ಸಾವಿಗೆ ಶರಣಾದ ಟೆಕ್ಕಿ ಮಗಳನ್ನೂ ಕೊಂದಿದ್ದು ನ್ಯಾಯವೆ?
ಈ ಘಟನೆ ಬೆಳಕಿಗೆ ಬಂದಿರುವುದು ಶನಿವಾರ ಬೆಳಗಿನ ಜಾವ. ಸಿಂಗಪುರ ಮೂಲದ ಸಾಫ್ಟ್ ವೇರ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಅರವಿಂದ್ ರೆಡ್ಡಿ (35) ತನ್ನ ಮಗಳು ಲಕ್ಷ್ಯ(7)ಳಿಗೆ ಅತಿಯಾಗಿ ನಿದ್ರೆಮಾತ್ರೆ ನೀಡಿ ಸಾಯಿಸಿ, ನಂತರ ತಾವು ಕೂಡ ತಮ್ಮ ಕೈಕಾಲು, ಕತ್ತಿಗೆ ಪ್ಲಾಸ್ಟಿಕ್ ಪಟ್ಟಿ ಕಟ್ಟಿಕೊಂಡು ಸಾವಿಗೆ ಶರಣಾಗಿದ್ದಾರೆ.
ಸಾವಿಗೆ ಶರಣಾಗುವ ಮುನ್ನ ಮರಣಪತ್ರವನ್ನು ಜೆಪಿ ನಗರದ ನಿವಾಸಿಯಾಗಿರುವ ಅರವಿಂದ್ ರೆಡ್ಡಿ ಬರೆದಿಟ್ಟಿದ್ದು, ಈ ಸಾವಿಗೆ ಯಾರೂ ಕಾರಣರಲ್ಲ ಎಂದು ತಿಳಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿಗೆ ನಿಖರವಾದ ಕಾರಣ ತಿಳಿದುಬರಬೇಕಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಅವರಿಬ್ಬರು ಜಂಗಲ್ ರೆಸಾರ್ಟ್ಗೆ ಶುಕ್ರವಾರ ಬೆಳಿಗ್ಗೆ ಬಂದಿದ್ದರು. ನಂತರ ಸಂಜೆಯ ಸಮಯದಲ್ಲಿ ಬೆಳಗಿನ ಚಹಾ ಕಳುಹಿಸಿಕೊಡಬೇಕಾ ಎಂದು ಕೇಳಿದ್ದಕ್ಕೆ ಬೇಡ, ಬೆಳಗಿನ ತಿಂಡಿಗೆ ಬರುವುದಾಗಿ ಉತ್ತರಿಸಿದ್ದರು. ಆದರೆ, ಪರಿಚಾರಕರು ತಂದೆ ಮಗಳಿಬ್ಬರು ಕೋಣೆಯಿಂದ ಹೊರಬರದಿದ್ದಾಗ ಸಂಶಯಗೊಂಡು ಬಾಗಿಲು ಮುರಿದಿದ್ದಾರೆ. ಆಗ ಅವರ ಸಾವಿನ ಸಂಗತಿ ಬಯಲಾಗಿದೆ.
ಪೊಲೀಸರು ಸಂಬಂಧಿಕರೊಂದಿಗೆ ಮಾತನಾಡಿದಾಗ ತಿಳಿದುಬಂದ ಸಂಗತಿಯೆಂದರೆ, ಅರವಿಂದ್ ಅವರ ಹೆಂಡತಿ ನಾಲ್ಕು ವರ್ಷಗಳ ಹಿಂದೆ ಅಸುನೀಗಿದ್ದರು. ಆ ದುರ್ಘಟನೆಯಿಂದ ಅರವಿಂದ್ ಅವರು ಹೊರಬರಲೇ ಇಲ್ಲ. ನಾಲ್ಕು ತಿಂಗಳಿಗೊಮ್ಮೆ ಸಿಂಗಪುರದಿಂದ ಬೆಂಗಳೂರಿಗೆ ಬರುತ್ತಿದ್ದರೂ ಖಿನ್ನರಾಗಿಯೇ ಇರುತ್ತಿದ್ದರು ಮತ್ತು ಹೆಂಡತಿಯ ಸಾವಿಗೆ ಪರಿತಪಿಸುತ್ತಿದ್ದರು.
ಅರವಿಂದ್ ಅವರು ಕೈಕಾಲು, ಕತ್ತಿಗೆ ಪ್ಲಾಸ್ಟಿಕ್ ಪಟ್ಟಿ ಬಿಗಿದುಕೊಂಡಿದ್ದಲ್ಲದೆ ಶಬ್ದ ಬರಬಾರದೆಂದು ಬಾಯಿಗೂ ಪಟ್ಟಿಗೆ ಬಿಗಿದುಕೊಂಡಿದ್ದರು. ಸಾವಿಗೆ ಶರಣಾಗುವ ಮುನ್ನ ಅವರು ಕೂಡ ನಿದ್ರೆ ಮಾತ್ರ ಸೇವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತಾವು ಸತ್ತಿದ್ದಲ್ಲದೆ, ಬಾಳಿ ಬದುಕಬೇಕಿದ್ದ ಮಗಳನ್ನು ಕೂಡ ಕೊಂದಿದ್ದು ಯಾವ ನ್ಯಾಯ? [ಮಗಳನ್ನು ಕಾಮುಕನಿಗೆ ಮಾರಿದ ತಾಯಿ]