ಮೈಸೂರು : ಮಗಳನ್ನು ಕಾಮುಕನಿಗೆ ಮಾರಿದ ತಾಯಿ!

ಚಿಕ್ಕಮ್ಮ ನೀಡಿದ ಧೈರ್ಯದ ಮೇಲೆ ಫೋನ್ ಮುಖಾಂತರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಬಾಲಕಿ ಸದ್ಯಕ್ಕೆ ಒಡನಾಡಿ ಸಂಸ್ಥೆಯ ರಕ್ಷಣೆಯಲ್ಲಿದ್ದಾಳೆ. ಪೊಲೀಸರಿಗೆ ನೀಡಿರುವ ದೂರಿನಲ್ಲಿ ಎರಡು ವರ್ಷಗಳ ಕಾಲ ತಾನು ಅನುಭವಿಸಿದ ನೋವನ್ನು, ಲೈಂಗಿಕ ದೌರ್ಜನ್ಯದ ಕಥೆಯನ್ನು, ತಾಯಿಯ ಹೇಯ ಕೃತ್ಯವನ್ನು ತೋಡಿಕೊಂಡಿದ್ದಾಳೆ.
ಈ ಘಟನೆಗೆ ಸಂಬಂಧಿಸಿದಂತೆ ಕೆಆರ್ ಪೇಟೆಯ ಶಿಕ್ಷಣಾಧಿಕಾರಿ ಪುಟ್ಟಸ್ವಾಮಿ ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೆಯೆ, ಶೇಖರ್ ಎಂಬ ಮೈಸೂರು ದೂರದರ್ಶನ ಉದ್ಯೋಗಿ, ಕೇರಳದ ರಿಯಾಜ್, ರಾಜು ಎಂಬ ಬ್ಯಾಂಕ್ ಮ್ಯಾನೇಜರ್, ರಮೇಶ್ ಹಾಗು ಸ್ವತ ತಾಯಿ ಲೀಲಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಬಾಲಕಿ ಹೇಳಿದ ದಾರುಣ ಕಥೆ : ಕುವೆಂಪು ನಗರದ ಶೀಲಾ(ಹೆಸರು ಬದಲಿಸಲಾಗಿದೆ)ಗೆ ಆಗಿನ್ನೂ 13ರ ವಯಸ್ಸು. ಮೈನೆರೆತಿದ್ದರಿಂದ ಆರತಿ ಮಾಡಿ ಎಲ್ಲರಿಗೂ ಊಟಹಾಕಿಸಲಾಗಿದೆ. ಯೌವನದ ಸುಂದರ ಕನಸು ಕಾಣುತ್ತಿದ್ದ ಹುಡುಗಿಗೆ ಮರುದಿನವೇ ಬದುಕು ತಾನು ತಿಳಿದುಕೊಂಡಷ್ಟು ಸುಂದರವಾಗಿಲ್ಲ ಎಂಬುದು ಮರುದಿನವೇ ಅರಿವಾಗಿದೆ.
ಮೈನೆರೆತ ಮರುದಿನವೇ ದುಷ್ಟ ನಿರ್ದಯಿ ತಾಯಿ ಲೀಲಾ, ಶೀಲಾಳನ್ನು 75 ಸಾವಿರ ರು. ನಗದು ಮತ್ತು ಒಂದಿಷ್ಟು ಚಿನ್ನದಾಭರಣಗಳನ್ನು ಪಡೆದು ಶಿಕ್ಷಣಾಧಿಕಾರಿ ಪುಟ್ಟಸ್ವಾಮಿಗೌಡನಿಗೆ ಮಾರಿಬಿಟ್ಟಿದ್ದಾಳೆ. ಅಲ್ಲಿಂದ ಶುರುವಾಗಿದೆ ಶೀಲಾಳ ನರಕದ ಬದುಕು. ಪುಟ್ಟಸ್ವಾಮಿ ಗೌಡನ ಮನೆ ವೇಶ್ಯಾವಾಟಿಕೆ ಮನೆಯಾಗಿ ಬದಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡವರೆಷ್ಟೋ, ದುಡ್ಡು ಮಾಡಿಕೊಂಡವರೆಷ್ಟೋ?
ತಾಯಿ ಮೊದಲಿನಿಂದಲೂ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಳು ಎಂದು ಶೀಲಾ ಹೇಳಿದ್ದಾಳೆ. ತನ್ನನ್ನೂ ಮಾಂಸದಂಧೆಗೆ ತಳ್ಳಲು ಯತ್ನಿಸಿದಳು. ಪ್ರತಿಭಟಿಸಿದಾಗ ಹೊಡೆಯುತ್ತಿದ್ದಳು. ತಾನು ಓದಬೇಕು ಎಂದು ಹೇಳುತ್ತಿದ್ದರೂ ಕೇಳುತ್ತಿರಲಿಲ್ಲ. ಕೊನೆಗೆ ಹಣ ಪಡೆದು ಪುಟ್ಟಸ್ವಾಮಿಗೆ ನನ್ನನ್ನು ಮಾರಿಬಿಟ್ಟಳು. ನಂತರ ಪುಟ್ಟಸ್ವಾಮಿ ವಾರಕ್ಕೆ ಎರಡುಮೂರು ದಿನ ಬಂದು ತನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಮುಂದಿನ ದಿನಗಳಲ್ಲಿ ಅನೇಕರು ತನ್ನನ್ನು ಬಳಸಿಕೊಂಡರು ಎಂದು ಆಕೆ ಹೇಳಿದ್ದಾಳೆ.
ದುಷ್ಟ ಜಗತ್ತನ್ನು ಎದುರಿಸಲು ಧೈರ್ಯ ಸಾಲದ ಬಾಲಕಿ ಎಲ್ಲವನ್ನೂ ಸಹಿಸಿಕೊಂಡಿದ್ದಾಳೆ. ಆಕೆ ಹೇಳಿರುವ ಪ್ರಕಾರ, ಶೇಖರ್, ರಮೇಶ್, ರಾಜು, ರಿಯಾಜ್ ಎಂಬುವವರೆಲ್ಲ ಬಾಲಕಿಯನ್ನು ಹುರಿದು ಮುಕ್ಕಿದ್ದಾರೆ. ಜೊತೆಗೆ ಪುಟ್ಟಸ್ವಾಮಿಗೌಡ ಕೂಡ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಮುಖ್ಯೋಪಾಧ್ಯಾಯಿನಿ ಕೂಡ ಬಾಲಕಿಯ ಸಹಾಯಕ್ಕೆ ಬಂದಿಲ್ಲ. ಇದೆಲ್ಲ ಶೀಲಾಳ ಚಿಕ್ಕಮ್ಮನ ಅರಿವಿಗೆ ಬಂದಿದೆ. ಆಕೆ ಧೈರ್ಯ ತುಂಬಿದ್ದರಿಂದಲೇ ಬಾಲಕಿ ಕೊನೆಗೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾಳೆ.
ಒಡನಾಡಿ ಸಂಸ್ಥೆಯ ಸಹಾಯದೊಂದಿಗೆ ಕುವೆಂಪುನಗರದ ಮೇಲೆ ದಾಳಿ ನಡೆಸಿದ ಪೊಲೀಸರು ಪುಟ್ಟಸ್ವಾಮಿಗೌಡನನ್ನು ಬಂಧಿಸಿದ್ದಾರೆ ಮತ್ತು ಶೀಲಾಳನ್ನು ಒಡನಾಡಿ ಆಶ್ರಯಕ್ಕೆ ನೀಡಿದ್ದಾರೆ. ಶೀಲಾಳ ಕಥೆಯನ್ನು ಕೇಳುತ್ತಿದ್ದರೆ ಕರುಳು ಕಿತ್ತುಬಂದಂತಾಗುತ್ತದೆ ಎಂದು ಒಡನಾಡಿ ಸಂಸ್ಥೆಯ ಸ್ಟಾನ್ಲಿ ಎಂಬುವವರು ಹೇಳಿದ್ದಾರೆ. ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಎಲ್ಲ ಆರೋಪಿಗಳನ್ನು ಹುಡುಕುತ್ತಿದ್ದಾರೆ. [ಮಗಳ ಜೀವನ ಹೊಸಕಿಹಾಕಿದ ಅಪ್ಪ]












Click it and Unblock the Notifications