ಗೌಡ್ರ ಪಿತೂರಿಯಿಂದ ಸಿಎಂ ಕುರ್ಚಿ ಮಿಸ್ ಆಯ್ತು
ಬುಧವಾರ ಕಾಂಗ್ರೆಸ್ ಶಾಸಕ ಸುರೇಶ್ಗೌಡ ನಾಮಪತ್ರ ಸಲ್ಲಿಸಿದ ನಂತರ ನಾಗಮಂಗಲದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ಆಯೋಜಿಸಿದ್ದರು. ಮೈಕ್ ಹಿಡಿದು ನಿಂತ ಸಿದ್ದರಾಮಯ್ಯ ಅವರು ಫ್ಲಾಶ್ ಬ್ಯಾಕ್ ಗೆ ಹೋಗಿಬಿಟ್ಟರು.
ನನ್ನನ್ನು ಮುಖ್ಯಮಂತ್ರಿ ಮಾಡಬಾರದು ಎಂದು ಮಾಜಿ ಪ್ರಧಾನಿ ದೇವೇಗೌಡರು ಭಾರಿ ಪಿತೂರಿ ಮಾಡಿದರು. ಮೋಸ ಮಾಡಿ ಪಕ್ಷದಿಂದ ಹೊರಹಾಕಿದರು. ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷಕ್ಕೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.
ರಾಜ್ಯದಲ್ಲಿ ಕೇವಲ ನಾಲ್ಕು ಜಿಲ್ಲೆಯಲ್ಲಿ ಮಾತ್ರ ಜೆಡಿಎಸ್ ನೆಲೆಯಿದ್ದು, ಬೇರೆ ಎಲ್ಲೂ ಇಲ್ಲ. ಬಿಜೆಪಿ, ಕೆಜೆಪಿ, ಬಿಎಸ್ಆರ್ ಪಕ್ಷಗಳೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನೆಲೆ ಇಲ್ಲದ ಪಕ್ಷಗಳಾಗಿವೆ. ಜೆಡಿಎಸ್ 20 ರಿಂದ 30 ಸೀಟು ಗೆದ್ದುಕೊಂಡರೂ ಸರ್ಕಾರ ರಚಿಸಲು ಸಾಧ್ಯವಿಲ್ಲ. ಈಗಾಗಲೇ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ವಿಫಲವಾಗಿದೆ. ಜನತೆ ಸುಭದ್ರ ಸರ್ಕಾರ ಬಯಸಿದ್ದಾರೆ. ಅದು ಕಾಂಗ್ರೆಸ್ನಿಂದ ನೀಡಲು ಮಾತ್ರ ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು.
ಒಂದು ವೇಳೆ ಸಿಎಂ ಕುರ್ಚಿ ಸಿದ್ದರಾಮಯ್ಯ ಅವರಿಗೇನಾದರೂ ಒಲಿದರೆ ದಿವಂಗತ ದೇವರಾಜ ಅರಸು ಅವರ ನಂತರ ಮುಖ್ಯಮಂತ್ರಿ ಸ್ಥಾನಕ್ಕೇರಿದ ಅವಿಭಜಿತ ಮೈಸೂರು ರಾಜಕೀಯ ಮುಖಂಡ ಎಂಬ ಕೀರ್ತಿಗೆ ಒಳಗಾಗುತ್ತಾರೆ.
1996 ರಿಂದಲೂ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಮೈಸೂರು ಜಿಲ್ಲೆಯ ರಾಜಕಾರಣಿ ಎಂದರೆ ಸಿದ್ದರಾಮಯ್ಯ. ಅವರು 1983 ರಿಂದ 2008ರವರೆಗೆ ಒಂದು ಉಪ ಚುನಾವಣೆ ಸೇರಿ ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಸಿದ್ದರಾಮಯ್ಯ 1996ರಲ್ಲಿ ಎಚ್.ಡಿ. ದೇವೇಗೌಡರು ಆಕಸ್ಮಿಕವಾಗಿ ಪ್ರಧಾನಿಯಾದಾಗ ಸಿಎಂ ಆಗಲು ಯತ್ನಿಸಿದರು. ಆದರೆ ಜೆ.ಎಚ್. ಪಟೇಲ್ ಅವರಿಗೆ ಅನಾಯಾಸವಾಗಿ ಸಿಎಂ ಪಟ್ಟ ಒಲಿದು ಬಂದಿತು.
ಮುಂದೆ ಸಮ್ಮಿಶ್ರ ಸರ್ಕಾರಗಳಲ್ಲಿ ಧರಂಸಿಂಗ್ ಹೆಸರು ಮುಂದೆ ಬಂತು. ಈಗ ಜಿ ಪರಮೇಶ್ವರ್ ಅವರ ಜೊತೆ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಅವರು ಪೈಪೋಟಿಯಲ್ಲಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆ ಎದುರಿಸುತ್ತಿದೆ.