ಎಚ್ಡಿಕೆ ಮೇಲೆ ತಣ್ಣಗೆ ಗುಡುಗಿದ ಮಂಡ್ಯದ ಗಂಡು
ಮಂಡ್ಯ,ಏ.23: ರಾಜಕಾರಣದಲ್ಲಿ ಇನ್ನಷ್ಟು ಶಕ್ತಿಶಾಲಿಯಾಗಿ ಕೆಲಸ ಮಾಡುವ ಆಸೆಯಿದೆ. ಶಾಸಕನಾಗಿ ಜನಸೇವೆ ಮಾಡಬೇಕೆಂಬ ಆಕಾಂಕ್ಷೆಯಿದೆ. ಕುಮಾರಸ್ವಾಮಿ ಅವರ ಹೇಳಿಕೆಗಳು ನನಗೇನು ಹೊಸತಲ್ಲ. ಇನ್ನೊಮ್ಮೆ ಇದೇ ರೀತಿ ಹೇಳಿಕೆ ನೀಡಲಿ ನಾವು ಬಾಯ್ಬಿಡಬೇಕಾಗುತ್ತದೆ ಎಂದು ಮಂಡ್ಯದ ಗಂಡು ಅಂಬರೀಷ್ ಸಣ್ಣಗೆ ಗುಡುಗಿದ್ದಾರೆ.
ಜೆಡಿಎಸ್ ಪಕ್ಷದ ಬಗ್ಗೆ ನಾನೇನು ಹೆಚ್ಚಿಗೆ ಹೇಳಬೇಕಾಗಿಲ್ಲ. ನಾನು ಜನತಾ ಪರಿವಾರದಿಂದ ಬಂದವನು ಎಂಬ ಅರಿವಿದೆ. ಜನತೆ ಮುಂದೆ ನಾಟಕ ಮಾಡುವ ಪ್ರಮೇಯ ನನಗೆ ಬಂದಿಲ್ಲ. ನಾನು ಏನು ಎಂಬುದು ಜನರಿಗೆ ಗೊತ್ತಿದೆ. ಆತ್ಮಾನಂದ ಅವರ ಮನೆಗೆ ಸೌಜನ್ಯದ ಭೇಟಿ ನೀಡಿದೆ. ಅದು ಕಾಂಗ್ರೆಸ್ ಪಕ್ಷದ ಹಿತದೃಷ್ಟಿ, ಜನರ ಹಿತದೃಷ್ಟಿಯಿಂದ ಮಾತ್ರ.

ಕುಮಾರಸ್ವಾಮಿ ಅವರು ಸುಮ್ಮನೆ ಎಲ್ಲಾ ವಿಷಯದಲ್ಲೂ ಮೂಗು ತೂರಿಸಿದರೆ ನಾವು ಬಾಯ್ಬಿಟ್ಟು ಹಳೆ ಕಥೆಗಳನ್ನು ತೆಗೆಯಬೇಕಾಗುತ್ತದೆ. ಅವರು ಏನೋ ಹೇಳಿದರು ಎಂದು ನಾನು ಹೇಳುವುದಿಲ್ಲ. ಬರೀ ಪರಸ್ಪರ ಮಾತು, ವಾಗ್ಯುದ್ಧದಿಂದ ಪ್ರಯೋಜನವಿಲ್ಲ. ಇನ್ನೊಮ್ಮೆ ಇದೇ ರೀತಿ ಆದರೆ ತಕ್ಕ ಉತ್ತರ ನೀಡುತ್ತೇನೆ ಎಂದು ಅಂಬರೀಷ್ ಹೇಳಿ ಬೆವರು ಒರೆಸಿಕೊಂಡರು.
ಚುನಾವಣಾ ಪ್ರಚಾರ ಸಭೆಯ ನಂತರ ಮಾತನಾಡಿದ ಅಂಬರೀಷ್, ಮಂಡ್ಯ ನನ್ನ ನೆಲ. ಬೆಂಗಳೂರಿಗೆ ನಾನು ಓಡಿ ಹೋಗುವುದಿಲ್ಲ. ಜಿಲ್ಲೆಯ ಜನತೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಂಡ್ಯದಲ್ಲೇ ಮನೆ ಮಾಡಿದ್ದು, ಇಲ್ಲಿಯೇ ವಾಸ್ತವ್ಯ ಹೂಡುತ್ತೇನೆ. ಚಾಮುಂಡೇಶ್ವರಿ ನಗರದಲ್ಲಿ 25 ಸಾವಿರ/ತಿಂಗಳು ಬಾಡಿಗೆ ಮನೆ ತಾತ್ಕಾಲಿಕವಾಗಿ ಮಾಡಿದ್ದನ್ನು ಹೇಳಿಕೊಂಡರು.
ನನ್ನ ಕ್ಷೇತ್ರದ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಮತದಾರರ ಮನವೊಲಿಸಲಿದ್ದೇನೆ ಎಂದರು. ಅಂಬರೀಷ್ ಅವರಿಗೆ ಪತ್ನಿ ಸುಮಲತಾ ಪ್ರಚಾರ ಕಾರ್ಯದಲ್ಲಿ ಸಾಥ್ ನೀಡುತ್ತಿದ್ದಾರೆ.
ಅಂಬರೀಷ್ ಬಣ್ಣದ ಲೋಕದ ಮನುಷ್ಯ. ಒಳ್ಳೆ ನಟ ಕೂಡಾ. ಆದರೆ, ಸಿನಿಮಾ ಲೋಕವೇ ಬೇರೆ, ರಾಜಕೀಯ ಜೀವನವೇ ಬೇರೆ. ಸಿನಿಮಾಗಳಲ್ಲಿ ತೋರುವ ಅನುಕಂಪವನ್ನು ನಿಜ ಜೀವನದಲ್ಲಿ ತೋರಲು ಸಾಧ್ಯವಿಲ್ಲ. ಎಲ್ಲಾ ಕಡೆ ನಟನೆ ಮಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications