ಬಿಜೆಪಿ ಪ್ರಚಾರ ಕಾರ್ಯಕ್ಕೆ ಏ.21ರಂದು ಚಾಲನೆ
ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ರಾಜ್ಯದ ಹತ್ತು ಭಾಗಗಳಲ್ಲಿ ಪಕ್ಷದ ರಾಷ್ಟ್ರೀಯ ನಾಯಕರು ಭಾನುವಾರವೇ ಚಾಲನೆ ನೀಡಲಿದ್ದಾರೆ.
ಏ.21 ರಂದು ಎಲ್.ಕೆ. ಆಡ್ವಾಣಿ ಅವರು ರಾಣಿಬೆನ್ನೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಲಿದ್ದು, ನಂತರ ದಾವಣಗೆರೆಯಲ್ಲಿ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದರು.
ಸುಷ್ಮಾ ಸ್ವರಾಜ್ ಹಾಗೂ ಅನಂತಕುಮಾರ್ ಬೆಂಗಳೂರಿನ ಮಲ್ಲೇಶ್ವರಂನಲ್ಲಿ, ರಾಜನಾಥ್ ಸಿಂಗ್ ಬೆಳಗಾವಿ, ಯಮಕನಮರಡಿಯಲ್ಲಿ, ವೆಂಕಯ್ಯನಾಯ್ಡು ರಾಯಚೂರು ಮತ್ತು ಸಿಂಧನೂರಿನಲ್ಲಿ ಪ್ರಚಾರ ಕಾರ್ಯ ಉದ್ಘಾಟಿಸಲಿದ್ದಾರೆ ಎಂದರು.
ಗಂಗಾವತಿಯಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬೀದರ್ ನಲ್ಲಿ ಮತ್ತು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ. ಸದಾನಂದಗೌಡ ಮೈಸೂರಿನಲ್ಲಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ನಾನು ಭಾನುವಾರ ಬೆಳಗ್ಗೆ ಗದಗದಲ್ಲಿ ಪ್ರಚಾರ ನಡೆಸಲಿದ್ದೇನೆ ಎಂದು ಜೋಶಿ ವಿವರಿಸಿದರು.
ರಾಷ್ಟ್ರೀಯ ನಾಯಕರ ಪ್ರಚಾರ : ರಾಷ್ಟ್ರೀಯ ನಾಯಕರು 192, ರಾಜ್ಯ ನಾಯಕರು 140 ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸ್ಥಳೀಯ ನಾಯಕರು, ಸಚಿವರು ಭಾಗವಹಿಸುವ ರೋಡ್ಶೋ, ಸಮಾವೇಶ ಸೇರಿದಂತೆ 1052 ಕಾರ್ಯಕ್ರಮ ಆಯೋಜಿಸಲಾಗಿದೆ. ಒಟ್ಟು 1384 ಕಾರ್ಯಕ್ರಮಗಳನ್ನು ನಡೆಸಿ ಪ್ರಚಾರ ಮಾಡಲು ಪಕ್ಷ ಯೋಜನೆ ರೂಪಿಸಿದೆ ಎಂದರು.
ಅಧಿವೇಶನ ಕಾರಣ : ಏ.22ರಿಂದ ಲೋಕಸಭೆ ಅಧಿವೇಶನದಲ್ಲಿ ಪ್ರಾರಂಭವಾಗಲಿದೆ. ರಾಷ್ಟ್ರೀಯ ನಾಯಕರು ನಂತರ ಲಭ್ಯವಾಗುವುದಿಲ್ಲ. ಆದ್ದರಿಂದ ರಾಷ್ಟ್ರೀಯ ನಾಯಕರ ಕಾರ್ಯಕ್ರಮವನ್ನು ಏ.21ರಂದೇ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮೋದಿ ಆಗಮಿಸುತ್ತಾರೆ : ಏ.28ರಂದು ಬೆಂಗಳೂರಿನಗೆ ಆಗಮಿಸುವುದಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ, ಅಧಿಕೃತವಾಗಿ ಪ್ರಕಟಿಸಿಲ್ಲ. ಏ.30ರೊಳಗೆ ಮೋದಿ ಒಂದು ದಿನ ರಾಜ್ಯ ಪ್ರವಾಸ ಕೈಗೊಂಡು ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದರು.
ಇಂದು ಪ್ರಣಾಳಿಕೆ ಬಿಡುಗಡೆ: ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಇಂದು ರಾಜ್ಯ ಬಿಜೆಪಿ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.