ಜನಮತ : ಮಂಡ್ಯದಲ್ಲಿ ಅಂಬಿ ಸೋಲೋದು ಗ್ಯಾರಂಟಿ!
ಬೆಂಗಳೂರು, ಏ. 22 : ಮಂಡ್ಯದಲ್ಲಿ ಕೈ ಸುಡುತ್ತಿರುವ ಬಂಡಾಯವನ್ನು ಎದುರಿಸಿ ರೆಬಲ್ ಸ್ಟಾರ್ ಅಂಬರೀಶ್ ಗೆಲುವು ಸಾಧಿಸುತ್ತಾರಾ? ಅಥವಾ ಬಂಡಾಯವನ್ನೇ ಬಂಡವಾಳ ಮಾಡಿಕೊಂಡು ವಿಧಾನಸಭೆ ಪ್ರವೇಶಿಸುತ್ತಾರಾ? ಎಂಬ ಪ್ರಶ್ನೆಗೆ ಜನರ ಉತ್ತರ ಅಂಬರೀಶ್ ಗೆ ಸೋಲು ಕಟ್ಟಿಟ್ಟ ಬುತ್ತಿ.
ಸ್ಥಳೀಯರ ವಿರೋಧ ಕಟ್ಟಿಕೊಂಡು ಅಂಬರೀಶ್ ಚುನಾವಣೆ ಎದುರಿಸಲು ಹೊರಟಿದ್ದಾರೆ. ಆದರೆ, ಫಲಿತಾಂಶ ಬಂದ ನಂತರ ಕೃಷ್ಣ ಕೃಷ್ಣಾ ಎನ್ನದೆ ಅನ್ಯ ಮಾರ್ಗವಿಲ್ಲ ಎಂದು ಹೆಚ್ಚಿನ ಜನರು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷದಲ್ಲೇ ವಿರೋಧ ಎದುರಿಸುತ್ತಿರುವ ಅಂಬಿ ಮಂಡ್ಯದಲ್ಲಿ ಗೆಲ್ತಾರಾ? ಎಂದು ಒನ್ಇಂಡಿಯಾ ಕನ್ನಡ ಓದುಗರನ್ನು ಪ್ರಶ್ನಿಸಿತ್ತು. ಈ ಬಾರಿ ಮಣ್ಣು ಮುಕ್ಕೋದು ಗ್ಯಾರಂಟಿ, ಗೆಲ್ತಾರೆ ಅವರು ಮಂಡ್ಯದ ಗಂಡು, ಮಂಡ್ಯ ಜನರ ಮನಸ್ಸಿನಲ್ಲೇನಿದೆ ತಿಳಿದಿಲ್ಲ ಎಂಬ ಆಯ್ಕೆಗಳನ್ನು ಓದುಗ ದೊರೆಗಳಿಗೆ ನೀಡಲಾಗಿತ್ತು.
ಓದುಗರ ಅಭಿಪ್ರಾಯದಂತೆ ಶೇ 50 ರಷ್ಟು ಜನರು ಮಂಡ್ಯದಲ್ಲಿ ಅಂಬರೀಶ್ ಗೆಲುವು ಸಾಧಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಂತಹ ವಿರೋಧ ಬಂದರೂ ಅವರು ರೆಬಲ್ ಸ್ಟಾರ್ ಪ್ರತಿಸ್ಪರ್ಧಿಗಳಿಗೆ ಸೋಲುಣಿಸಿ ವಿಧಾನಸಭೆ ಪ್ರವೇಶಿಸುತ್ತಾರೆ ಎಂದು ಕೇವಲ 30 ರಷ್ಟು ಜನರು ಮಾತ್ರ ಮತ ನೀಡಿದ್ದಾರೆ.

ಮಂಡ್ಯದ ಜನರ ಮನದಲ್ಲೇನಿದೆ ಎಂಬುದು ನಮಗೆ ತಿಳಿದಿಲ್ಲ ಎಂದು ಶೇ 20 ರಷ್ಟು ಜನರು ಹೇಳಿದ್ದಾರೆ. ನಮ್ಮ ಓದುಗರ ಅಭಿಪ್ರಾಯದಂತೆ ಅಂಬರೀಶ್ ಸೋಲುತ್ತಾರೆ. ಬಂಡಾಯ ಅವರ ಕೈ ಸುಡಲಿದೆ ಎಂದು ವಿಶ್ಲೇಷಿಸಬಹುದಾಗಿದೆ.(ಪಕ್ಷದಲ್ಲೇ ವಿರೋಧ ಎದುರಿಸುತ್ತಿರುವ ಅಂಬಿ ಮಂಡ್ಯದಲ್ಲಿ ಗೆಲ್ತಾರಾ?)
ಸೋಲು ಏಕೆ : ಅಂಬರೀಶ್ ಮಂಡ್ಯದಲ್ಲಿ ಇರುವುದಿಲ್ಲ ಎಂಬುದು ಜನರು ಅವರ ಮೇಲೆ ಮುಸಿಕೊಳ್ಳಲು ಕಾರಣವಾಗಬಹುದು. ಅಂಬರೀಶ್ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುತ್ತಾರೆ. ಸುಲಭವಾಗಿ ಕೈಗೆ ಸಿಗುವುದಿಲ್ಲ ಎಂಬ ಅಭಿಪ್ರಾಯ ಅಂಬರೀಶ್ ರನ್ನು ಸೋಲಿನತ್ತ ಕರೆದುಕೊಂಡು ಹೋಗಬಹುದಾಗಿದೆ.
ಕೃಷ್ಣ ಮಂತ್ರ ಜಪಿಸದಿರುವುದು : ಮಾಜಿ ಮುಖ್ಯಮಂತ್ರಿ, ವಿದೇಶಾಂಗ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರ ಕಾರ್ಯಕ್ಷೇತ್ರ ಮಂಡ್ಯ. ಟಿಕೆಟ್ ಹಂಚಿಕೆಯಿಂದ ಹಿಡಿದು ಪ್ರತಿ ಹಂತದಲ್ಲೂ ಕೃಷ್ಣ ಅವರನ್ನು ಕಡೆಗಣಿಸಲಾಗಿದೆ ಎಂದು ಅವರ ಬೆಂಬಲಿಗರು ಮುನಿಸಿಕೊಂಡಿದ್ದಾರೆ.
ಮಂಡ್ಯ ಕಾಂಗ್ರೆಸ್ ಅಧ್ಯಕ್ಷ ಆತ್ಮಾನಂದ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಅಂಬರೀಶ್ ಮತ್ತು ಕೃಷ್ಣ ನಡುವಿನ ಮುನಿಸು ಬೀದಿಗೆ ಬಂದಿದೆ. ಕೃಷ್ಣ ಬೆಂಬಲಿಗರು ಚುನಾವಣೆ ಪ್ರಚಾರದಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಬಹಿರಂಗವಾಗಿ ಅಂಬರೀಶ್ ವಿರುದ್ಧ ಸಮರ ಸಾರಿದ್ದಾರೆ.
ಅಂಬರೀಶ್ ಮಂಡ್ಯದಲ್ಲಿ ಗೆಲುವು ಹುಡುಕುತ್ತಿರುವುದು ಮೊದಲೇನಲ್ಲ. 1998ರಲ್ಲಿ ಮಂಡ್ಯ ಜಿಲ್ಲೆಯ ಸಂಸದನಾಗಿ ಲೋಕಸಭೆ ಪ್ರವೇಶಿಸಿದ್ದರು. ನಂತರ 1999 ಮತ್ತು 2004 ರಲ್ಲಿಯೂ ಗೆಲುವು ಸಾಧಿಸಿದ್ದರು. ಸಂಸದರಾಗಿದ್ದರೂ 2008ರ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಂಗ ಪಟ್ಟಣದಿಂದ ಸೋಲು ಅನುಭವಿಸಿದ್ದರು. ನಂತರ ಮಂಡ್ಯದ ಸಂಸದ ಸ್ಥಾನವನ್ನು ಕಳೆದುಕೊಂಡರು.
ಈ ಬಾರಿ ಮಂಡ್ಯ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಎಷ್ಟು ಪ್ರಭಾವಿ ನಾಯಕರಾದರೂ ಸ್ಥಳೀಯ ಕಾರ್ಯಕರ್ತರ ವಿರೋಧ ಕಟ್ಟಿಕೊಂಡು ಚುನಾವಣೆ ಎದುರಿಸಿ ಗೆಲುವು ಸಾಧಿಸುವುದು ಬಹಳ ಕಷ್ಟದ ಮಾತು. ಈಗಾಗಲೇ ಸ್ಥಳೀಯ ಮುಖಂಡರು ಅಂಬರೀಶ್ ಮೇಲೆ ಸಿಟ್ಟಾಗಿದ್ದು, ಚುನಾವಣೆ ಹತ್ತಿರವಾದಾಗ ಇದು ಮತ್ತಷ್ಟು ಹೆಚ್ಚಾದರೆ ಅಂಬರೀಶ್ ಸೋಲುವುದು ಖಚಿತವಾಗಿದೆ.
ಎಲ್ಲೂ ಹೋಗೋಲ್ಲ : ನಾನು ಬೆಂಗಳೂರಿಗೆ ಓಡಿ ಹೋಗುವುದಿಲ್ಲ. ಜನತೆಯ ಅನುಕೂಲಕ್ಕಾಗಿ ಮಂಡ್ಯದಲ್ಲಿಯೇ ವಾಸ್ತವ್ಯ ಹೂಡಿ ಜನರ ಸಮಸ್ಯೆ ಆಲಿಸುತ್ತೇನೆ ಎಂದು ಅಂಬರೀಶ್ ಸೋಮವಾರ ಘೋಷಿಸಿದ್ದಾರೆ. ಶಾಸಕನಾಗಿ ಜನಸೇವೆ ಮಾಡಬೇಕು ಎಂಬ ಆಸೆ ಇದೆ. ಆದ್ದರಿಂದ ಚುನಾವಣೆಯಲ್ಲಿ ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications