ಕಾಂಗ್ರೆಸಿನಲ್ಲಿ ಭಾರೀ ಬದಲಾವಣೆ, ರಾಜ್ಯದಿಂದ ಯಾರು?
ನವದೆಹಲಿ, ಮೇ 17: ಮೂರು ರಾಜ್ಯದ ವಿಧಾನಸಭಾ ಚುನಾವಣೆ ಮತ್ತು ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ದತೆ ನಡೆಸಲು ಎಐಸಿಸಿ ರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ ಎಂದು ಖಚಿತ ಮೂಲಗಳಿಂದ ವರದಿಯಾಗಿದೆ.
ಮುಖ್ಯವಾಗಿ ಪಕ್ಷದಲ್ಲಿ ಮತ್ತು ಸರಕಾರದಲ್ಲಿ ಎರಡೆರಡು ಹುದ್ದೆಯನ್ನು ನಿಭಾಯಿಸುತ್ತಿರುವ ಕೆಲ ಪ್ರಮುಖರಿಗೆ ಒಂದು ಹುದ್ದೆಯಿಂದ ಮುಕ್ತಿ ನೀಡಿ, ಹೊಸ ಮತ್ತು ಯುವ ಮುಖಗಳನ್ನು ಆ ಜಾಗದಲ್ಲಿ ತಂದು ಕೂರಿಸಲು ಎಐಸಿಸಿ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಕೇಂದ್ರದ ಯುಪಿಎ ಸರಕಾರ ಇದೇ 22ರಂದು ನಾಲ್ಕು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಪಕ್ಷದ ಆಡಳಿತ ಮಂಡಳಿಯಲ್ಲಿ (ಕಾರ್ಯಕಾರಿಣಿ ಸಮಿತಿ) ಪ್ರಮುಖ ಬದಲಾವಣೆ ಮಾಡಿ ಯುವಕರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ಕಾಂಗ್ರೆಸ್ ಯುವರಾಜ ನಿರ್ಧರಿಸಿದ್ದಾರೆ.
ಕಳೆದ ಅಕ್ಟೋಬರಿನಲ್ಲಿ ಸಂಪುಟ ಪುನಾರಚನೆಯ ವೇಳೆ ತಮ್ಮಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರಮುಖರಲ್ಲಿ ಮತ್ತೆ ಕರೆಸಿಕೊಳ್ಳುವ ಬಗ್ಗೆ ರಾಹುಲ್ ಗಾಂಧಿ ಮುನ್ಸೂಚನೆ ನೀಡಿದ್ದಾರೆ. ಇದೇ ವೇಳೆ ಕೆಲವು ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಬದಲಾವಣೆ ಕೂಡಾ ನಿರೀಕ್ಷಿಸಲಾಗಿದೆ.
'ಒಂದು ವ್ಯಕ್ತಿಗೆ ಒಂದು ಹುದ್ದೆ' ನಿಯಮವನ್ನು ಮತ್ತೆ ಜಾರಿಗೆ ತರಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಇದೇ ಅಕ್ಟೋಬರ್ ತಿಂಗಳಲ್ಲಿ ಮಹಾರಾಷ್ಟ್ರ ಮತ್ತು ಬರುವ ಫೆಬ್ರವರಿಯಲ್ಲಿ ಜಾರ್ಖಂಡ್ ಮತ್ತು ಹರ್ಯಾಣ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಈ ಬದಲಾವಣೆಗೆ ಕಾಂಗ್ರೆಸ್ ಮುಂದಾಗಿದೆ ಎನ್ನಲಾಗುತ್ತಿದೆ.
ಪಕ್ಷದಲ್ಲಿ ಮುಂದಾಗಬಹುದಾದ ಪ್ರಮುಖ ಬದಲಾವಣೆ ಮತ್ತು ರಾಜ್ಯದಿಂದ ಯಾರು ಕಾಂಗ್ರೆಸ್ ಮಂಡಳಿಯಲ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನುವುದನ್ನು ಸ್ಲೈಡಿನಲ್ಲಿ ನೋಡಿ..

ಗುಲಾಂನಬಿ ಆಜಾದ್
ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೇಂದ್ರ ಆರೋಗ್ಯ ಸಚಿವರಾಗಿರುವ ಗುಲಾಂನಬಿ ಆಜಾದ್ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಒರಿಸ್ಸಾದಲ್ಲಿ ಪಕ್ಷದ ಮುಖ್ಯಸ್ಥ. ಆಜಾದ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಕ್ತಿಗೊಳಿಸಬಹುದು.

ಮುಕುಲ್ ವಾಸ್ನಿಕ್
ಮಹಾರಾಷ್ಟ್ರದ ದಲಿತ ಮುಖಂಡ, ಕೇಂದ್ರ ಸಚಿವ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿರುವ ವಾಸ್ನಿಕ್ ರಾಜಸ್ಥಾನ ಮತ್ತು ದೆಹಲಿಯಲ್ಲಿ ಪಕ್ಷದ ಮುಖ್ಯಸ್ಥರಾಗಿ ಕೂಡಾ ಕೆಲಸ ನಿರ್ವಹಿಸುತ್ತಿದ್ದಾರೆ. ಇವರನ್ನೂ ಕೂಡಾ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಕ್ತಿಗೊಳಿಸಬಹುದು.

ಪೃಥ್ವಿರಾಜ್ ಚವಾಣ್
ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಚವಾಣ್ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ನಿರ್ಗಮಿಸಬಹುದು.

ವೀರಪ್ಪ ಮೊಯ್ಲಿ
ಕೇಂದ್ರ ಇಂಧನ ಸಚಿವ ಮತ್ತು ಆಂಧ್ರಪ್ರದೇಶ, ಅಸ್ಸಾಂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾಗಿರುವ ಮೊಯ್ಲಿ ಇಂಧನ ಸಚಿವರಾಗಿ ಮುಂದುವರಿಯಬಹುದು.

ಅಂಬಿಕಾ ಸೋನಿ
ಕಳೆದ ಅಕ್ಟೋಬರ್ನಲ್ಲಿ ಸಂಪುಟ ಪುನಾರಚನೆ ವೇಳೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಅಂಬಿಕಾ ಸೋನಿ ಅವರಿಗೂ ಪಕ್ಷ ಪ್ರಮುಖ ಹುದ್ದೆ ನೀಡವುದು ನಿಶ್ಚಿತ ಎನ್ನಲಾಗುತ್ತಿದೆ.

ಕೃಷ್ಣ ಭೈರೇಗೌಡ
ಬೆಂಗಳೂರು ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಮತ್ತು ರಾಹುಲ್ ಗಾಂಧಿ ಆಪ್ತರಲ್ಲಿ ಒಬ್ಬರಾಗಿರುವ ಕೃಷ್ಣ ಭೈರೇಗೌಡ ಅವರಿಗೆ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಸೂಕ್ತ ಸ್ಥಾನಮಾನ ಸಿಗಬಹುದೆಂದು ನಿರೀಕ್ಷಿಸಲಾಗುತ್ತಿದೆ.

ಜ್ಯೋತಿರಾಧಿತ್ಯ ಸಿಂಧ್ಯ
ಪಕ್ಷದ ಇನ್ನೋರ್ವ ಯುವ ಮುಖಂಡ, ಕೇಂದ್ರ ರಾಜ್ಯ ಸಚಿವ ಮತ್ತು ಗುಣ ಕ್ಷೇತ್ರದ ಸಂಸದರಾಗಿರುವ ಜ್ಯೋತಿರಾಧಿತ್ಯ ಸಿಂಧ್ಯ ಅವರು ಪಕ್ಷದ ಆಡಳಿತ ಮಂಡಳಿಗೆ ಸೇರುವ ಎಲ್ಲಾ ಸಾಧ್ಯತೆಗಳಿವೆ.












Click it and Unblock the Notifications