ಶಿವಮೊಗ್ಗ : ಶಿಕಾರಿಪುರದಲ್ಲಿ ಯಾರ ಶಿಕಾರಿ?

ರಾಜ್ಯ ರಾಜಕಾರಣದ ಪ್ರಭಾವಿ ನಾಯಕ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರದಲ್ಲಿ ಪಕ್ಷವನ್ನೂ ಮೀರಿ ಬೆಳೆದಿರುವ ನಾಯಕ ಎಂದರೂ ತಪ್ಪಿಲ್ಲ. ಕ್ಷೇತ್ರದಲ್ಲಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಅವರ ಕೈ ಹಿಡಿದು ಮುನ್ನಡೆಸಲಿವೆ ಎಂಬ ಬಲವಾದ ನಂಬಿಕೆ ಇದೆ.
1983ರಿಂದ ಶಿಕಾರಿಪುರದಲ್ಲಿ ಯಡಿಯೂರಪ್ಪನವರೇ ಕಿಂಗ್. 6 ಬಾರಿ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದವರು ರಾಜ್ಯದ ಮುಖ್ಯಮಂತ್ರಿಗಾದಿಯನ್ನು ಹತ್ತಿ ಇಳಿದಿದ್ದಾರೆ. 1999ರಲ್ಲಿ ಮಾಜಿ ಸಿಎಂ ಎಸ್ . ಬಂಗಾರಪ್ಪ ರಾಜಕೀಯ ತಂತ್ರಗಾರಿಕೆ ಮಂದೆ ಕ್ಷೇತ್ರದಲ್ಲೇ ಸೋಲೊಪ್ಪಿಕೊಂಡಿದ್ದರು.
ಸೇಡಿಗೆ ಸೇಡು ಎಂಬಂತೆ ಬಿ.ಎಸ್.ಯಡಿಯೂರಪ್ಪ 2008ರ ಚುನಾವಣೆಯಲ್ಲಿ ಬಂಗಾರಪ್ಪ ಅವರನ್ನು 45 ಸಾವಿರಕ್ಕೂ ಹೆಚ್ಚು ಅಂತರದಿಂದ ಸೋಲಿಸಿ, ಅವರನ್ನು ಮೂಲೆಗುಂಪು ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಕಾಲಚಕ್ರ ತಿರುಗಿದೆ. ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದಾರೆ.
ಒಂದು ಕಾಲದಲ್ಲಿ ಯಡಿಯೂರಪ್ಪ ಬೆಂಬಲಿಗರಾಗಿದ್ದ ಶಾಂತವೀರಪ್ಪ ಗೌಡ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಬಹುದು ಎಂದು ನಿರೀಕ್ಷಿಸಿದ್ದ ಬಿಜೆಪಿ ಎಸ್.ಎಸ್.ಮಂಜುನಾಥ್ ಅವರನ್ನು ಹುರಿಯಾಳು ಎಂದು ಘೋಷಿಸಿದೆ.
ಜೆಡಿಎಸ್ ನಿಂದ ಸ್ವಯಂ ನಿವೃತ್ತಿ ಪಡೆದಿರುವ ಕೆಎಸ್ಅಧಿಕಾರಿ ಎಚ್.ಟಿ.ಬಳಿಗಾರ್ ಅಭ್ಯರ್ಥಿ. ಇವರಿಗೆ ಇದು ಮೊದಲ ಚುನಾವಣೆ ಆದರೂ ಯಡಿಯೂರಪ್ಪ ವಿರುದ್ದ ತೊಡೆ ತಟ್ಟಿದ್ದಾರೆ. ಬಿಎಸ್ಆರ್ ಕಾಂಗ್ರೆಸ್ ಸಹ ಸಣ್ಣ ಫಕೀರಪ್ಪ ಅವರನ್ನು ಕಣಕ್ಕಿಳಿಸಿದೆ.
ಸಾಧ್ಯತೆ ಏನು : ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಸಿಎಂ ಅಭ್ಯರ್ಥಿಯಾಗಿದ್ದು ಅನುಕೂಲ ಮಾಡಿಕೊಟ್ಟಿತು. ಅನುಕಂಪದ ಅಲೆ ಕೆಲಸ ಮಾಡಿತ್ತು. ಜೊತೆಗೆ ಜಾತಿ ಬೆಂಬಲವೂ ಸೇರಿ ಯಡಿಯೂರಪ್ಪ ವಿಧಾನಸೌಧದ ಮೂರನೇ ಮಹಡಿ ಹತ್ತಿದ್ದರು. ಈ ಬಾರಿಯು ಅವರು ಅನುಕಂಪ ಬಯಸುತ್ತಿದ್ದಾರೆ. ಅಹಿಂದ ಮತದಾರರು ಜೈ ಎಂದರೆ ಗೆಲುವು ನಿಶ್ಚಿತ.
ಕ್ಷೇತ್ರದ ಅಭಿವೃದ್ಧಿ, ಯಡಿಯೂರಪ್ಪ ಪ್ರಭಾವ ನೋಡಿ ಜನರು ಮತ ನೀಡಿದರೆ ಓಕೆ. ಭ್ರಷ್ಟಾಚಾರ ಆರೋಪ ಬಿಜೆಪಿ ತೊರೆದಿರುವುದನ್ನು ಜನರು ಗಮನಿಸಿದರೆ ಸೋಲು ಕಟ್ಟಿಟ್ಟ ಬುತ್ತಿ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಪೈಪೋಟಿ ನೀಡುವುದಲ್ಲಿ ಸಂಶಯವಿಲ್ಲ.
ಜಾತಿ ಲೆಕ್ಕಾಚಾರ : ಕ್ಷೇತ್ರದಲ್ಲಿ ಒಟ್ಟು 1,67,092 ಮತದಾರರಿದ್ದಾರೆ. ಲಿಂಗಾಯತರು 34,130, ಅಲ್ಪ ಸಂಖ್ಯಾತರು 33,590 ಮತ್ತು ಅಹಿಂದ ಮತದಾರರು 70,473 ಯಾರ ಮತ ಯಾರಿಗೆ ಎಂದು ಮೇ 8ರಂದು ತಿಳಿಯಲಿದೆ. ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಾರೋ ಕಾದು ನೋಡಬೇಕು.
ಅಭ್ಯರ್ಥಿಗಳ ವಿವರ
ಕೆಜೆಪಿ - ಬಿ.ಎಸ್.ಯಡಿಯೂರಪ್ಪ
ಕಾಂಗ್ರೆಸ್ - ಶಾಂತವೀರಪ್ಪ ಗೌಡ
ಜೆಡಿಎಸ್ - ಎಚ್.ಟಿ.ಬಳಿಗಾರ್
ಬಿಜೆಪಿ - ಎಸ್.ಎಸ್.ಮಂಜುನಾಥ್
ಬಿಎಸ್ಆರ್ - ಸಣ್ಣ ಫಕೀರಪ್ಪ
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications