ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಮ್ಯಾ ರಾಜಕೀಯ ಪ್ರವೇಶ ಎಲ್ಲವೂ ಆಕಸ್ಮಿಕ

By Mahesh
|
Google Oneindia Kannada News

ಬೆಂಗಳೂರು, ಮೇ 2: ನಾನು ಚಿತ್ರರಂಗಕ್ಕೆ ಬಂದಿದ್ದು ಆಕಸ್ಮಿಕವಾಗಿಯೇ ಹಾಗೆಯೇ ನನಗೆ ರಾಜಕಾರಣ ಕೂಡ ಆಕಸ್ಮಿಕ. ಆದರೆ, ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಳ್ಳಬೇಕೆಂಬ ಆಸೆ ಇದೆ. ರಾಜಕೀಯಕ್ಕೆ ಬಂದು ಜನರ ಸೇವೆ ಮಾಡುವೆ ಎಂದು ಚಿತ್ರನಟಿ ರಮ್ಯಾ ಅವರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮದ ಸಂದರ್ಭದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಯುವ ಕಾಂಗ್ರೆಸ್ಸಿಗೆ ನನ್ನನ್ನು ಕರೆ ತಂದರು. ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ, ಡಾ.ಜಿ.ಪರಮೇಶ್ವರ್ ಬೆಂಬಲ ನೀಡಿದರು. ನಮ್ಮ ತಾತ ಕೂಡ ರಾಜಕಾರಣಿಯೇ ಆಗಿದ್ದರು. ನನ್ನ ಮುಂದಿನ ರಾಜಕೀಯ ಜೀವನದ ಬಗ್ಗೆ ಏನೂ ಪ್ಲ್ಯಾನ್ ಹಾಕಿಕೊಂಡಿಲ್ಲ. ಸದ್ಯಕ್ಕೆ ಕಾಂಗ್ರೆಸ್ಸಿನಲ್ಲಿ ಯಾವುದೇ ಜವಾಬ್ದಾರಿ ವಹಿಸಿಲ್ಲ. ಪ್ರಚಾರಕ್ಕೆ ಸೀಮಿತವಾಗಿದ್ದೇನೆ. ಯಾವುದೇ ಅವಕಾಶ ಕೊಟ್ಟರೂ ನಿಭಾಯಿಸುತ್ತೇನೆ ಎಂದು ರಮ್ಯಾ ಹೇಳಿದರು.

ಚುನಾವಣೆಗೆ ಸ್ಪರ್ಧಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆ ಎದುರಿಸುವ ಸಾಮರ್ಥ್ಯ ಹಾಗೂ ಪಕ್ವತೆ ಇಲ್ಲ ಅನಿಸುತ್ತೆ. ಸಾಮಾಜಿಕ ಸೇವೆ ಮಾಡಲು ಅಧಿಕಾರ ಬೇಕು. ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಇದೆ. ಅವಕಾಶ ಸಿಕ್ಕಿದಾಗ ನೋಡೋಣ. ಈಗಲೇ ಸ್ಪರ್ಧಿಸಿದರೆ ಸೋಲುತ್ತೇನೆ ಎಂಬ ಭಯದಿಂದ ಹಿಂದೆ ಸರಿದಿಲ್ಲ. ಸೋಲು-ಗೆಲುವು ಸಹಜ ಎಂದು ರಮ್ಯಾ ಅಭಿಪ್ರಾಯಪಟ್ಟರು.

ಮಂಡ್ಯಕ್ಕೆ ಪ್ರಚಾರದಲ್ಲಿ ಪಾಲ್ಗೊಳ್ಳಲು ಏಕೆ ಹೋಗಲಿಲ್ಲ ಎಂಬ ಮತ್ತೊಂದು ಪ್ರಶ್ನೆಗೆ ಅಲ್ಲಿ ಇಡೀ ದಿನ ಪ್ರಚಾರದಲ್ಲಿ ತೊಡಗಬೇಕು ಎಂಬ ಬೇಡಿಕೆ ಇಟ್ಟಿದ್ದರು. ಆದರೆ, ಇಡೀ ದಿನ ಪ್ರಚಾರ ಮಾಡಲು ಸಾಧ್ಯವಾಗುವುದಿಲ್ಲ. ಬೇರೆ ಕಡೆಯೂ ಪ್ರಚಾರಕ್ಕೆ ಹೋಗಬೇಕಾಗಿರುವುದರಿಂದ ಅಂಬಿ ಅಂಕಲ್ ಗೆದ್ದು ಬರಲಿ ಎಂದು ಇಲ್ಲಿಂದಲೇ ಶುಭ ಹಾರೈಸುತ್ತೇನೆ ಎಂದರು.

ರಾಜಕಾರಣ-ಸಿನಿಮಾದವರಿಗೆ ಪುನರ್ವಸತಿ ಕೇಂದ್ರ ಅಲ್ಲವೇ ಅಲ್ಲ ಎಂದು ಹೇಳಿದ ರಮ್ಯಾ, ನನ್ನನ್ನು ಕೋಪಿಷ್ಟೆ ಎಂದು ಹೇಳುತ್ತಾರೆ. ಸುಳ್ಳು ಹೇಳಿದರೆ ನನಗೆ ಸಿಟ್ಟು ಬರುತ್ತದೆ. ಹೇಳಿದಂತೆ ನಡೆದುಕೊಂಡಿಲ್ಲವೆಂದರೂ ಸಿಟ್ಟು ಬರುತ್ತದೆ. ಅದಕ್ಕಾಗಿ ನನ್ನನ್ನು ಕೋಪಿಷ್ಟೆ ಅನ್ನುತ್ತಾರೆ. ಬಿಜೆಪಿ ಸರ್ಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಅದಕ್ಕಾಗಿ ಈ ಸರ್ಕಾರದ ಮೇಲೂ ಸಿಟ್ಟಿದೆ ಅಂದರು.

ಸರ್ಕಾರ ಏನು ಮಾಡಿದೆ ಎಂದು ದೂರುವುದರಲ್ಲಿ ಅರ್ಥವಿಲ್ಲ. ಕೊಳಚೆ ನೀರನ್ನು ಸಂಸ್ಕರಣ ಮಾಡಿ ಹೇಗೆ ಉಪಯೋಗಿಸುತ್ತೇವೆಯೋ ಹಾಗೆಯೇ ರಾಜಕಾರಣವನ್ನು ಶುದ್ದಿ ಮಾಡಬೇಕಿದೆ. ಯುವ ಜನರು ರಾಜಕಾರಣಕ್ಕೆ ಹೆಚ್ಚು ಬರಬೇಕಿದೆ ಎಂದು ರಮ್ಯಾ ಕರೆ ನೀಡಿದರು.

ಎಷ್ಟು ಸ್ಥಾನ ಗೆಲ್ಲಬಹುದು?: ನಾನು ಪ್ರಚಾರಕ್ಕೆ ಹೋದ ಕಡೆಯಲೆಲ್ಲಾ ಕಾಂಗ್ರೆಸ್ ಪರ ಜನರು ಮಾತನಾಡಿದ್ದಾರೆ. ಕಾಂಗ್ರೆಸ್ 113 ರಿಂದ 120 ಸ್ಥಾನ ಗಳಿಸಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ ರಮ್ಯಾ, ಮುಖ್ಯಮಂತ್ರಿ ಯಾರಾಗಬೇಕು ಎಂದು ಕೇಳಿದಕ್ಕೆ ವೈಯಕ್ತಿಕ ಅಭಿಪ್ರಾಯಗಳನ್ನು ಬಹಿರಂಗವಾಗಿ ಹೇಳುವುದಿಲ್ಲ. ಸಿಎಂ ಪಟ್ಟವನ್ನು ನಮ್ಮ ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.

ರಾಜಕೀಯದಲ್ಲಿ ಮುಂದೆ ಬರಬೇಕೆಂದಿದೆ. ಸಿಎಂ ಆಗುವ ಅವಕಾಶ ಸಿಕ್ಕರೆ ಮೂಲಭೂತ ಸೌಲಭ್ಯ, ಶಿಕ್ಷಣ ಮತ್ತಿತರ ಜನರ ಅತ್ಯಗತ್ಯ ಬೇಡಿಕೆ ಈಡೇರಿಸಲು ಆದ್ಯತೆ ನೀಡುತ್ತೇನೆ. ಪಾರದರ್ಶಕ ಸರ್ಕಾರ ಆಗಿರಬೇಕು, ಹೆಚ್ಚು ಜನಪರ ಕೆಲಸ ಮಾಡಬೇಕು ಎಂಬ ಆಸೆ ಇದೆ. ಇದಕ್ಕೂ ಮುನ್ನ ಸಂಸದೆಯಾಗುವ ಬಯಕೆಯೂ ಇದೆ ಎಂದರು.

ಚಿತ್ರರಂಗ: ಚಿತ್ರರಂಗ ಪ್ರವೇಶಿಸಿ ನಟಿಯಾಗುತ್ತೇನೆ ಅಂದುಕೊಂಡಿರಲಿಲ್ಲ. ಐಶ್ವರ್ಯ ರೈ, ಸುಸ್ಮಿತಾ ಸೇನ್ ಅವರ ಚಿತ್ರಗಳನ್ನು ನನ್ನ ಸ್ನೇಹಿತೆಯರು ಇಟ್ಟುಕೊಂಡು ಆಸೆ ಪಡಿಸುತ್ತಿದ್ದರು. ಆಗ ನನಗೂ ಅವರ ಹಾಗೆ ಆಗಬೇಕು ಅನಿಸಿತು. 3 ವರ್ಷ ಬೋರ್ಡಿಂಗ್ ಸ್ಕೂಲ್ ನಂತರ ಸೆಂಟ್ ಜೋಸೆಫ್ ಶಾಲೆಯಲ್ಲಿ ಓದಿದೆ. ಆದರೆ ಶಿಕ್ಷಣದಲ್ಲಿ ಸಾಧನೆ ಹಾಗೂ ಯಶಸ್ಸು ಪಡೆಯಲಾಗಲಿಲ್ಲ.

ಕಾರ್ಯಕ್ರಮವೊಂದರಲ್ಲಿ ಡಾ.ರಾಜ್ ಕುಮಾರ್ ಅವರು ನನ್ನನ್ನು ನೋಡಿ ಸಿನಿಮಾದಲ್ಲಿ ನಟಿಸುತ್ತಿಯಾ ಎಂದು ಕೇಳಿದ್ದರು. ಆಗ ಇದು ನನ್ನಿಂದ ಸಾಧ್ಯವಾಗುವುದಿಲ್ಲ ಎಂದಿದ್ದೆ. ಆದರೆ, ಪ್ರಖ್ಯಾತ ಛಾಯಾಗ್ರಾಹಕರೊಬ್ಬರು ನನ್ನ ಫೋಟೋ ತೆಗೆದಿದ್ದರು. ಅದನ್ನು ನೋಡಿ ರಾಜ್ ಕುಟುಂಬ ಗುರುತಿಸಿತು. ನಂತರ ಚಿತ್ರರಂಗದಲ್ಲಿ ತೊಡಗಿಕೊಂಡೆ ಎಂದರು.

English summary
Congress youth leader and popular actress Ramya recently had debate with media in which she revealed her true ambition and purpose of entering into politics. The whole debate conducted in English and Kannada held at Press Club, Bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X