ಕುಮಾರಣ್ಣ ಜತೆ ದೋಸೆ ಮುರಿದ ಸೋಮಣ್ಣ

ಗುರುವಾರ ರಾತ್ರಿ ಶಿವಾನಂದ ಸರ್ಕಲ್ ಬಳಿಯ ಹೋಟೆಲ್ ನಲ್ಲಿ ಸೋಮಣ್ಣ ಮತ್ತು ಕುಮಾರಸ್ವಾಮಿ, ಬಿಸಿ-ಬಿಸಿ ದೋಸೆ ತಿನ್ನುತ್ತಾ, ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ರಾಜಕೀಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದರಿಂದ ಸೋಮಣ್ಣ ಜೆಡಿಎಸ್ ಸೇರುತ್ತಾರಾ? ಎಂಬ ಸುದ್ದಿಗಳು ಬಲವಾಗಿ ರಾಜಕೀಯ ವಲಯದಲ್ಲಿ ಹಬ್ಬಿವೆ.
ಕುಮಾರಸ್ವಾಮಿಯವರನ್ನು ಭೇಟಿ ಮಾಡಿರುವುದನ್ನು ಒಪ್ಪಿಕೊಂಡಿರುವ ಸೋಮಣ್ಣ ದೋಸೆ ತಿನ್ನಲು ಜೊತೆಗೆ ಸೇರಿದ್ದೆವು. ಯಾವುದೇ ರಾಜಕೀಯ ವಿಷಯಗಳನ್ನು ಚರ್ಚಿಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ವಿಧಾನಸಭೆ ಚುನಾವಣೆ ಎದುರಿಗಿರುವಾಗ ಕೇವಲ ಗರಿ-ಗರಿ ದೋಸೆ ತಿಂದಿದ್ದೇವೆ ಎಂಬ ಸೋಮಣ್ಣ ಹೇಳಿಕೆಯ ಸತ್ಯಾಸತ್ಯತೆ ಸಾಮಾನ್ಯ ಜನರಿಗೂ ಅರ್ಥವಾಗುತ್ತದೆ.
ಬಿಜೆಪಿ ಬಿಡುವ ನಿರ್ಧಾರ ಕೈಗೊಂಡಿರುವ ಸೋಮಣ್ಣ ಕೆಜೆಪಿ ಸೇರುತ್ತಾರೆ, ಕೈ ಹಿಡಿಯುತ್ತಾರೆ ಮುಂತಾದ ವದಂತಿಗಳು ಕೇಳಿಬರುತ್ತಲೇ ಇದ್ದವು. ಆದರೆ, ಕುಮಾರಸ್ವಾಮಿ ಅವರರೊಂದಿಗೆ ದೋಸೆ ತಿಂದಿರುವುದರಿಂದ ಜೆಡಿಎಸ್ ಸೇರಬಹುದು ಎಂಬ ಲೆಕ್ಕಾಚಾರಗಳು ಪ್ರಾರಂಭವಾಗಿವೆ.
ಪ್ರಭಾವಿ ಸೋಮಣ್ಣ : ವಿಜಯನಗರ, ಗೋವಿಂದರಾಜನಗರ, ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್ ಮುಂತಾದ ಕ್ಷೇತ್ರಗಳಲ್ಲಿ ಸೋವಣ್ಣ ಅವರು ಅಧಿಕ ಪ್ರಭಾವ ಹೊಂದಿದ್ದಾರೆ. ಜೆಡಿಎಸ್ ಬಹುತೇಕ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ್ದರು, ವಿಜಯ ನಗರ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿಲ್ಲ. ಈ ಸ್ಥಾನಕ್ಕೆ ಸೋಮಣ್ಣ ಬರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಕೊನೆಯಲ್ಲಿ ಜೆಡಿಎಸ್ : ವಿ.ಸೋಮಣ್ಣ ಮಾತ್ರವಲ್ಲದೇ ಅನೇಕ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ಕುಮಾರಸ್ವಾಮಿ ಜೊತೆ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡ ತಕ್ಷಣ ಜೆಡಿಎಸ್ ಪಟ್ಟಿ ಬಿಡುಗಡೆ ಮಾಡಲು ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ವಿವಿಧ ರಾಜಕೀಯ ನಾಯಕರು ಚುನಾವಣೆ ಕಾರ್ಯತಂತ್ರ ರೂಪಿಸುತ್ತಿದ್ದರೆ, ಶಾಸಕರು ಯಾವ ಪಕ್ಷಕ್ಕೆ ಸೇರಿದರೆ ಲಾಭ ದೊರೆಯಲಿದೆ ಎಂದು ಲೆಕ್ಕಾಚಾರ ಪ್ರಾರಂಭಿಸಿದ್ದಾರೆ. ಯಾರು ಯಾವ ಪಕ್ಷ ಸೇರುತ್ತಾರೆ ಎಂಬುದು ಮುಂದಿನವಾರ ಅಂತಿಮಗೊಳ್ಳಬಹುದು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications