ಕರ್ನಾಟಕದ (ಅ)ರಾಜಕೀಯಕ್ಕೆ ಮದ್ದು ಉಂಟೆ?
ಭಾರತ ದೇಶದ ಅತ್ಯುನ್ನತ ತತ್ರಾಂಶ ರಫ್ತು ಹಣ ಗಳಿಸುವ ರಾಜ್ಯ. ಭಾರತದ ಅತಿ ಸುಸಂಸ್ಕೃತ ಮತ್ತು ಶಾಂತ ಜನರನ್ನು ಹೊಂದಿರುವ ರಾಜ್ಯ. ಭಾರತಕ್ಕೆ ವಿಶ್ವಮಟ್ಟದಲ್ಲಿ ಕೀರ್ತಿ ತಂದು ಕೊಟ್ಟ ಜ್ಞಾನ ನಗರಿ ಬೆಂಗಳೂರು ಇರುವ ರಾಜ್ಯ. ಭಾರತದ ಜನಸಂಖ್ಯೆ ವಿಸ್ಪೋಟ ಸಮಯದಲ್ಲಿ, ಸರಿಯಾದ ಮಟ್ಟ ತಲುಪಿ ಬೇರೆ ರಾಜ್ಯಗಳಿಗೆ ಆದರ್ಶವಾದ ರಾಜ್ಯ. ಹಿಮಾಲಯದ ಹೊರಗೆ ಅತ್ಯಂತ ಮಹತ್ವವಾದ ಜೀವ ಜಂತು, ಮತ್ತು ಕಾಡು ಹೊಂದಿರುವ ರಾಜ್ಯ. ದೇಶದ ಎಲ್ಲೆದೆಯಿಂದ ಬರುವ ಜನರನ್ನು ಸ್ವಾಗತಿಸುವ ರಾಜ್ಯ...
ಆದರೆ ಸುಭದ್ರ ಸರಕಾರ ನೀಡುವಲ್ಲಿ ಮತ್ತು ರಾಜ್ಯದ ಹಿತ ಕಾಪಾಡುವಲ್ಲಿ ಮಾತ್ರ ಮೂರು ದಶಕಗಳ ಕಾಲ ವಿಫಲತೆ ಕಂಡಿದೆ. ಹೆಗಡೆ, ಬೊಮ್ಮಾಯಿ, ವೀರೇಂದ್ರ ಪಾಟೀಲ್, ಬಂಗಾರಪ್ಪ, ಮೊಯ್ಲಿ, ದೇವೇಗೌಡ, ಪಟೇಲ್, ಕೃಷ್ಣ, ಸಿಂಗ್, ಕುಮಾರಸ್ವಾಮಿ, ಯಡಿಯೂರಪ್ಪ, ಸ. ಗೌಡ ಮತ್ತು ಶೆಟ್ಟರ್.. ಅಬ್ಬಬ್ಬಾ.. 13 ಸಿ.ಎಮ್.ಗಳು 30 ವರ್ಷದಲ್ಲಿ! ಅದರೊಂದಿಗೆ ನಾಲ್ಕು ಬಾರಿ ರಾಷ್ಟ್ರಪತಿ ಆಡಳಿತ ಹೇರಿಕೆ ಕೂಡ. ಕನ್ನಡಿಗರಿಗೆ ನಾಚಿಕೆ ಆಗುವಂಥ ಮೂರು ದಶಕಗಳು!
ಯಾಕೆ ಈ ಕಪ್ಪೆ ತಕ್ಕಡಿಯಲ್ಲಿ ಇಟ್ಟಂತೆ ಆಡುತ್ತಾರೆ ನಮ್ಮ ರಾಜಕೀಯ ಮುಖಂಡರು? 2,000 ವರ್ಷ ಇತಿಹಾಸ ಇರುವ ಭವ್ಯ ಕನ್ನಡ ನಾಡಿನಲ್ಲಿ, ಅರವತ್ತು ತಿಂಗಳು ಸತತವಾಗಿ ರಾಜ್ಯಭಾರ ಮಾಡ ತಕ್ಕ ಒಬ್ಬ ರಾಜಕಾರಣಿ ಇಲ್ವಾ? ನಾಚಿಕೆಗೇಡು.
ಸುಭದ್ರ ಸರ್ಕಾರ ಇಲ್ಲದಿದ್ದರೆ, ಈ ಒಳ ಜಗಳ ಮತ್ತು ಕಚ್ಚಾಟ ಮುಗಿಯದಿದ್ದರೆ ಕರ್ನಾಟಕಕ್ಕೆ ಆಗುವ ಅನ್ಯಾಯ ಸರಿಪಡಿಸುವುದು ಹೇಗೆ ಸ್ವಾಮಿಗಳೇ? ರೈಲು ಕಂಬಿ ಅಳವಡಿಕೆ, ರೈಲು ವಿದ್ಯುದೀಕರಣ, ಹೊಸ ರೈಲುಗಳು, ನದಿ ನೀರಿನ ಹಂಚಿಕೆ, ಆಣೆಕಟ್ಟು ನಿರ್ಮಾಣ, ಅಣು ಸ್ಥಾವರದಿಂದ ವಿದ್ಯುತ್ ಹಂಚಿಕೆ, ಸ್ಥಳೀಯ ಜನರಿಗೆ ಉದ್ಯೋಗ ಮೀಸಲಾತಿ, ಕಲ್ಲಿದ್ದಲು ಪೂರಿಕೆ, ಶಾಸ್ತ್ರಿಯ ಭಾಷೆಗೆ ಹಣ ಉತ್ತೇಜನ, ಉದ್ಯೋಗ 'ಕಾರಿಡಾರ್'ಗಳು... ಹೀಗೆ ಹತ್ತು ಹಲವಾರು ಅನ್ಯಾಯ ಆಗುತ್ತಿರುವ ಸಮಯದಲ್ಲಿ, ಸುಭದ್ರ ಸರ್ಕಾರ ಇಲ್ಲದ ಕಾರಣ ಕರ್ನಾಟಕ ನಷ್ಟ ಅನುಭವಿಸುತ್ತಲೇ ಇದೆ.
ಭಾರತದಲ್ಲಿ ಅತ್ಯಂತ ಹೆಚ್ಚು ತೆರಿಗೆ ಕೇಂದ್ರಕ್ಕೆ ಕೊಡುವ ರಾಜ್ಯಗಳಲ್ಲಿ, ಕರ್ನಾಟಕ ಉಚ್ಛ ಸ್ಥಾನದಲ್ಲಿ ಇದೆ. ಪ್ರಸ್ತುತ ಐದು ವರ್ಷದಲ್ಲಿ ರೂ.2,52,620 ಕೋಟಿ ತೆರಿಗೆ ಸಂಪಾದನೆ ಮಾಡುವ (ಕೇಂದ್ರದ ಅನುದಾನ ಹೊರತು ಪಡಿಸಿ) ರಾಜ್ಯ ಕರ್ನಾಟಕ. ಇದು ದೇಶದಲ್ಲೇ ಐದನೇ ಸ್ಥಾನದಲ್ಲಿ ರಾಜ್ಯವನ್ನು ಕೂರಿಸಿ, ಅತ್ಯಂತ ಮರ್ಯಾದೆ ತರುವಂತಹ ಸಂಗತಿ. ಆದರೆ ಕೇಂದ್ರದಿಂದ ವಾಪಸ್ ಅನುದಾನ ಮತ್ತು ಸಹಾಯ ಪಡೆಯುವಾಗ ಬಹಳ ಹಿಂದೆ ಇದೆ.
ನೆರೆ ಹಾವಳಿ, ವಿಶೇಷ ಪ್ರದೇಶ ಅನುದಾನ, ಬರಗಾಲದಲ್ಲಿ ಮೇವು ಅನುದಾನ, ಹೀಗೆ ಬಹಳ ವಿಷಯದಲ್ಲಿ, ಕರ್ನಾಟಕಕ್ಕೆ ಸ್ಪಷ್ಟ ಅನ್ಯಾಯ ಅಗುತ್ತಿದೆ. ಉದಾಹರಣೆಗೆ ರೈಲು ಕಂಬಿ ವಿದ್ಯುದೀಕರಣ ಆಗಿರುವ ಪ್ರಮಾಣ ಕರ್ನಾಟಕದಲ್ಲಿ ಕೇವಲ ಶೇಕಡಾ 3.5 ಮಾತ್ರ (2009). ದೇಶದಲ್ಲಿ 18ನೇ ಸ್ಥಾನ ಇದು. ಝಾರ್ಖಂಡ್ ಅಂತಹ ಬಡ ರಾಜ್ಯದಲ್ಲಿ 87%! ಅಷ್ಟೊಂದು ತೆರಿಗೆ ಕೊಡುವ ಕರ್ನಾಟಕ ರಾಜ್ಯಕ್ಕೆ ನಾಲ್ಕಕ್ಕಿಂತ ಕಡಿಮೆ ಪ್ರಮಾಣ ವಿದ್ಯುದೀಕರಣ! ಇದಕ್ಕಿಂತ ಅನ್ಯಾಯ ಏನಾದ್ರು ಬೇಕಾ?
ಆದ್ದರಿಂದ ಮಿತ್ರರೇ.. ನೀವು ಯಾರಿಗಾದ್ರು ಮತ ಹಾಕಿ. ರಾಷ್ಟೀಯ ಅಥವಾ ಪ್ರಾದೇಶಿಕ ಪಕ್ಷ ನಿಮ್ಮ ಇಚ್ಛೆ. ಆದರೆ, ಸುಭದ್ರ ಆಡಳಿತ ಕೊಡುವಂತಹ, ಐದು ವರ್ಷ ಪೂರ್ತಿಗೊಳಿಸುವ ಒಬ್ಬ ಮುಖ್ಯಮಂತ್ರಿ ಗದ್ದುಗೆ ಮೇಲೆ ಕೂರಿಸಿ. ಯಾವ ಪಕ್ಷವಾದ್ರೂ ಸಹ, ಯಾವ ಸಮ್ಮಿಶ್ರ ಸರ್ಕಾರ ಬಂದ್ರೂ ಸಹ, ಈ ಬಾರಿಯೂ ಜಗಳ ಆಡಿಕೊಂಡ್ರೆ, ಆಗುವ ನಷ್ಟ ಕನ್ನಡಿಗರಿಗೆ. ಅದನ್ನು ದಯವಿಟ್ಟು ಮನಸ್ಸಿನಲ್ಲಿ ಇಟ್ಟುಕೊಳ್ಳಿ. ಜೈ ಕರ್ನಾಟಕ ಮಾತೆ!
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ