ರಾಮುಲು ಮೈತ್ರಿ 'ಸದ್ಯಕ್ಕಿಲ್ಲ' ಎಂದ ಕುಮಾರಸ್ವಾಮಿ

ಜೆಡಿಎಸ್ ವಕ್ತಾರರು ಮತ್ತು ಸ್ವತಃ ಶ್ರೀರಾಮುಲು ಅವರು ಜೆಡಿಎಸ್ ಜೊತೆಗಿನ ಮೈತ್ರಿ ಖಾತ್ರಿ ಎಂದು ಹೇಳಿಕೊಂಡಿದ್ದರು. ಇದಕ್ಕೆ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಅಡ್ಡಗಾಲು ಹಾಕಿದ್ದರು. ಆದರೆ ಮೈತ್ರಿ ಸದ್ಯಕ್ಕಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಅಂದರೆ, ಮುಂದಿನ ದಿನಗಳಲ್ಲಿ ಮೈತ್ರಿಕೂಟ ಸಂಭವಿಸುವುದಾ? ಬಲ್ಲವರಾರು? ಆದರೆ ಮೈತ್ರಿ ಮುರಿದುಬಿದ್ದಿರುವ ದಿನವೇ ಬಿಎಸ್ಆರ್ ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.
ರಾಜಕೀಯ ರಿಯಾಲಿಟಿ ಶೋ : ಏಪ್ರಿಲ್ 9, ಮಂಗಳವಾರ ಬೆಂಗಳೂರಿನಲ್ಲಿ ನಡೆಸಲಾಗುವ ಬೃಹತ್ ಸಮಾವೇಶದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯ ಎಲ್ಲ 224 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಏಕಕಾಲಕ್ಕೆ ಅಧಿಕೃತವಾಗಿ ಪ್ರಕಟಿಸಲಾಗುವುದು ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಮುಂದಿನ ಮಂಗಳವಾರ ನಡೆಸಲಾಗುವ ಬೃಹತ್ ಸಮಾವೇಶದಲ್ಲಿ ಅಭ್ಯರ್ಥಿಗಳ ಹೆಸರು ಬಹಿರಂಗಪಡಿಸುವುದಲ್ಲದೆ, ಎಲ್ಲರು ಭ್ರಷ್ಟಾಚಾರದಲ್ಲಿ ಭಾಗಿಯಾಗುವುದಿಲ್ಲ ಮತ್ತು ಸಮಾಜಮುಖಿಯಾಗಿ ಜನರ ಸೇವೆ ಸಲ್ಲಿಸುವುದಾಗಿ ಎಂದು ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ ಎಂದು ಒನ್ಇಂಡಿಯಾ ಕನ್ನಡದ ಪ್ರತಿನಿಧಿಯೊಡನೆ ತಿಳಿಸಿದರು. ಒಟ್ಟಿನಲ್ಲಿ ರಾಜಕೀಯ ರಿಯಾಲಿಟಿ ಶೋ ನಡೆಸಲು ಕುಮಾರ್ ಮುಂದಾಗಿದ್ದಾರೆ.
ಎಲ್ಲ ಪಕ್ಷಗಳು ಹಂತಹಂತವಾಗಿ ಸ್ಪರ್ಧಾಳುಗಳ ಹೆಸರುಗಳನ್ನು ಬಿಡುಗಡೆ ಮಾಡುತ್ತಿದ್ದರೆ, ಕುಮಾರಸ್ವಾಮಿ ಮಾತ್ರ ಒಂದೇ ಹಂತದಲ್ಲಿ ಎಲ್ಲ ಅಧಿಕೃತ ಅಭ್ಯರ್ಥಿಗಳ ಹೆಸರುಗಳನ್ನು ಏಕಕಾಲಕ್ಕೆ ತಿಳಿಸುವುದಾಗಿ ಹೇಳಿದ್ದಾರೆ. ಈ ಮೊದಲು ಮಾರ್ಚ್ 23ರಂದು ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು.
ಮಂಡ್ಯ ಜಿಲ್ಲೆಯ ಮಳವಳ್ಳಿಯ ಹಲಗೂರಿನಲ್ಲಿ ಮಂಗಳವಾರ, ಏ.2ರಿಂದ ರೋಡ್ ಶೋ ನಡೆಸವ ಮುಖಾಂತರ ಚುನಾವಣಾ ಪ್ರಚಾರಕ್ಕೆ ಕುಮಾರಸ್ವಾಮಿ ಅವರು ಚಾಲನೆ ನೀಡಿದರು. ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಭರ್ಜರಿ ರೋಡ್ ಶೋ ಅವರು ನಡೆಸುತ್ತಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ











Click it and Unblock the Notifications