ಯಡಿಯೂರಪ್ಪನವರನ್ನು ಅಣ್ಣಾವ್ರಿಗೆ ಹೋಲಿಕೆ ಮಾಡಿದ ನಟಿ
ಚಾಮರಾಜನಗರ, ಏ 26: ನಟನೆ, ಸರಳತೆ ಮತ್ತು ಅಭಿಮಾನಿಗಳನ್ನು ದೇವರಂತೆ ಕಾಣುತ್ತಿದ್ದ ಡಾ. ರಾಜಕುಮಾರ್ ಕಲೆಯ ಮೂಲಕ ಜನತೆಯ ಮನಸನ್ನು ಗೆದ್ದಿದ್ದರು. ಮೂರುವರೆ ವರ್ಷ ಸಿಎಂ ಆಗಿದ್ದಾಗ ಮಾಜಿ ಸಿಎಂ ಯಡಿಯೂರಪ್ಪನವರು ಮಾಡಿದ ಜನಪರ ಕೆಲಸಗಳಿಂದ ಅವರೂ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಒಬ್ಬರು ಕಲೆಯ ಮೂಲಕ ಇನ್ನೊಬ್ಬರು ರಾಜಕೀಯದ ಮೂಲಕ ಜನರ ಹೃದಯದಲ್ಲಿದ್ದಾರೆ. ಹಾಗಾಗಿ ಇವರಿಬ್ಬರ ವರ್ಚಸ್ಸಿನಲ್ಲಿ ಸಾಮ್ಯತೆ ಇದೆ ಎಂದು ನಟಿ ಕಮ್ ಕೆಜೆಪಿಯ ಸ್ಟಾರ್ ಪ್ರಚಾರಕಿ ಶೃತಿ ಹೇಳಿದ್ದಾರೆ.
ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ಮಾಡಿದ ಜನಪರ ಕೆಲಸಗಳು ಕೆಜೆಪಿಯನ್ನು ಕಾಪಾಡುತ್ತದೆ. ತನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಡಿಯೂರಪ್ಪ ಜನಪರ ಹೋರಾಟ ನಡೆಸಿಕೊಂಡು ಬಂದವರು.
ಅವರ ಜನಪ್ರಿಯ ಕಾರ್ಯಕ್ರಮಗಳು ಜನತೆಯನ್ನು ತಲುಪಿದೆ. ಬಿಜೆಪಿಯವರು ಅವರು ಜಾರಿಗೆ ತಂದ ಕಾರ್ಯಕ್ರಮಗಳನ್ನು ತನ್ನ ಕಾರ್ಯಕ್ರಮವೆಂದು ಲಾಭ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಈ ಬಾರಿಯ ಚುನಾವಣೆಯಲ್ಲಿ ಜನತೆ ಸೂಕ್ತ ಪಾಠ ಕಲಿಸಲಿದ್ದಾರೆಂದು ಶೃತಿ ಹೇಳಿದ್ದಾರೆ.
ಮಹಿಳೆಯರಿಗೆ ಯಡಿಯೂರಪ್ಪ ಸಿಎಂ ಆಗಿದ್ದಾಗ ನೀಡಿದ ಕೊಡುಗೆ ಅಪಾರ. ಕೆಜೆಪಿಯನ್ನು ಬೆಂಬಲಿಸಿದರೆ ಮತ್ತೆ ಅವರು ನಮ್ಮ ರಾಜ್ಯವನ್ನು ನಂ. 1 ಸ್ಥಾನದಲ್ಲಿ ತಂದು ನಿಲ್ಲಿಸುತ್ತಾರೆ.
ಚಾಮರಾಜನಗರ ಒಂದು ಪುಣ್ಯಭೂಮಿ. ನಾನು ಕೂಡಾ ಚಾಮರಾಜನಗರದ ಹೆಣ್ಣು ಮಗಳು, ಕೆಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಯಡಿಯೂರಪ್ಪನವರ ಕೈ ಬಲಪಡಿಸಿ ಎಂದು ಶೃತಿ ಮತದಾರರಲ್ಲಿ ಮನವಿ ಮಾಡಿದ್ದಾರೆ.