ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ಬಿಜೆಪಿ

ಶುಕ್ರವಾರ ಬಿಡುಗಡೆಯಾದ ಪಟ್ಟಿಯಲ್ಲಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ತವರು ಜಿಲ್ಲೆ ಶಿವಮೊಗ್ಗ ಮತ್ತು ಬಿಜೆಒಪಿ ತೊರೆದಿರುವ ಹಾಲಿ ಶಾಸಕರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ. ಬಿಜೆಪಿ ಪಟ್ಟಿಯ ಸಂಪೂರ್ಣ ವಿಶ್ಲೇಷಣೆ ಕೆಳಗಿನಂತಿವೆ.
ಬಳ್ಳಾರಿಯಲ್ಲಿ ರೆಡ್ಡಿಗೆ ಟಿಕೆಟ್ : ಕಳೆದ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಬಿಜೆಪಿಯ ಕಮಲ ಗಣಿಧಣಿಗಳಿಂದಾಗಿ ಅರಳಿತ್ತು. ಈ ಬಾರಿ ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ಮಾಜಿ ಸಚಿವ ಕರುಣಾಕರ ರೆಡ್ಡಿ ಅವರಿಗೆ ಮಾತ್ರ ಟಿಕೆಟ್ ನೀಡಲಾಗಿದೆ. ಬಿಎಸ್ಆರ್ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಸುರೇಶ್ ಬಾಬು, ಸೋಮಶೇಖರ ರೆಡ್ಡಿ ಮುಂತಾದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ.
ಶಿವಮೊಗ್ಗದಲ್ಲಿ ಏಕಾಂಗಿ : ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಮ್ಮ ಸ್ವ ಕ್ಷೇತ್ರದಲ್ಲಿಯೇ ಅಭ್ಯರ್ಥಿಗಳನ್ನು ಹುಡುಕುವಲ್ಲಿ ವಿಫಲರಾಗಿದ್ದಾರೆ. ಪ್ರಬಲ ಕ್ಷೇತ್ರ ಶಿಕಾರಿಪುರ, ಸಾಗರ, ಸೊರಬ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ.
ಕರಾವಳಿಯ ಕಲರವ : ಬಿಜೆಪಿಯ ಭದ್ರಕೋಟೆ ಎಂದು ಹೇಳಿಕೊಳ್ಳುವ ಕರಾವಳಿಯಲ್ಲಿಯೂ ಉಡುಪಿ ಶಾಸಕ ರಘುಪತಿ ಭಟ್ ಬದಲಿಗೆ ಸುಧಾಕರ ಶೆಟ್ಟಿಗೆ ಟಿಕೆಟ್ ನೀಡಲಾಗಿದೆ. ಬೈಂದೂರಿನ ಹಾಲಿ ಶಾಸಕ ಲಕ್ಷ್ಮೀನಾರಾಯಣ್ ಗೆ ಕೊಕ್ ನೀಡಲಾಗಿದೆ. ಪುತ್ತೂರಿನಲ್ಲೂ ಹಾಲಿ ಶಾಸಕಿ ಮಲ್ಲಿಕಾ ಪ್ರಸಾದ್ ಗೆ ಟಿಕೆಟ್ ನೀಡಿಲ್ಲ.
ತೆಂಗಿನ ಕಾಯಿ ಯಾರು ಒಡೆಯುತ್ತಾರೆ : ಹಾಲಿ ಬಿಜೆಪಿ ಶಾಸಕರಾಗಿ ಕಡೂರು, ಶಿರಹಟ್ಟಿ, ನಾಗಠಾಣಾ, ಇಂಡಿ, ರಾಜರಾಜೇಶ್ವರಿ ನಗರ, ಚಿಕ್ಕಪೇಟೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಾಗಿಲ್ಲ. ಪ್ರಬಲ ಕೆಜೆಪಿ ಅಭ್ಯರ್ಥಿಗಳಿರುವ ಕ್ಷೇತ್ರಗಳಲ್ಲೂ ತೆಂಗಿನಕಾಯಿ ಒಡೆಯುವವರು ಯಾರು ಎಂದು ಬಹಿರಂಗಗೊಂಡಿಲ್ಲ.
ಬೆಲ್ಲದ ಪುತ್ರನಿಗೆ ಟಿಕೆಟ್ : ಇತ್ತೀಚೆಗೆ ರಾಜಕೀಯ ನಿವೃತ್ತಿ ಘೋಷಿಸಿದ್ದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರಕಾಂತ ಬೆಲ್ಲದ್ ಅವರ ಪುತ್ರ ಅರವಿಂದ ಬೆಲ್ಲದ್ ಅವರಿಗೆ ಟಿಕೆಟ್ ನೀಡಲಾಗಿದೆ. ಅನಾರೋಗ್ಯಕ್ಕೆ ಒಳಗಾಗಿರುವ ಈಶಣ್ಣ ಗುಳಗಣ್ಣನವರ್ ಬದಲು ಹಾಲಪ್ಪ ಬಸಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.
ಮಟ್ಟೆಣ್ಣವರ್ ಗೆ ಮಣೆ : ಶಾಸಕರ ಭವನಕ್ಕೆ ಬಾಂಬ್ ಇಟ್ಟು ಸುದ್ದಿ ಮಾಡಿದ್ದ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟೆಣ್ಣವರ್ ಗೆ ಗುರುಮಿಟ್ಕಲ್ ಕ್ಷೇತ್ರದಿಂದ ಅವಕಾಶ ನೀಡಲಾಗಿದೆ. ಮೈಸೂರಿನ ಮೂಡ ಅಧ್ಯಕ್ಷರಾಗಿದ್ದ ಬಿ.ನಾಗೇಂದ್ರ ಅವರಿಗೆ ಚಾಮರಾಜ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. (ಬಿಜೆಪಿ ಅಭ್ಯರ್ಥಿಗಳ ಪಟ್ಟಿ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications