ಮಹಾನಗರ ಅಭಿವೃದ್ಧಿಯ ಪಥ : ಬಿಜೆಪಿ ಪ್ರಣಾಳಿಕೆ

ಗುರುವಾರ ಮಲ್ಲೇಶ್ವರಂ ಪಕ್ಷದ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಆರ್. ಅಶೋಕ್ ಪ್ರಣಾಳಿಕೆ ಬಿಡುಗಡೆ ಮಾಡಿದರು. ಕಳೆದ 15 ವರ್ಷಗಳಿಂದ ಬಿಜೆಪಿ ನಗರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದೆ. ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸಿದೆ ಎಂದು ಅನಂತ ಕುಮಾರ್ ಹೇಳಿದರು.
ಅಕ್ರಮ-ಸಕ್ರಮ ಕಾಯಿದೆಯಲ್ಲಿ ಬದಲಾವಣೆ ತಂದು ಜಾರಿಗೊಳಿಸಲು ಆದ್ಯತೆ, ಹೋಟೆಲ್ಗಳ ಅವಧಿಯನ್ನು ರಾತ್ರಿ 1ರವರೆಗೆ ವಿಸ್ತರಣೆ, ಬಾರ್ ಗಳಿಗೆ ರಾತ್ರಿ 12ರವರೆಗೆ ತೆರೆಯಲು ಅವಕಾಶ, ಕಂದಾಯ ನಿವೇಶನದಾರರಿಗೆ ಸುಧಾರಣಾ ವೆಚ್ಚ ವಿಧಿಸಿ ನಿವೇಶನವನ್ನು ಸಕ್ರಮಗೊಳಿಸುವುದು.
ಬೆಂಗಳೂರಿಗೆ ಕುಡಿಯುವ ನೀರು ಒದಗಿಸಲು ಕಾನೂನು ತಜ್ಞರ ಸಲಹೆ ಪಡೆದು ಮೇಕೆದಾಟು ಬಳಿ ಡ್ಯಾಂ ನಿರ್ಮಿಸಲು ಕ್ರಮ, ಮಹಿಳೆಯರ ರಕ್ಷಣೆಗೆ ವಿಶೇಷ ಪಡೆ ರಚನೆ, ಕಸ ವಿಲೇವಾರಿಯ ಉಸ್ತುವಾರಿಗಾಗಿ ಪ್ರತ್ಯೇಕ ಮಂಡಳಿ ಸ್ಥಾಪನೆ, ಸರಕಾರಿ ಭೂಮಿ ಒತ್ತುವರಿ ತೆರವಿಗೆ ಬಾಲಸುಬ್ರಹ್ಮಣ್ಯಂ ಸಮಿತಿ ವರದಿ ಜಾರಿ ಮುಂತಾದ ಅಂಶಗಳನ್ನು ಪ್ರಣಾಳಿಕೆ ಒಳಗೊಂಡಿದೆ.
ಪ್ರಣಾಳಿಕೆಯಲ್ಲಿನ ಪ್ರಮುಖ ಭರವಸೆಗಳು
* ಬೆಂಗಳೂರಿನ ವರ್ತುಲ ರಸ್ತೆಗಳಲ್ಲಿ ಬಹು ಅಂತಸ್ತಿನ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ. ನಗರದೊಳಗೆ ನಿರ್ಮಾಣವಾಗುವ ಕಟ್ಟಡಗಳ ಎತ್ತರಕ್ಕೆ ಮಿತಿ ವಿಧಿಸಲಾಗುವುದು.
* ಮೇಯರ್ ಹುದ್ದೆಗೆ ನೇರ ಚುನಾವಣೆ ನಡೆಸಿ, ಐದು ವರ್ಷಗಳ ಕಾಲಾವಧಿ ನಿಗದಿಪಡಿಸಲಾಗುವುದು.
* ನಗರದ ಮಾಸ್ಟರ್ ಪ್ಲಾನ್ನಲ್ಲಿರುವ ಮಿಶ್ರ ವಲಯವನ್ನು ರದ್ದುಪಡಿಸಲಾಗುವುದು.
* ಬಿಬಿಎಂಪಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಎಲ್ಲ ಹಂತದಲ್ಲಿ ಇ-ಆಡಳಿತ ಜಾರಿಗೆ ತರಲಾಗುವುದು.
* ಹಿಂದುಳಿದ ವಸತಿ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಹಕ್ಕು ಪತ್ರ ವಿತರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು.
* ಕಸ ವಿಲೇವಾರಿ ಘಟಕ ಸ್ಥಾಪಿಸುವ ಗ್ರಾಮಗಳ ಅಭಿವೃದ್ಧಿಯನ್ನು ಪಾಲಿಕೆ ವ್ಯಾಪ್ತಿಗೆ ತರಲಾಗುವುದು. ಜನರ ಆರೋಗ್ಯ, ಕುಡಿಯುವ ನೀರು, ಮೂಲ ಸೌಕರ್ಯ ಒದಗಿಸಲಾಗುವುದು.
* ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ಹರಿಸಲು ಅರ್ಕಾವತಿ ಮತ್ತು ಕುಮುದ್ವತಿ ಜಲಾನಯನ ಪ್ರದೇಶಗಳಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದು.
* ಖಾಸಗಿ ಮತ್ತು ಬಿಬಿಎಂಪಿ ಸಹಭಾಗಿತ್ವದಲ್ಲಿ ನಗರದ 50 ಕಡೆ ವಾಹನ ನಿಲುಗಡೆ ಸಂಕೀರ್ಣ ನಿರ್ಮಾಣ.
* ಕೆಎಸ್ಆರ್ ಟಿಸಿ ನಿಲ್ದಾಣವನ್ನು ನಾಲ್ಕು ಭಾಗಗಳಾಗಿ ವಿಂಗಡನೆ. ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಹೊಸೂರು ರಸ್ತೆ ಮತ್ತು ಕನಕಪುರ ರಸ್ತೆಗಳಲ್ಲಿ ನೂತನ ಬಸ್ ನಿಲ್ದಾಣ ಸ್ಥಾಪನೆ.
* ಟ್ಯಾಕ್ಸಿ, ನಗರ ಸಾರಿಗೆ ಮತ್ತು ಆಟೊಗಳಿಗೆ ಸಿಎಜಿ ಇಂಧನ ಕಡ್ಡಾಯಗೊಳಿಸುವುದು.
* ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ವರ್ತುಲ ರೈಲು ಯೋಜನೆ ಅನುಷ್ಠಾನ.
* ಎರಡನೇ ಹಂತದ ಮೆಟ್ರೊ ರೈಲು ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಪೂರ್ಣ.
* ಮೆಟ್ರೊ ರೈಲು ಸೇವೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ವಿಸ್ತರಣೆ.
* ನಗರದೊಳಗೆ ಖಾಸಗಿ ಬಸ್ಗಳ ಪ್ರವೇಶ ನಿಷೇಧ. ಹೊರವಲಯದಲ್ಲಿ ಖಾಸಗಿ ಬಸ್ ನಿಲ್ದಾಣಗಳ ನಿರ್ಮಾಣ.
* ಕೆರೆ ಮತ್ತು ಪರಿಸರ ನಿರ್ವಹಣೆಗೆ ಬೆಂಗಳೂರು ಪರಿಸರ ಮಂಡಳಿ ರಚಿಸಲಾಗುವುದು.
* ಕಬ್ಬನ್ ಉದ್ಯಾನದ ಮಾದರಿಯಲ್ಲಿ ಬೆಂಗಳೂರು ಹೊರವಲಯದಲ್ಲಿ ನಾಲ್ಕು ಬೃಹತ್ ಉದ್ಯಾನವನಗಳ ನಿರ್ಮಾಣ.
* ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳುವ ನಿವಾಸಿಗಳಿಗೆ ತೆರಿಗೆ ವಿನಾಯಿತಿ ನೀಡುವುದು.
* ಬೆಂಗಳೂರು ಅರಮನೆ ಜಾಗವನ್ನು ಉಳಿಸಿಕೊಂಡು ಹಸಿರು ವನವಾಗಿ ಸಂರಕ್ಷಿಸುವುದು.
* ನಗರದ ಪರಿಸರ ಮತ್ತು ಸ್ವಚ್ಚತೆಗೆ ಹಸಿರು ಪೊಲೀಸರ ನೇಮಕ
* ತುರ್ತು ಸಂದರ್ಭದಲ್ಲಿ ಸಹಾಯ ಪಡೆಯಲು ಪೊಲೀಸ್, ಮಹಿಳಾ ಸಹಾಯವಾಣಿ ಮತ್ತು ಅಗ್ನಿ ಶಾಮಕ ದಳದ ಸೇವೆಗೆ ಏಕ ಸಂಖ್ಯೆಯ ದೂರವಾಣಿ ಸಂಖ್ಯೆ ಜಾರಿ.
* ಸಾಹಸ ಕ್ರೀಡೆ, ಚಾರಣ ಪ್ರವಾಸಗಳಿಗೆ ಉತ್ತೇಜನ ನೀಡಲು ನಂದಿಬೆಟ್ಟ, ಸಾವನದುರ್ಗ, ಶಿವಗಂಗೆ ಬೆಟ್ಟಗಳನ್ನು ಅಭಿವೃದ್ಧಿ ಪಡಿಸುವುದು.
* ಹೋಟೆಲ್ಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಮಾರಾಟ ಮಾಡುವುದನ್ನು ನಿಷೇಧಿಸಿ, ಗಾಜಿನ ಬಾಟಲಿಯಲ್ಲೇ ನೀರು ಕೊಡುವಂತೆ ಕಾಯಿದೆ ರೂಪಿಸಲಾಗುವುದು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications