ಯಡಿಯೂರಪ್ಪ ಸಚಿವ ಸ್ಥಾನ ಕಿತ್ತುಕೊಂಡರು : ಬೇಳೂರು
ಯಡಿಯೂರಪ್ಪ ಸ್ವ ಕ್ಷೇತ್ರ ಶಿಕಾರಿಪುರದಲ್ಲಿ ಬುಧವಾರ ಜೆಡಿಎಸ್ ಅಭ್ಯರ್ಥಿ ಬಳಿಗಾರ್ ಪರವಾಗಿ ಪ್ರಚಾರ ಕಾರ್ಯ ನಡೆಸಿದ ಬೇಳೂರು, ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರುದ್ಧ ಗುಡುಗಿದರು. ತಮಗೆ ಮಂತ್ರಿಸ್ಥಾನ ನೀಡಿದರೆ, ಅವರಿಗೆ ಹಿನ್ನೆಡೆ ಉಂಟಾಗುತ್ತದೆ ಎಂದು ಮಂತ್ರಿ ಪದವಿ ತಪ್ಪಿಸಿದರು ಎಂದು ದೂರಿದರು.
ಯಡಿಯೂರಪ್ಪ ಪ್ರಾಮಾಣಿಕ ರಾಜಕಾರಣಿ, ರೈತಪರ ಕಾಳಜಿ ಹೊಂದಿರುವ ಕಾಳಜಿ ಇರುವ ನಾಯಕರಾಗಿದ್ದರೆ, ಹಾವೇರಿಯಲ್ಲಿ ರೈತ ಗುಂಡಿಗೆ ಬಲಿಯಾದಾಗ ಕಣ್ಣೀರು ಹಾಬೇಕಿತ್ತು. ಆದರೆ, ಕೆಲವರನ್ನು ಸಚಿವ ಸ್ಥಾನದಿಂದ ಇಳಿಸುವಾಗ ಯಾಕೆ ಕಣ್ಣೀರು ಹಾಕಿದರು ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪ ಜೊತೆ ಸರಿಯಾಗಿ ಹತ್ತು ಜನ ಶಾಸಕರಿಲ್ಲ. ಅತ್ಯಾಚಾರ ಮಾಡಿದವರು, ಭ್ರಷ್ಟಾಚಾರಿಗಳು ಅವರ ಜೊತೆಯಿದ್ದಾರೆ. ಕೆಜೆಪಿ ಎಂದರೆ ಕಾಮುಕರು, ಭ್ರಷ್ಟರ ಪಕ್ಷ ಎಂದು ಛೇಡಿಸಿದರು. ಯಡಿಯೂರಪ್ಪ ಅವರಿಗೆ ಈ ಚುನಾವಣೆಯಲ್ಲಿ ಜನತೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದರು.
ರಾಘವೇಂದ್ರ ಏಕೆ ಸ್ಪರ್ಧಿಸಿಲ್ಲ : ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಚುನಾವಣೆಗೆ ನಿಂತರೆ ಗೆಲುವು ಸಾಧಿಸುವುದು ಕಷ್ಟ. ಆದ್ದರಿಂದ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿಲ್ಲ. ಯಡಿಯೂರಪ್ಪ ಪುತ್ರರು ರಾಜಕಾರಣಿಗಳಲ್ಲ, ಅವರು ಉದ್ಯಮಿಗಳು ಎಂದು ಬೇಳೂರು ವಾಗ್ದಾಳಿ ಮಾಡಿದರು.
ಈಶ್ವರಪ್ಪ ಮಹಿಷಾಸುರ : ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮೈಸೂರಿನ ಮಹಿಷಾಸುರ ಇದ್ದಂತೆ, ಬಾಯಿ ಬಿಟ್ಟರೆ ಹೊಡಿ, ಬಡಿ, ಕಡಿ ಎಂದು ಮಾತನಾಡುತ್ತಾರೆ. ಆದರೆ ದೇಶ ಕಾಯುವ, ಸಂಸ್ಕೃತಿ ಕಾಪಾಡುವ ಬಗ್ಗೆ ಮಾತನಾಡುತ್ತಾರೆ ಎಂದು ಛೇಡಿಸಿದರು.
ಕಾಗೋಡು ವಿರುದ್ಧ ಕಿಡಿ : ಸಾಗರ ಕ್ಷೇತ್ರದಲ್ಲಿ 83 ವರ್ಷದ ಕಾಗೋಡು ತಿಮ್ಮಪ್ಪ ಕಾಂಗ್ರೆಸ್ ಟಿಕೆಟ್ ಪಡೆದಿದ್ದಾರೆ. ಅವರು ಈ ಬಾರಿಯೂ ಸೋಲುವುದು ಖಂಡಿತ. ಇದು ಕಾಗೋಡು ಅವರ ಕೊನೆಯ ಚುನಾವಣೆ ಎಂದು ಭವಿಷ್ಯ ನುಡಿದರು.
ಹೊಸ ತಂತ್ರ : ಜೆಡಿಎಸ್ ಬಲ ಹೆಚ್ಚಿಸಲು ಪ್ರಯತ್ನಿಸುತ್ತಿರುವ ಬೇಳೂರು, ಮಧು ಬಂಗಾರಪ್ಪ ಮತ್ತು ಹೆಚ್.ಟಿ.ಬಳಿಗಾರ್ ಸಾಗರ, ಸೊರಬ, ಶಿಕಾರಿಪುರ ಕ್ಷೇತ್ರಗಳಲ್ಲಿ ಎಲ್ಲರೂ ಒಟ್ಟಾಗಿ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಮೂವರು ಗೆಲುವು ಸಾಧಿಸಿ ಜಿಲ್ಲೆಯಲ್ಲಿ ಪಕ್ಷವನ್ನು ಬಲ ಪಡಿಸಬೇಕು ಎಂಬುದು ಎಲ್ಲರ ಗುರಿಯಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ