ತಿರುಪತಿ ಹುಂಡಿಗೆ ಎಷ್ಟು ಹಾಕಿದ್ರು ಕಮ್ಮಿನೇ?
ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಎನ್ನಾರೈಯೊಬ್ಬರು ವೆಂಕಟೇಶ್ವರ ದೇವರಿಗೆ ಸುಮಾರು 16 ಕೋಟಿ ರು ಮೊತ್ತದ ದಾನ ಮಾಡಿದ್ದಾರೆ. ಬೆಟ್ಟದ ದೇವರು ತಿಮ್ಮಪ್ಪನಿಗೆ ದಾನಿ ಮಾಡಿದ ಉದ್ಯಮಿಯನ್ನು ಎಂ ರಾಮಲಿಂಗ ರಾಜು ಎಂದು ಗುರುತಿಸಲಾಗಿದೆ.
ದೇಗುಲದ ಹುಂಡಿಗೆ ಬೇನಾಮಿ ಹೆಸರಿನಲ್ಲಿ ಕಾಣಿಕೆ ಸಲ್ಲಿಸುವುದು ಮಾಮೂಲಿ. ಕೆಲವರು ನಗದು, ಆಭರಣಗಳನ್ನು ಹಾಕಿದರೆ ಮತ್ತೆ ಕೆಲವರು ಚೆಕ್ ರೂಪದಲ್ಲಿ ಕಾಣಿಕೆ ಹರಕೆ ತೀರಿಸಿಕೊಳ್ಳುತ್ತಾರೆ. ಆದರೆ, ರಾಮಲಿಂಗ ರಾಜು ಅವರು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ತಮ್ಮ ಕಾಣಿಕೆ ನೀಡಿರುವುದು ವಿಶೇಷ ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ.
ಎನ್ನಾರೈ ಭಕ್ತರಿಂದ ದಾನ ಸ್ವೀಕಾರ ನಿರಂತರವಾಗಿ ನಡೆದು ಬಂದಿದೆ. ಆದರೆ, ಇದೇ ಮೊದಲ ಬಾರಿಗೆ ಎಷ್ಟು ದೊಡ್ಡ ಮೊತ್ತದ ಕಾಣಿಕೆ ಹುಂಡಿ ತುಂಬಿದೆ. ಅದರಲ್ಲೂ ಡಿಡಿ ಮೂಲಕ ಕಾಣಿಕೆ ನೀಡಿರುವುದು ವಿಶೇಷ ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನಂ(TTD) ಚೇರ್ಮನ್ ಕೆ ಬಾಪಿರಾಜು ಹಾಗೂ ಜಂಟಿ ಕಾರ್ಯಕಾರಿ ಅಧಿಕಾರಿ ಕೆಎಸ್ ಶ್ರೀನಿವಾಸು ರಾಜು ಅವರ ಸಮ್ಮುಖದಲ್ಲಿ ರಾಮಲಿಂಗ ರಾಜು ಅವರು ಕಾಣಿಕೆ ದೇವರಿಗೆ ಅರ್ಪಿಸಿದ್ದಾರೆ.
ಕಾಣಿಕೆ ಮೊತ್ತದಲ್ಲಿ 11 ಕೋಟಿ ರು ಗಳನ್ನು ದೇವರ ಕೊರಳಿಗೆ ಸಹಸ್ರ ನಾಮ ಬರೆದಿರುವ ಚಿನ್ನದ ಹಾರ ಮಾಡಿ ಹಾಕುವಂತೆ ರಾಜು ಮನವಿ ಸಲ್ಲಿಸಿದ್ದಾರೆ. ಸುಮಾರು 35 ಕೆಜಿ ತೂಗುವ ಹಾರ ತಿಮ್ಮಪ್ಪನ ಕೊರಳಲ್ಲಿ ಶೋಭಿಸಲಿದೆ. ಮಿಕ್ಕ 5 ಕೋಟಿ ರು ಗಳನ್ನು ತಿರುಚಣ್ಣೂರಿನಲ್ಲಿ ಉಚಿತ ಅನ್ನದಾನಸೇವೆ ಒದಗಿಸಲು ಕಟ್ಟಡ ನಿರ್ಮಾಣಕ್ಕೆ ಬಳಸುವಂತೆ ಕೋರಿದ್ದಾರೆ.
ಮಾರ್ಚ್ 27 ರಂದು ಚೆನ್ನೈ ಮೂಲದ ಫಾರ್ಮಾ ಸ್ಯೂಟಿಕಲ್ ಕಂಪನಿಯೊಂದು ತಿರುಪತಿ ತಿಮ್ಮಪ್ಪನಿಗೆ 2 ಕೋಟಿ ರು ದಾನ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ವೈಯಕ್ತಿಕವಾಗಿ ಅತಿ ಹೆಚ್ಚಿನ ಮೊತ್ತದ ಕಾಣಿಕೆ ನೀಡಿದವರ ಪಟ್ಟಿಯಲ್ಲಿ ಎನ್ನಾರೈ ರಾಮಲಿಂಗ ರಾಜು ಹೆಸರು ಮೊದಲಿನಲ್ಲಿದೆ.