ಕೃಷ್ಣ-ಅಂಬಿ ಶೀತಲ ಸಮರಕ್ಕೆ ಸಾಕ್ಷಿಯಾದ ರಾಹುಲ್

ಮಂಡ್ಯ ನಗರ ಕಾಂಗ್ರೆಸ್ ಅಭ್ಯರ್ಥಿ ಅಂಬರೀಷ್ ಅವರು ಮಾಜಿ ವಿದೇಶಾಂಗ ಸಚಿವ ಎಸ್ಸೆಂ ಕೃಷ್ಣ ಅವರೊಂದಿಗಿನ ಮುನಿಸು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ವೇದಿಕೆ ಏರುತ್ತಿದ್ದಂತೆ ಮಂಡ್ಯ ಗೌಡರ ಗೆಟೆಪ್ ನಲ್ಲಿ ಕಾಣಿಸಿಕೊಂಡ 'ಮಂಡ್ಯದ ಗಂಡು' ಅಂಬರೀಷ್ ನೆರೆದಿದ್ದ ಸಭೆಯತ್ತ ಕೈ ಬೀಸಿದರು. ನಂತರ ಎಸ್ಸೆಂ ಕೃಷ್ಣ ಅವರ ಎಂಟ್ರಿಯಾಯಿತು.
ಅಂಬಿ-ಕೃಷ್ಣ ಶೀತಲ ಸಮರ: ಆದರೆ, ನಂತರ ವೇದಿಕೆಯಲ್ಲಿದ್ದ ಪ್ಲಾಸ್ಟಿಕ್ ಕುರ್ಚಿಯಲ್ಲಿ ಆಸೀನರಾದ ರಾಹುಲ್ ಗಾಂಧಿ ಅವರು ಕೃಷ್ಣ ಹಾಗೂ ಅಂಬರೀಷ್ ಇಬ್ಬರಿಗೂ ಕುಳಿತುಕೊಳ್ಳುವಂತೆ ಸೂಚಿಸಿದರು. ತಕ್ಷಣವೇ ಹಿಂದಕ್ಕೆ ತಿರುಗಿದ ಅಂಬರೀಷ್ ಅವರು ಪತ್ನಿ ಸುಮಲತಾ ಅವರಿಗೆ ಹಿಂಬದಿ ಸೀಟಿನಲ್ಲಿ ಕೂರುವಂತೆ ಸೂಚಿಸಿ ವೇದಿಕೆಯಿಂದ ಕೆಳಗಿಳಿದರು. ರಾಜ್ಯ ಉಸ್ತುವಾರಿ ಮಧುಸೂದನ್ ಮಿಸ್ತ್ರಿ ಅವರು ಅಂಬರೀಷ್ ಅವರನ್ನು ತಡೆಯುವ ಪ್ರಯತ್ನ ವಿಫಲವಾಯಿತು.
ಇತ್ತ ರಾಹುಲ್ ಗಾಂಧಿ ಎಡಬದಿಯಲ್ಲಿ ಕುಳಿತ ಕೃಷ್ಣ ಅವರು ಅಪ್ಪಿ ತಪ್ಪಿ ಕೂಡಾ ಅಂಬರೀಷ್ ರತ್ತ ಕಣ್ಣು ಹಾಯಿಸಲಿಲ್ಲ. ರಾಹುಲ್ ಗಾಂಧಿ ಅವರು ಸುಮಲತಾ ಅವರೊಂದಿಗೆ ಚುಟುಕು ಸಂಭಾಷಣೆ ನಡೆಸಿದರು. ನಂತರ ಪತಿ ಪರವಾಗಿ ಭಾಷಣ ಮಾಡಿದ ಸುಮಲತಾ ಅವರು, ನೆಹರೂ ಕುಟುಂಬದ ಕೊಡುಗೆಯನ್ನು ಶ್ಲಾಘಿಸಿದರು. ರಾಹುಲ್ ಗಾಂಧಿಯನ್ನು ಹೊಗಳಿದರು, ಪತಿ ಅಂಬರೀಷ್ ಗೆ ಮತ ಹಾಕಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಬಿಜೆಪಿ ವಿರುದ್ಧ ಹರಿದಾಯ್ದ ಯುವರಾಜ: ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ಜೈಲು ಪಾಲಾದರು. ಬಿಜೆಪಿ ಸರ್ಕಾರ ಬಂದ ಮೇಲೆ ಕರ್ನಾಟಕದ ನೈಸರ್ಗಿಕ ಸಂಪತ್ತು ಸಂಪೂರ್ಣ ನಾಶವಾಯಿತು.
ರಾಜ್ಯದಲ್ಲಿ ಅಪಾರವಾದ ಕಬ್ಬಿಣ ಅದಿರಿನ ನಿಕ್ಷೇಪವಿದೆ. ಇದು ಯಾರೊಬ್ಬರ ಸ್ವತ್ತಲ್ಲ. ರಾಜ್ಯ ಸಂಪತ್ತು ಲೂಟಿ ಮಾಡಿ ಆಪರೇಷನ್ ಕಮಲ ಕೈಗೊಂಡ ಬಿಜೆಪಿಯನ್ನು ರಾಜ್ಯದಿಂದಷ್ಟೇ ಅಲ್ಲ, ರಾಷ್ಟ್ರದಿಂದಲೇ ಹೊರ ಹಾಕಬೇಕು. ರಾಜ್ಯದ ಭವಿಷ್ಯವನ್ನು ಮಾಫಿಯಾಗಳ ಕೈಗಿತ್ತ ಬಿಜೆಪಿಯನ್ನು ಕಿತ್ತು ಹಾಕಿ ಎಂದು ರಾಹುಲ್ ಗಾಂಧಿ ಕರೆ ಕೊಟ್ಟರು.
2004 ರಿಂದ ಕಾಂಗ್ರೆಸ್ ಸರ್ಕಾರ ನೀಡಿದ ಆಡಳಿತ ಇನ್ನೂ ಜನರ ಮನಸ್ಸಿನಲ್ಲಿ ಹಸಿರಾಗಿದೆ. ಜನತೆ ಮತ್ತೊಮ್ಮೆ ಕಾಂಗ್ರೆಸ್ ಆಡಳಿತ ಬಯಸಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಇಂಗ್ಲೀಷ್ ಭಾಷೆಯಲ್ಲಿ ಹೇಳಿದ ವಾಕ್ಯವನ್ನು ಸರಿಯಾಗಿ ಭಾಷಾಂತರ ಮಾಡಲಾಗದ ಭಾಷಾಂತರಕಾರನ ಮೇಲೆ ಮುಂಭಾಗದಲ್ಲಿದ್ದ ಕಾರ್ಯಕರ್ತರು ಕಿಡಿ ಕಾರಿದರು.












Click it and Unblock the Notifications