ್ಲೆಡೆ ಚಾಲ್ತಿಗೆ ಬಂದಿರುವ ನರೇಂದ್ರ ಮೋದಿಗೆ ಪೆಟ್ಟು ನೀಡುವಂತಹ ಪ್ರಕಟಣೆಯೊಂದನ್ನು ಆಡ್ವಾಣಿ ನೀಡಿದ್ದಾರೆ. ಇದರಿಂದ ಪಕ್ಷ ತೀವ್ರ ಮುಜುಗುರ ಮತ್ತು ಹಿನ್ನಡೆ ಅನುಭವಿಸಿದೆ.

ಭ್ರಷ್ಟಾಚಾರ ವಿರೋಧಿ ಎಂದು ಪರಿಗಣಿತರಾಗಿರುವ ಆಡ್ವಾಣಿ ಅವರು ಭ್ರಷ್ಟಾಚಾರದ ಕಳಂಕ ಹೊತ್ತ ನಿತಿನ್ ಗಡ್ಕರಿ ಅವರನ್ನು ಈ ಹಿಂದೆ ಪಕ್ಷದ ಅಧ್ಯಕ್ಷ ಸ್ಥಾನದಿಂದ ಿಳಿಸಿದ್ದರು. ಈಗ ಅವರನ್ನೇ ಮತ್ತೆ ಮುಂಚೂಣಿಗೆ ತಂದು ಆಯಕಟ್ಟಿನ ಸ್ಥಾನದಲ್ಲಿ ಪ್ರತಿಷ್ಠಾಪಿಸುವ ಮಾತನ್ನಾಡಿದ್ದಾರೆ.
ಮೂಲಗಳ ಪ್ರಕಾರ, ಬಿಜೆಪಿ ವಯೋವೃದ್ಧ ಮತ್ತು ಗೌರವಾನ್ವಿತ ನಾಯಕರಾದ ಅಡ್ವಾಣಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಪಕ್ಷದ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಚುನಾವಣಾ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸುವಂತೆ ಒತ್ತಾಯಿಸಿದ್ದಾರೆ ಎಂದು ಇಂಗ್ಲಿಷ್ ಸುದ್ದಿವಾಹಿನಿಯೊಂದು ವರದಿ ಮಾಡಿದೆ.
5 ರಾಜ್ಯಗಳ ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷದ ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ನಿತಿನ್ ಗಡ್ಕರಿ ಅವರನ್ನು ನೇಮಿಸುವಂತೆ ಅಡ್ವಾಣಿ ಒತ್ತಾಯಿಸಿದ್ದಾರಂತೆ. ಆ ಮೂಲಕ ಗುಜರಾತ್ ಸಿಎಂ ನರೇಂದ್ರ ಮೋದಿಯನ್ನು ಚುನಾವಣಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಲು ಹೊರಟಿರುವ ಪಕ್ಷದೊಳಗಿನ ಯತ್ನಕ್ಕೆ ಬ್ರೆಕ್ ಹಾಕುವ ಯತ್ನ ಮಾಡಿದ್ದಾರೆ.
ಅಡ್ವಾಣಿಯ ಈ ಕ್ರಮ ಮೋದಿ ವಿರುದ್ಧ ಬಂಡೆದ್ದಿರುವ ಸ್ಪಷ್ಟ ಉದಾಹರಣೆ ಎಂದೇ ಭಾವಿಸಲಾಗಿದೆ. ಇದು ಮುಂದಿನ ದಿನಗಳಲ್ಲಿ ಅಡ್ವಾಣಿ ಮತ್ತು ಮೋದಿ ನಡುವಿನ ಸಮರಕ್ಕೆ ನಾಂದಿ ಹಾಡುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗಿದೆ.
ಇತ್ತೀಚಿಗೆ ಮುಕ್ತಾಯಗೊಂಡ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ನರೇಂದ್ರ ಮೋದಿ, ಹಲವು ಕಡೆ ಪ್ರಚಾರ ಭಾಷಣ ಮಾಡಿದ್ದರಾದರೂ, ಅದು ಪಕ್ಷದ ಪರ ಮತ ಸೆಳೆಯುವಂತೆ ಮಾಡುವಲ್ಲಿ ಸಫಲವಾಗಿಲ್ಲ. ಹೀಗಾಗಿ ಅತ್ಯಂತ ಪ್ರಮುಖವಾಗಿರುವ 5 ರಾಜ್ಯಗಳ ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ, ಗೆಲುವು ತಂದುಕೊಂಡುವ ನಾಯಕನ ನೇಮಕ ಅತ್ಯಗತ್ಯವಾಗಿದೆ. ಇಂತಹ ಸಾಮರ್ಥ್ಯ ನಿತಿನ್ ಗಡ್ಕರಿ ಅವರಲ್ಲಿದೆ ಎಂದು ಪತ್ರದಲ್ಲಿ ಅಡ್ವಾಣಿ ದಾಖಲಿಸಿದ್ದಾರೆ ಎನ್ನಲಾಗಿದೆ.
ಮೋದಿಗೆ ವಿರೋಧ ಏಕೆಂದರೆ:
ಒಂದು ವೇಳೆ 5 ರಾಜ್ಯಗಳ ಚುನಾವಣೆಗೂ ಮುನ್ನ, ಚುನಾವಣಾ ಸಮಿತಿಗೆ ಮೋದಿಯನ್ನು ಅಧ್ಯಕ್ಷರನ್ನಾಗಿ ಮಾಡಿ, ಅದರಲ್ಲಿ ಬಿಜೆಪಿ ಏನಾದರೂ ಗೆಲುವು ಸಾಧಿಸಿದರೆ, ಅದು ಮೋದಿಗೆ ಭಾರೀ ಅನುಕೂಲ ಮಾಡಿಕೊಡಲಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು, ಲೋಕಸಭೆಯ ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿಯೂ ಮೋದಿ ನೇಮಿಸುವ ಸಾಧ್ಯತೆ ಇರುತ್ತದೆ.
ಅದೊಮ್ಮೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಥವಾ ಎನ್ಡಿಎಗೆ ಬಹುಮತ ಬಂದರೆ ಮೋದಿ ಅವರನ್ನೇ ಪ್ರಧಾನಿಯನ್ನಾಗಿ ನೇಮಿಸುವ ಎಲ್ಲಾ ಸಾಧ್ಯತೆಗಳೂ ಇವೆ. ಹಾಗಾಗಿ ಮೋದಿಗೆ ಈ ಸ್ಥಾನ ತಪ್ಪಿಸಲು ಅಡ್ವಾಣಿ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.












Click it and Unblock the Notifications