ಗೌಡ್ರ ಮಂತ್ರ ಪಠಣ, ರೇವಣ್ಣ ಮತಯಂತ್ರ ಅಲುಗಾಟ

ಹಾಸನ ಜಿಲ್ಲೆಯಲ್ಲಿ ತಮ್ಮ ಮತ ಹಾಕಲು ದೇವೇಗೌಡರೊಂದಿಗೆ ಆಗಮಿಸಿದ್ದ ಪುತ್ರ ರೇವಣ್ಣ ಅವರು ಮತ ಹಾಕುವ ಸಂದರ್ಭದಲ್ಲಿ ಮತ ಯಂತ್ರವನ್ನು 3 ಬಾರಿ ತಿರುಗಿಸಿ ಮತ ಹಾಕಿದ್ದಾರೆ. ರೇವಣ್ಣ ಅವರು ಏಕಾ ಏಕಿ ಮತಯಂತ್ರ ಇದ್ದ ಟೇಬಲ್ ತಿರುಗಿಸಿದ್ದು ಕಂಡು ಸ್ಥಳದಲ್ಲಿದ್ದ ಚುನಾವಣಾ ಸಿಬ್ಬಂದಿಗಳೇ ಕಕ್ಕಾಬಿಕ್ಕಿಯಾದರು.
ಮೊದಲಿಗೆ ಬೆಳಕು ಬೀಳಲು ಎಂದು ರೇವಣ್ಣ ಅವರು ಟೇಬಲನ್ನು ತಿರುಗಿಸುತ್ತಿದ್ದಾರೆ ಎಂದು ಅಧಿಕಾರಿಗಳು ಅಂದುಕೊಂಡರು. ಆದರೆ ಯಾವಾಗ ರೇವಣ್ಣ ಅವರು 3 ಬಾರಿ ತಿರುಗಿಸಿದಾಗ ಇದು ನಿಜವಾಗಲೂ ವಾಸ್ತುಶಾಸ್ತ್ರದ ಎಫೆಕ್ಟ್ ಎಂದು ಎಲ್ಲರಿಗೂ ಮನವರಿಕೆಯಾಯಿತು. ಇದಕ್ಕೂ ಮುನ್ನ ರೇವಣ್ಣ ಅವರ ತಾಯಿ, ದೇವೇಗೌಡರ ಪತ್ನಿ ಚೆನ್ನಮ್ಮ ಅವರು ತಮ್ಮ ಮತ ಚಲಾಯಿಸಿದ್ದರು.
ಇದೇ ಸಂದರ್ಭದಲ್ಲಿ ಮತದಾನ ಮಾಡಲು ತಮ್ಮ ಪತ್ನಿ ಚೆನ್ನಮ್ಮ, ಪುತ್ರನೊಂದಿಗೆ ಮತಗಟ್ಟೆಗೆ ಆಗಮಿಸಿದ್ದ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡ ಅವರು ಸುಮಾರು ಅರ್ಧಗಂಟೆಗೂ ಅಧಿಕ ಕಾಲ ಕಾರಿನಲ್ಲಿಯೇ ಕುಳಿತಿದ್ದರು. ರಾಹುಕಾಲ ಕಳೆದ ನಂತರವೇ ಅವರು ಕಾರಿನಿಂದ ಇಳಿದು ಮತಗಟ್ಟೆಯ ಒಳ ಪ್ರವೇಶಿಸಿದರು. ಸುಮಾರು ಅರ್ಧಗಂಟೆಗಳ ಕಾಲ ಕಾರಿನಲ್ಲಿಯೇ ಕುಳಿತಿದ್ದು ಗೌಡರು ದೇವರ ನಾಮ ಮತ್ತು ದೇವಿ ಅಷ್ಟೋತ್ತರ ಮುಂತಾದ ಮಂತ್ರಗಳನ್ನು ಪಠಿಸುತ್ತಿದ್ದದ್ದು ವಿಶೇಷವಾಗಿತ್ತು.
ಹೊಳೆ ನರಸೀಪುರ ಕ್ಷೇತ್ರದ ಅಭ್ಯರ್ಥಿ ಎಚ್ ಡಿ ರೇವಣ್ಣ ಅವರಿಗೆ ಮಹಿಳಾ ಸ್ಪರ್ಧಿಗಳಿಂದ ಸೋಲು ಉಂಟಾಗುವ ಸಾಧ್ಯತೆಯಿದೆ ಎಂದು ಜ್ಯೋತಿಷಿಗಳು ಹೇಳಿದ್ದು ಗೌಡರ ಕುಟುಂಬದ ಆತಂಕಕ್ಕೆ ಕಾರಣವಾಗಿದೆ. ಹೊಳೆನರಸೀಪುರದಲ್ಲಿ ಬಿಜೆಪಿಯಿಂದ ಹೇಮಂತ್ ಕುಮಾರ್ ಗೌಡ ಕಣದಲ್ಲಿದ್ದರೆ, ಕಾಂಗ್ರೆಸ್ ನಿಂದ ಅನುಪಮ ಎಸ್. ಜಿ ಹಾಗೂ ಕೆಜೆಪಿಯಿಂದ ಎಚ್ ಎಲ್ ಯಮುನ ಅವರು ರೇವಣ್ಣ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಪ್ರತಿಷ್ಠಿತ ಕಣ ಉಳಿಸಿಕೊಳ್ಳಲು ಪಣ ತೊಟ್ಟಿರುವ ಜೆಡಿಎಸ್ ದೇವರು ದಿಂಡರ ಮೊರೆ ಹೊಕ್ಕಿದ್ದರಲ್ಲಿ ಆಶ್ಚರ್ಯವೇನಿಲ್ಲ. [ ಹಾಸನ ಅಭ್ಯರ್ಥಿಗಳ ಪಟ್ಟಿ ನೋಡಿ ]
ಆದರೆ, ಜೆಡಿಎಸ್ ಮುಖಂಡರ ಹಠಾತ್ ನಡವಳಿಕೆ ಚುನಾವಣಾ ನೀತಿ ಉಲ್ಲಂಘಿಸಿದೆಯೇ? ಇಲ್ಲವೇ? ಎಂಬ ಗೊಂದಲ ಚುನಾವಣಾಧಿಕಾರಿಗಳ ಮನದಲ್ಲಿ ಇನ್ನೂ ಪ್ರಶ್ನೆಯಾಗಿ ಉಳಿದಿದೆ. ಮತದಾನಕ್ಕೂ ಮುನ್ನ ಮತಯಂತ್ರಗಳಿಗೆ ಪೂಜೆ ಮಾಡುವ ಹಾಗಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಅನಿಲ್ ಕುಮಾರ್ ಝಾ ಅವರು ಖಡಾಖಂಡಿತವಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications