ಲೇಹ್ ನಲ್ಲಿ ಚೀನಿಯರ ಮತ್ತೊಂದು ಟೆಂಟ್ ಸ್ಥಾಪನೆ
ಡಿಬಿಓ ವಲಯದಲ್ಲಿ ಚೀನಿ ಸೇನೆಯು ಸ್ಥಾಪಿಸಿರುವ ಶಿಬಿರಗಳ ಸಂಖ್ಯೆ ಐದಕ್ಕೇರಿದೆ.ಚೀನಿ ಪಡೆಗಳು ತಾವು ಅತಿಕ್ರಮಿಸಿರುವ ಡಿಬಿಓ ವಲಯದಿಂದ ಹಿಂದೆ ಸರಿಯುವ ಯಾವುದೇ ಲಕ್ಷಣಗಳೂ ಕಂಡುಬರುತ್ತಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಡಿಬಿಓ ವಲಯದಿಂದ ಹಿಂದೆ ಸರಿಯ ಬೇಕಾದರೆ ಅಲ್ಲಿನ ವಿವಾದಾತ್ಮಕ ಸ್ಥಳವೊಂದರಲ್ಲಿ ಭಾರತೀಯ ಸೇನೆಯು ನಿರ್ಮಿಸಿರುವ ಕೆಲವು ಬಂಕರ್ಗಳನ್ನು ತೆಗೆದುಹಾಕಬೇಕೆಂಬ ಷರತ್ತನ್ನು ಚೀನಿ ಸೇನೆಯು ಭಾರತಕ್ಕೆ ವಿಧಿಸಿದೆ ಎನ್ನಲಾಗಿದೆ. ಈ ವಿವಾದಾತ್ಮಕ ಸ್ಥಳವನ್ನು ಚೀನಾವು ತನಗೆ ಸೇರಿದ್ದೆಂದು ವಾದಿಸುತ್ತಿದೆ.
ಚೀನಿ ಪಡೆಗಳು ಡಿಬಿಓ ವಲಯದಲ್ಲಿ 19 ಕಿ.ಮೀ. ಒಳನುಗ್ಗಿದ್ದು, ಅಲ್ಲಿ ಕಳೆದ ಮೂರು ವಾರಗಳಿಂದ ಸುಮಾರು 50 ಚೀನಿ ಸೈನಿಕರು ಬೀಡುಬಿಟ್ಟಿದ್ದಾರೆ. ಏತನ್ಮಧ್ಯೆ ಚೀನಿ ಸೈನಿಕರು ಗಡಿಯಾಚೆಯಿಂದ ಟ್ರಕ್ಗಳು ಹಾಗೂ ಲಘು ವಾಹನಗಳ ಮೂಲಕ ಅವಶ್ಯಕ ಸಾಮಾಗ್ರಿಗಳನ್ನು ತರಿಸಿಕೊಳ್ಳುತ್ತಿದ್ದಾರೆಂಬ ಮಾಹಿತಿಯೂ ದೊರೆತಿದೆ.
ಈ ಆಯಕಟ್ಟಿನ ಜಾಗದಿಂದ ಭಾರತವು ತನ್ನ ಬಂಕರ್ಗಳನ್ನು ತೆಗೆದುಹಾಕಬೇಕೆಂಬ ತನ್ನ ಬೇಡಿಕೆಗೆ ಚೀನಾವು ಬಲವಾಗಿ ಅಂಟಿಕೊಂಡಿರುವ ಕಾರಣದಿಂದಲೇ ಕಳೆದ ಒಂದುವಾರದಿಂದ ಉಭಯದೇಶಗಳ ಸೇನಾಧಿಕಾರಿಗಳ ಮಧ್ಯೆ ಧ್ವಜ ಸಭೆಯು ನಡೆಯಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಏ.15 ರಿಂದ ಭಾರತೀಯ ಗಡಿಯಲ್ಲಿ ಚೀನಿ ತಂಡ ಸುತ್ತಾಡಲೇ ಇದೆ. ಅದರಲ್ಲೂ ವಿವಾದಿತ ಗಡಿಭಾಗದಲ್ಲೇ ಚೀನಿ ಪಡೆ ಕಾಣಿಸಿಕೊಂಡಿರುವುದು ಆತಂಕಕಾರಿಯಾಗಿದೆ.
ಚೀನಿ ತಂಡ ಬೀಡು ಬಿಟ್ಟಿರುವ ಸ್ಥಳಕ್ಕೆ ಪೂರಕ ವಾಹನಗಳು, ಇನ್ನಷ್ಟು ಸಾಮಾನು ಸರಂಜಾನುಗಳು ಪ್ರತಿ ದಿನ ಸೇರ್ಪಡೆಗೊಳ್ಳುತ್ತಿದೆ ಎಂಬ ವಿಷಯ ಹೊರ ಬಿದ್ದಿದೆ. ಇದೆಲ್ಲವೂ ಧ್ವಜ ಸಭೆ ನಡೆಯದೆ ವಿಫಲವಾದ ನಂತರದ ಬೆಳವಣಿಗೆಯಾಗಿದೆ.
ಲಡಾಕ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಸರಿಯಾದ ಸಮಯದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಸದ್ಯಕ್ಕೆ ಯುದ್ಧದ ಪರಿಸ್ಥಿತಿ ಎದುರಾಗಿಲ್ಲ, ಜನತೆ ಆತಂಕಪಡಬೇಕಾಗಿಲ್ಲ ಎಂದು ಕಾಂಗ್ರೆಸ್ ವಕ್ತಾರ ಸಂದೀಪ್ ದೀಕ್ಷಿತ್ ಹೇಳಿದ್ದಾರೆ.
ಕೇಂದ್ರ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರು ಸದ್ಯ ಮಾಸ್ಕೋದಲ್ಲಿದ್ದು, ಚೀನಾ ಅತಿಕ್ರಮಣದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಿಲ್ಲ.