ಚುನಾವಣೆ: ಯುಗಾದಿ ಸಂಗೀತೋತ್ಸವ ವೇಳೆ ಬದಲು
ಬೆಂಗಳೂರು, ಏ.11: ನಗರದ ಪ್ರತಿಷ್ಠಿತ ಸಾಂಸ್ಕೃತಿಕ ಕಾರ್ಯಕ್ರಮವಾದ ಶ್ರೀರಾಮನವಮಿ ಸಂಗೀತೋತ್ಸವ ಇಂದಿನಿಂದ ಆರಂಭಗೊಳ್ಳಲಿದೆ. ಈ ಮಹಾನ್ ಉತ್ಸವಕ್ಕೆ ಕೋಟೆ ಹೈಸ್ಕೂಲ್ ಮೈದಾನ ಸಜ್ಜಾಗಿದ್ದು, ಚುನಾವಣೆ ಕಾರಣ ವೇಳಾಪಟ್ಟಿ ಕೊಂಚ ಬದಲಾಯಿಸಬೇಕಾಯಿತು ಎಂದು ಆಯೋಜಕರು ಹೇಳಿದರು.
ರಾಮನವಮಿ ಸಂಗೀತೋತ್ಸವಕ್ಕೆ ಈಗ ಅಮೃತ ಮಹೋತ್ಸವ (75 ವರ್ಷ) ಸಂಭ್ರಮವಾಗಿದ್ದು, ಸಂಗೀತ ಪ್ರಿಯರಿಗೆ ರಸದೌತಣ ಕಾದಿದೆ. ಆರಂಭದ ದಿನ ಯು.ಶ್ರೀನಿವಾಸ್ ಹಾಗೂ ಯು. ರಾಜೇಶ್ ಅವರ ಮ್ಯಾಂಡೋಲಿನ್ ವಾದನ ಕಾರ್ಯಕ್ರಮ ಇರುತ್ತದೆ.
ಪ್ರತಿ ದಿನ ಸಂಗೀತ ಕಚೇರಿ ಸಮಯ : ಸಂಜೆ 5.30 ರಿಂದ 9.30ರ ತನಕ ನಡೆಯಲಿದೆ. ಮೇ.1 ರವರೆಗಿನ ಕಾರ್ಯಕ್ರಮಗಳಿಗೆ ಸೀಸನ್ ಪಾಸ್ ಅನ್ವಯವಾಗಲಿದೆ. ಟಿಕೆಟ್ ಹಾಗೂ ಪಾಸ್ ಹಾಗೂ ಹೆಚ್ಚಿನ ಮಾಹಿತಿ ಸಂಪರ್ಕಿಸಿ: 94480 79079/ 080-2660 4031

ಖ್ಯಾತ ನಾಮರಾದ ಕದ್ರಿ ಗೋಪಾಲನಾಥ್, ರಾಜನ್ ಮಿಶ್ರ, ಸಾಜಕ್ ಮಿಶ್ರ, ಕೆ.ಕೆ ಯೇಸುದಾಸ್, ನಿತ್ಯಶ್ರೀ ಮಹಾದೇವನ್, ಶಶಾಂಕ್ ಮತ್ತು ರಾಜೇಶ್ ಚೌರಾಸಿಯಾ ಅವರಿಂದ ಕೊಳಲು ಬಾನ್ಸುರಿ ದ್ವಂದ್ವ ವಾದನ ಇದೆ.
ಮೇ.16ರ ತನಕ ಸಂಗೀತೋತ್ಸವ ನಡೆಯಲಿದೆ.ಮೇ.1 ರಂದು ಎಸ್.ವಿ ನಾರಾಯಣಸ್ವಾಮಿ ರಾವ್ ಸ್ಮಾರಕ ಪ್ರಶಸ್ತಿಯನ್ನು ಡಾ.ಎ ನ್ ರಮಣಿ ಅವರಿಗೆ ನೀಡಲಾಗುತ್ತದೆ. ಮೇ.4 ರಂದು ಶ್ರೀರಾಮಪಟ್ಟಾಭಿಷೇಕ, ಮೇ 12 ರಂದು ಪ್ರತಿಭಾಕಾಂಕ್ಷಿ ಪ್ರಶಸ್ತಿ ಪ್ರದಾನ, ಮೇ.16 ರಂದು ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ವತಿಯಿಂದ ವಸಂತೋತ್ಸವ ನಡೆಯಲಿದೆ.
ಇದಲ್ಲದೆ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಅವರಿಂದ ಏ.29 ರಿಂದ ಮೇ 4 ರವರೆಗೆ ವಾಲ್ಮೀಕಿ ರಾಮಾಯಣ ಕುರಿತು ಉಪನ್ಯಾಸವಿರುತ್ತದೆ. ಏ.24 ರಿಂದ ಏ.28ರವರೆಗೆ ಬನ್ನಂಜೆ ಗೋವಿಂದಾಚಾರ್ಯ ಅವರಿಂದ ರಾಮಚರಿತ ಮಂಜರಿ ಉಪನ್ಯಾಸವಿರುತ್ತದೆ. ಹೆಚ್ಚಿನ ವಿವರಗಳಿಗೆ ಈ ಪುಟಕ್ಕೆ ಭೇಟಿ ಕೊಡಿ












Click it and Unblock the Notifications