ರಾಜ್ಯಕ್ಕೆ ಇಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತರು

ಸೋಮವಾರ ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ಆಗಮಿಸುವ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್, ಸಂಜೆ 4 ಗಂಟೆಗೆ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಲಿದ್ದಾರೆ. ಏ.9ರ ಮಂಗಳವಾರ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಡಿಜಿಪಿ, ಐಜಿಪಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸಂಪತ್ ಅವರ ಜೊತೆ ಆಯುಕ್ತರಾದ ಎಚ್.ಎಸ್.ಬ್ರಹ್ಮ, ಡಾ.ಸೈಯದ್ ಅಹಮದ್ ಮುಂತಾದವರು ಆಗಮಿಸಲಿದ್ದಾರೆ. ರಾಜ್ಯ ಚುನಾವಣಾ ಆಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸುವ ಮುಖ್ಯ ಚುನಾವಣಾ ಆಯುಕ್ತರು, ವಿಧಾನಸಭೆ ಚುನಾವಣೆ ಸಿದ್ಧತೆಗಳ ಕುರಿತು ವಿವರವಾದ ಚರ್ಚೆ ನಡೆಸಲಿದ್ದಾರೆ.
ಮತದಾನದ ಸಮಯ ನಿಗದಿ : ಹಿಂದಿನ ಚುನಾವಣೆಗಳಲ್ಲಿ ಮತದಾನ ಬೆ.7ಕ್ಕೆ ಆರಂಭವಾಗುತ್ತಿತ್ತು. 5 ಕ್ಕೆ ಮುಗಿಯುತ್ತಿತ್ತು. ಈ ಬಾರಿ ಕೇಂದ್ರ ಚುನಾವಣಾ ಆಯೋಗ ಬೆ.8ಕ್ಕೆ ಮತದಾನ ಪ್ರಾರಂಭಿಸುವುದಾಗಿ ಘೋಷಿಸಿದೆ. ಆಯೋಗದ ಕ್ರಮ ರಾಜಕೀಯ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತಂತೆ ಇಂದು ಅಂತಿಮ ನಿರ್ಧಾರ ಹೊರಬೀಳುವ ಸಂಭವವಿದೆ.
ಮತಪಟ್ಟಿಗೆ ಹೆಸರು ನೋಂದಾಯಿಸಲು ಭಾನುವಾರ ಕಡೆಯ ದಿನಾಂಕವಾಗಿತ್ತು. ರಾಜ್ಯದಲ್ಲಿ ಒಟ್ಟಾರೆ ಮತ ಪಟ್ಟಿಗೆ ಸೇರಿದವರ ಸಂಖ್ಯೆ, ಗುರುತಿನ ಪತ್ರ ವಿತರಣೆ ಮುಂತಾದ ವಿವರಗಳನ್ನು ಮುಖ್ಯ ಚುನಾವಣಾ ಆಯುಕ್ತರು ಪಡೆಯುವ ಸಾಧ್ಯತೆ ಇದೆ.
ಒಂದು ಲಕ್ಷ ಅರ್ಜಿ : ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಕಡೆಯ ದಿನವಾದ ಭಾನುವಾರ 1.17 ಲಕ್ಷ ಅರ್ಜಿಗಳನ್ನು ಸ್ವೀಕರಿಲಾಗಿದೆ ಎಂದು ವಿಶೇಷ ಚುನಾವಣಾಧಿಕಾರಿ ಡಾ.ವಿಶಾಲ್ ಹೇಳಿದ್ದಾರೆ. ಅರ್ಜಿಗಳ ಪರಿಶೀಲನೆ ನಡೆಸಿ ಏ.17ರಂದು ಅಂತಿಮ ಮತಾದರರ ಪಟ್ಟಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications