ಬಿಜೆಪಿಗೆ ಮೂವರ ರಾಜೀನಾಮೆ : ಕೆಜೆಪಿಗೆ ಸೇರ್ಪಡೆ

ಗುರುವಾರ ವಿಧಾನಸೌಧಕ್ಕೆ ಆಗಮಿಸಿದ ಜಗಳೂರು ಕ್ಷೇತ್ರದ ಶಾಸಕ ಎಸ್.ವಿ.ರಾಮಚಂದ್ರ ಮತ್ತು ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸ್ಪೀಕರ್ ಕೆ.ಜಿ.ಬೋಪಯ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದರು. ವಿಧಾನ ಪರಿಷತ್ ಸದಸ್ಯ ಶಿವರಾಜ್ ಸಜ್ಜನ್ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿಯವರನ್ನು ಭೇಟಿಯಾಗಿ ರಾಜೀನಾಮೆ ನೀಡಿದರು.
ರಾಜೀನಾಮೆ ನೀಡಿದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಈಗಾಗಲೇ ಕೆಜೆಪಿ ಸೇರಿದ್ದಾರೆ. ಎಸ್.ವಿ.ರಾಮಚಂದ್ರ ಮತ್ತು ಶಿವರಾಜ್ ಸಜ್ಜನ್ ಕೆಜೆಪಿ ಸೇರುವುದಾಗಿ ಘೋಷಿಸಿದ್ದು, ಅಧಿಕೃತವಾಗಿ ಸೇರ್ಪಡೆಗೊಂಡಿಲ್ಲ. ಏ.8ರಂದು ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷ ಸೇರ್ಪಡೆಗೊಳ್ಳುವುದಾಗಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಿವರಾಜ್ ಸಜ್ಜನ್ ಯಡಿಯೂರಪ್ಪ ಜೊತೆಗೆ ಹಿಂದಿನಿಂದಿಲೂ ಗುರುತಿಸಿಕೊಂಡಿದ್ದರು. ಬ್ಯಾಡಗಿ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಸಜ್ಜನ್ ತಿಳಿಸಿದ್ದಾರೆ.
ದಾವಣಗೆರೆ ಕೆಜೆಪಿ ಪ್ರಾಬಲ್ಯ : ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿಯ ಹಾಲಿ ಬಿಜೆಪಿಯ ನಾಲ್ವರು ಶಾಸಕರು ರಾಜೀನಾಮೆ ನೀಡಿದ್ದು ಪಕ್ಷಕ್ಕೆ ಬಹುದೊಡ್ಡ ನಷ್ಟ ಉಂಟುಮಾಡಿದೆ. ಹೊನ್ನಾಳಿ ಶಾಸಕ ರೇಣುಕಾಚಾರ್ಯ, ಹರಿಹರ ಶಾಸಕ ಬಿ.ಪಿ.ಹರೀಶ್, ಜಗಳೂರು ಶಾಸಕ ಎಸ್.ವಿ.ರಾಮಚಂದ್ರ, ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಕೆಜೆಪಿ ಸೇರಿದ್ದಾರೆ.
ರಾಜೀನಾಮೆ ಪರ್ವ : ಗುರುವಾರ ಬಿಜೆಪಿ ಪಕ್ಷಕ್ಕೆ ರಾಜೀನಾಮೆಯ ಪರ್ವ ಎಂದರೂ ತಪ್ಪಾಗಲಾರದು. ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮತ್ತು ಮಾಜಿ ಸಚಿವ ರಾಜೂಗೌಡ ಬಿಜೆಪಿ ತೊರೆಯುವುದಾಗಿ ಘೋಷಿಸಿದ್ದಾರೆ. ಇತ್ತ ಮೂವರು ಸ್ಪೀಕರ್ ಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ವಸತಿ ಸಚಿವ ಸೋಮಣ್ಣ ಬಿಜೆಪಿ ಬಿಡುವುದಿಲ್ಲ ಎಂದು ಇಂದು ಬೆಳಗ್ಗೆ ಘೋಷಿಸಿದ್ದಾರೆ. ವಿಧಾನಸಭೆ ಚುನಾವಣೆ ಸಿದ್ಧತೆಯಲ್ಲಿ ತೊಡಗಿರುವ ಬಿಜೆಪಿಗೆ ಒಟ್ಟಾರೆ ಎಷ್ಟು ಶಾಸಕರು ಗುಡ್ ಬೈ ಹೇಳಲಿದ್ದಾರೆ ಎಂಬುದರ ಕುರಿತು ಇನ್ನೂ ಸ್ಪಷ್ಟ ಮಾಹಿತಿ ದೊರೆಯುತ್ತಿಲ್ಲ.
ಇದುವರೆಗೂ ಬಿಜೆಪಿ ತೊರೆದಿರುವ ಶಾಸಕರು
* ಬಿ.ಎಸ್.ಯಡಿಯೂರಪ್ಪ
* ಶೋಭಾ ಕರಂದ್ಲಾಜೆ
* ಸಿ.ಎಂ.ಉದಾಸಿ
* ಶಂಕರಲಿಂಗೇಗೌಡ
* ಮಾನಪ್ಪ ವಜ್ಜಲ್
* ಸಿ.ಪಿ.ಯೋಗೇಶ್ವರ್
* ರಾಜೂಗೌಡ
* ಮಾಡಾಳು ವಿರೂಪಾಕ್ಷಪ್ಪ
* ಎಸ್.ವಿ.ರಾಮಚಂದ್ರ
* ನೆಹರು ಓಲೇಕರ್
* ಎಂ.ಪಿ.ರೇಣುಕಾಚಾರ್ಯ
* ಹರತಾಳು ಹಾಲಪ್ಪ
* ಎಂ.ಚಂದ್ರಪ್ಪ
* ವಿಠಲ ಕಟಕದೊಂಟ
* ಬಸವರಾಜ ಪಾಟೀಲ್ ಅಟ್ಟೂರು
* ಚಿಕ್ಕನಗೌಡರ್
* ಜಿ.ಸುರೇಶ್
* ಸುನೀಲ್ ವಲ್ಯಾಪುರೆ
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications