49 ಕಂಪನಿಗಳ ಗಣಿಗಾರಿಕೆ ಲೀಸ್ ರದ್ದು

'ಬಿ' ವರ್ಗದ ಗಣಿ ಗುತ್ತಿಗೆಗಳಿಗೆ ಗಣಿಗಾರಿಕೆ ಪುನಾರಂಭಿಸಲು ಷರತ್ತುಬದ್ಧ ಅನುಮತಿ ನೀಡಿದೆ. ಅಕ್ರಮ ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ರಚಿಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ನೀಡಿದ್ದ ಬಹುತೇಕ ಶಿಫಾರಸುಗಳನ್ನು ಅಂಗೀಕರಿಸಿರುವ ಸುಪ್ರೀಂ ಕೋರ್ಟ್, ಹೊಸದಾಗಿ ಗಣಿಗಾರಿಕೆಗೆ ಅನುಮತಿ ನೀಡಬಾರದು ಎಂಬ ಶಿಫಾರಸು ಪುರಸ್ಕರಿಸಿಲ್ಲ.
ನ್ಯಾ. ಅಫ್ತಾಬ್ ಅಲಂ ಅವರಿದ್ದ ನ್ಯಾಯಪೀಠ ಗುರುವಾರ (ಏ. 18) ನೀಡಿರುವ ಆದೇಶದ ಪ್ರಕಾರ ಎ ಮತ್ತು ಬಿ ಕೆಟಗೆರಿಯ ಒಟ್ಟು 18 ಗಣಿ ಕಂಪನಿಗಳು ಒಟ್ಟಾರೆ ಸಂಗ್ರಹದಲ್ಲಿ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸಬಹುದಾಗಿದೆ. ಆದರೆ, ಅದಿರು ರಫ್ತು ಮೇಲಿನ ನಿಷೇಧ ಇನ್ನೂ ಮುಂದುವರೆಯಲಿದೆ. ಜೊತೆಗೆ 49 ಸಿ ಕೆಟಗರಿ ಗಣಿ ಕಂಪನಿಗಳ ಅಕ್ರಮಕ್ಕೆ ಬ್ರೇಕ್ ಹಾಕಲಾಗಿದೆ.
'ಎ' ವರ್ಗದ 23 ಗಣಿ ಗುತ್ತಿಗೆಗಳ ಪೈಕಿ 18 ಗಣಿಗುತ್ತಿಗೆಗಳು ಈಗಾಗಲೇ ಗಣಿಗಾರಿಕೆ ಆರಂಭಿಸಿವೆ. 'ಬಿ' ವರ್ಗದಲ್ಲಿ 63 ಗಣಿ ಗುತ್ತಿಗೆಗಳಿವೆ. 'ಸಿ' ವರ್ಗದ ಗಣಿಗುತ್ತಿಗೆಗಳ ಪೈಕಿ 30 ಬಳ್ಳಾರಿ ಜಿಲ್ಲೆಗೆ ಸೇರಿದ್ದರೆ ಎರಡು ಚಿತ್ರದುರ್ಗ ಮತ್ತು 17 ತುಮಕೂರು ಜಿಲ್ಲಾ ವ್ಯಾಪ್ತಿಗೆ ಸೇರಿವೆ.
2011 ರಲ್ಲಿ ಸಂಪೂರ್ಣ ನಿಷೇಧ ಹೇರಿದ್ದ ಅದೇಶಕ್ಕೆ ಇನ್ನೂ ಹಿನ್ನಡೆ ಎನ್ನಬಹುದು. ಪರಿಸರ ಅಧ್ಯಯನ ತಂಡ ತನ್ನ ವರದಿ ಸಲ್ಲಿಸಿದ ಮೇಲೆ ಕಂಪನಿಗಳು ಮತ್ತೆ ಗಣಿಗಾರಿಕೆ ಆರಂಭಿಸಬಹುದು.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಬಳ್ಳಾರಿ ಜಿಲ್ಲೆಯ 99 ಗಣಿಗಳು ಸೇರಿದಂತೆ ರಾಜ್ಯದ ಗಣಿಗಾರಿಕೆ ಬಗ್ಗೆ ಸಿಇಸಿ ತನ್ನ ವರದಿಯನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಿದೆ.
* ಕರ್ನಾಟಕದಲ್ಲಿ 49 ಗಣಿ ಸಂಸ್ಥೆಗಳ ಲೈಸನ್ ರದ್ದು ಮಾಡುವಂತೆ ವರದಿಯಲ್ಲಿ ಸೂಚಿಸಿತ್ತು.
* ಕರ್ನಾಟಕ ಹಾಗೂ ಆಂಧ್ರಪ್ರದೇಶ ನಡುವೆ ಹೊಸದಾಗಿ ಗಡಿ ರೇಖೆ ಗುರುತಿಸುವವರೆಗೂ 7 ಕಂಪನಿಗಳು ಗಣಿಗಾರಿಕೆ ನಡೆಸುವಂತಿಲ್ಲ
* ವರ್ಷಕ್ಕೆ 30 ಮಿಲಿಯನ್ ಮೆಟ್ರಿಕ್ ಟನ್ ಗಣಿಗಾರಿಕೆಗೆ ಮಾತ್ರ ಅನುಮತಿ.
* ಅತಿಯಾದ ಗಣಿಗಾರಿಕೆಯಲ್ಲಿ ತೊಡಗಿದ್ದ 49 ಕಂಪನಿ ಲೈಸನ್ಸ್ ರದ್ದಿಗೆ ಶಿಫಾರಸು, ಆದೇಶ
* ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗದಲ್ಲಿ ನಿರ್ಬಂಧಿತ ಕಬ್ಬಿಣದ ಅದಿರು ಗಣಿಗಾರಿಕೆಗೆ ಅವಕಾಶ ನೀಡಬಹುದು.
* ಬಳ್ಳಾರಿಯಲ್ಲಿ 25 ಮಿಲಿಯನ್ ಮೆಟ್ರಿಕ್ ಟನ್, ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ 5 ಮಿಲಿಯನ್ ಮೆಟ್ರಿಕ್ ಟನ್ ಗೆ ಅನುಮತಿ
* 72 ಕಂಪನಿಗಳಿಗೆ ದಂಡ, 21 ಕಂಪನಿಗಳಿಗೆ ಪರಿಸರ ರಕ್ಷಣೆ ಯೋಜನೆ ಅನುಗುಣವಾಗಿ ಮಾರ್ಪಾಟು ಮಾಡಲು ಸೂಚನೆ
ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿನ ಗಣಿಗಾರಿಕೆ ನಿಷೇಧ ಆದೇಶವನ್ನು ಹಿಂಪಡೆಯಲಾಗಿದೆ. ಸಿಇಸಿ ತಂಡ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರಾಜ್ಯದಲ್ಲಿ ಗಣಿ ಸಮೀಕ್ಷೆ ನಡೆಸಿ ನೀಡಿರುವ ವರದಿಯನ್ನು ಅರಣ್ಯ ಪೀಠ ಪುರಸ್ಕರಿಸಿದೆ.
ಗಣಿಗಾರಿಕೆ ಪ್ರದೇಶವನ್ನು ಎ,ಬಿ ಹಾಗೂ ಸಿ ಎಂದು ವಿಂಗಡಿಸಲಾಗಿದೆ. ಅಕ್ರಮಗಳ ಆಧಾರದ ಮೇಲೆ ಎ,ಬಿ ಹಾಗೂ ಸಿ ಎಂದು ಗುರುತಿಸಲಾಗುತ್ತದೆ. ಸಿ ಕೆಟಗೆರಿ ಹೆಚ್ಚಿನಯಲ್ಲಿ ಅಕ್ರಮ ಎಸೆಗಿರುವ ಕಂಪನಿಗಳು ಕಂಡು ಬರುತ್ತದೆ.
'ಎ' ವರ್ಗ: ಯಾವುದೇ ನಿಯಮ ಉಲ್ಲಂಘಿಸದೆ ಕಾನೂನುಬದ್ಧವಾಗಿ ಗಣಿಗಾರಿಕೆ ನಡೆಸಿದ ಗುತ್ತಿಗೆದಾರರು. ಆದರೂ ಕೆಲವೊಂದು ಸರಿಪಡಿಸಬಹುದಾದ ತಪ್ಪುಗಳನ್ನು ಎಸಗಿರುವ ಗುತ್ತಿಗೆದಾರರ ವರ್ಗ.
'ಬಿ' ವರ್ಗ: ತಾವು ಪಡೆದ ಲೀಸ್ ಪ್ರದೇಶ ವ್ಯಾಪ್ತಿಯನ್ನು ಮೀರಿ ತಕ್ಕಮಟ್ಟಿಗೆ ಗಣಿಗಾರಿಕೆ ನಡೆಸುವುದು ಮತ್ತು ತಮ್ಮದಲ್ಲದ ಜಾಗದಲ್ಲಿ ಅದಿರು ಸಂಗ್ರಹ ಪ್ರಕ್ರಿಯೆಗಳನ್ನು ನಡೆಸಿರುವ ಗುತ್ತಿಗೆದಾರ ಕಂಪನಿಗಳು.
'ಸಿ' ವರ್ಗ: ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸಂಪೂರ್ಣವಾಗಿ ಅಕ್ರಮವಾಗಿಯೇ ಗಣಿಗಾರಿಕೆ ನಡೆಸಿರುವುದು. ತಮಗೆ ನೀಡಿದ ಲೀಸ್ ಪ್ರದೇಶ ಮಾತ್ರವಲ್ಲದೆ ಅತಿಕ್ರಮವಾಗಿ ಬೇರೆ ಪ್ರದೇಶದಲ್ಲಿ ಪೂರ್ತಿಯಾಗಿ ಗಣಿಗಾರಿಕೆ ನಡೆಸುವುದು. ಅಷ್ಟೇ ಅಲ್ಲದೆ, ಪರಿಸರ ಪುನಶ್ಚೇತನಗೊಳಿಸಲು ಸಾಧ್ಯವಾಗದಷ್ಟು ಅಕ್ರಮ ಗಣಿಗಾರಿಕೆ ನಡೆಸಿರುವ ಕಂಪನಿಗಳು ಈ ವರ್ಗದಲ್ಲಿವೆ.
ಎ ಕೆಟಗೆರಿ ಕಂಪನಿಗಳಿಗೆ ಅನುಮತಿ ನೀಡುವುದರ ವಿರುದ್ಧ ಸಮಾಜ ಪರಿವರ್ತನಾ ಸಮುದಾಯದ ಎಸ್ ಆರ್ ಹಿರೇಮಠ್ ಅವರು ಆಕ್ಷೇಪಣೆ ಸಲ್ಲಿಸಿದ್ದರು. ಆಕ್ಷೇಪಣಾ ಅರ್ಜಿಯನ್ನು ಸ್ವೀಕರಿಸಿದ ಅರಣ್ಯಪೀಠ, ಈ ಬಗ್ಗೆ ಪರಿಶೀಲಿಸಿ ಪ್ರತ್ಯೇಕ ವರದಿ ಸಲ್ಲಿಸುವಂತೆ ಸಿಇಸಿಗೆ ಸೂಚಿಸಿದೆ.
ಅಕ್ರಮ ಗಣಿಗಾರಿಕೆ ಯಿಂದ ರಾಜಸ್ವ ಸಂಗ್ರಹಣೆಯಲ್ಲಿ ರಾಜ್ಯ ಬೊಕ್ಕಸಕ್ಕೆ 3,414.45 ಕೋಟಿ ರೂ. ನಷ್ಟವಾಗಿದ್ದು, ಒಟ್ಟಾರೆ ಗಣಿಗಾರಿಕೆಯಿಂದ ಸರಕಾರದ ಬೊಕ್ಕಸಕ್ಕೆ 25 ಸಾವಿರ ಕೋಟಿ ರೂ. ಹಾನಿ ಸಂಭವಿಸಿದೆ ಎಂದು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪಾಲ (ಸಿಎಜಿ)ರ ವರದಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications