ಐಟಿ ಬಿಟಿಗೂ ಜೆಡಿಎಸ್ ಗೂ ನಂಟಿದೆ : ಎಚ್ಡಿಕೆ
ಬೆಂಗಳೂರು,ಏ.8: ಮಾಜಿ ಪ್ರಧಾನಿ ದೇವೇಗೌಡರು ಹೈಟೆಕ್ ಡ್ರೆಸ್ ಹಾಕಿಕೊಳ್ಳದೆ ಇರಬಹುದು. ಆದರೆ ಐಟಿಬಿಟಿ ವಿರೋಧಿಯಲ್ಲ. ಅಭಿವೃದ್ಧಿ ಪೂರಕವಾದ ಧೋರಣೆಯನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡವರು. ಅಭಿವೃದ್ಧಿ ವಿಚಾರದಲ್ಲಿ ಯಾವತ್ತು ಅವರು ಮುಂದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು
ಬೆಂಗಳೂರು ನಗರದ ಅಭಿವೃದ್ಧಿ ವಿಚಾರದಲ್ಲಿ ದೇವೇಗೌಡರನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಖಳನಾಯಕರಂತೆ ಬಿಂಬಿಸುವ ಕೆಲಸವನ್ನು ಮಾಡುತ್ತಿವೆ. ಅವರು ಯಾವತ್ತು ಅಭಿವೃದ್ಧಿ ವಿರೋಧಿಯಲ್ಲ. ಐಟಿಬಿಟಿ ಜನ ತಮ್ಮಲ್ಲಿರುವ ಅಪನಂಬಿಕೆಗಳನ್ನು ತೊಡೆದು ಹಾಕಿ ಜೆಡಿಎಸ್ಗೆ ಮತ ಹಾಕಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮನವಿ ಮಾಡಿದರು.

ದೇವೇಗೌಡರ ಬೆಂಬಲ ನನಗಿದೆ ಎಂದು ಉಪಮುಖ್ಯಮಂತ್ರಿ ಆರ್.ಅಶೋಕ್ ಅಪಪ್ರಚಾರ ಮಾಡುವ ಸಾಧ್ಯತೆ ಇದೆ. ಅವರ ಸುಳ್ಳಿನ ಕಂತೆಗೆ ಮತದಾರರು ಬೆಲೆ ಕೊಡಬೇಡಿ ಎಂದು ಕುಮಾರಸ್ವಾಮಿ ತಿಳಿಸಿದರು.
ಪದ್ಮನಾಭನಗರ ಅಸೆಂಬ್ಲಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಡಾ.ಆರ್.ಎಂ.ವಿ.ಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಸಾಮಾಜಿಕ ಕಳಕಳಿ ಮತ್ತು ಸೇವೆಯನ್ನು ಗುರುತಿಸಿ ಅವರಿಗೆ ಟಿಕೆಟ್ ನೀಡಿ ಜೆಡಿಎಸ್ ಪಕ್ಷ ಕಣಕ್ಕಿಳಿಸಿದೆ. ಜಾತಿ ವ್ಯಾಮೋಹಕ್ಕೆ ಒಳಗಾಗದೆ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಜೆಡಿಎಸ್ ಗೆ ಐಟಿ ರುಚಿ ಹತ್ತಿದ್ದು ಹೇಗೆ?: ಸದ್ಯಕ್ಕೆ ಬಿಜೆಪಿ, ಕೆಜೆಪಿ ಬಿಟ್ಟರೆ ಜೆಡಿಎಸ್ ಮಾತ್ರ ವೆಬ್ ಲೋಕದಲ್ಲಿ ಉತ್ತಮ ವೆಬ್ ತಾಣವನ್ನು ಹೊಂದಿದೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಅಭ್ಯರ್ಥಿಗಳು ಈಗ ಐಟಿ ಲೋಕದಲ್ಲಿ ತೇಲುತ್ತಿದ್ದಾರೆ. ಫೇಸ್ ಬುಕ್, ಟ್ವಿಟ್ಟರ್, ಯೂಟ್ಯೂಬ್ ವೆಬ್ ಚಾಟ್ ಮೂಲಕ ಪ್ರಚಾರ ಸಾಧ್ಯ ಎಂಬುದನ್ನು ಸಾಬೀತು ಮಾಡಿದ್ದಾರೆ.
ಜೆಡಿಎಸ್ ಐಟಿ ವಿಂಗ್ ನಲ್ಲಿ 3 ಸಾವಿರಕ್ಕೂ ಅಧಿಕ ಸಾಫ್ಟ್ ವೇರ್ ಇಂಜಿನಿಯರ್ ಗಳು ಗುರುತಿಸಿಕೊಂಡಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಆರಂಭವಾದ ಜೆಡಿಎಸ್ ಅಧಿಕೃತ ತಾಣ ಭರ್ಜರಿಯಾಗಿ ಹಿಟ್ ಆಗಿದೆ ಎಂದು ಜೆಡಿಎಸ್ ಐಟಿ ವಿಭಾಗದ ದರ್ಶನ್ ದೇವೇಗೌಡ ಹೇಳಿದ್ದಾರೆ.
ಮಡಿವಾಳದಿಂದ ಎಲೆಕ್ಟ್ರಾನಿಕ್ ಸಿಟಿಗೆ ಎಲಿವೇಟೆಡ್ ಕಾರಿಡರ್ ಯೋಜನೆ, ಬೆಂಗಳೂರಿನಲ್ಲಿ ಒಳ ವರ್ತುಲ ರಿಂಗ್ ರಸ್ತೆ ಮುಂತಾದ ಐಟಿ ವರ್ಗಕ್ಕೆ ಅನುಕೂಲಕರ ಯೋಜನೆಗಳನ್ನು ಎಚ್ ಡಿ ಕುಮಾರಸ್ವಾಮಿ ಕಾಲದಲ್ಲಿ ಅನುಷ್ಠಾನಗೊಂಡಿದ್ದು ಎಂದು ಸಾರಲಾಗುತ್ತಿದೆ. ಸಾಮಾಜಿಕ ಜಾಲ ತಾಣಗಳ ಮೂಲಕ ಸುಮಾರು 50 ರಿಂದ 60 ಲಕ್ಷ ಜನರನ್ನು ತಲುಪುವ ಗುರಿಯನ್ನು ಜೆಡಿಎಸ್ ಐಟಿ ವಿಂಗ್ ಹೊಂದಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications