ಕ್ರಿಮಿನಲ್ ಆರೋಪಿಗಳಿಗೆ ಬಿಜೆಪಿ ಟಿಕೆಟ್ ಇಲ್ಲ

ಅಭ್ಯರ್ಥಿಗಳ ಆಯ್ಕೆಯ ಮಾನದಂಡಗಳಲ್ಲಿಯೂ ಜಗಳಗಂಟರು, ಭ್ರಷ್ಟರಿಗೆ ಟಿಕೆಟ್ ನೀಡಬಾರದು ಎಂದು ನಾಯಕರು ನಿರ್ಧಾರ ಕೈಗೊಂಡಿರುವುದು ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಅಡ್ಡಿಯಾಗಿದೆ. ಕ್ರಿಮಿನಲ್ ಗಳಿಗೆ ಟಿಕೆಟ್ ನೀಡಬಾರದು ಎಂಬ ನೀತಿ ಯಾರಿಗೆ ಅನ್ವಯಿಸುತ್ತದೆ ಎಂಬ ಬಗ್ಗೆಯೇ ನಾಯಕರಲ್ಲಿ ಗೊಂದಲವುಂಟುಮಾಡಿದೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿ ಜೈಲಿಗೆ ಹೋಗಿ ಬಂದವರಿಗೆ ಟಿಕೆಟ್ ನೀಡಬಾರದು ಎಂದು ಬಿಜೆಪಿ ನಿರ್ಧರಿಸಿದರೆ, ಮಾಜಿ ಸಚಿವ, ಹೆಬ್ಬಾಳ ಕ್ಷೇತ್ರದ ಶಾಸಕ ಕಟ್ಟಾ ಸುಬ್ರಮಣ್ಯ ನಾಯ್ಡು, ಕೆಜಿಎಫ್ ಶಾಸಕ ವೈ. ಸಂಪಂಗಿ ಮತ್ತು ಮಾಲೂರು ಶಾಸಕ ಕೃಷ್ಣಯ್ಯ ಶೆಟ್ಟಿ ಅವರಿಗೆ ಟಿಕೆಟ್ ಕೈ ತಪ್ಪುವುದು ಖಚಿತವಾಗಿದೆ
ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಸಿಎಂ ಸದಾನಂದಗೌಡ, ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಮುಂತಾದ ನಾಯಕರ ವಿರುದ್ಧವೂ ಅನೇಕ ನ್ಯಾಯಾಲಗಳಲ್ಲಿ ದೂರುಗಳು ದಾಖಲಾಗಿ, ವಿಚಾರಣೆ ನಡೆಯುತ್ತಿದೆ. ಇವರಿಗೆ ಟಿಕೆಟ್ ನಿರಾಕರಿಸುವಂತಿಲ್ಲ. ಆದ್ದರಿಂದ ಪಕ್ಷ ಜೈಲಿಗೆ ಹೋಗಿ ಬಂದ ನಾಯಕರಿಗೆ ಮಾತ್ರ ಟಿಕೆಟ್ ನೀಡುವುದಿಲ್ಲ ಎಂದು ತನ್ನ ನೀತಿಯಲ್ಲಿ ತಿದ್ದುಪಡಿ ಮಾಡಿಕೊಂಡಿದೆ.
ಈಗಾಗಲೇ ಶೇ 60 ರಷ್ಟು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ, ಕೆಜೆಪಿ, ಕಾಂಗ್ರೆಸ್ ಸೇರುವ ಶಾಸಕರ ಅಂತಿಮ ತೀರ್ಮಾನದ ನಂತರ ಉಳಿದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪಟ್ಟಿ ಪ್ರಕಟಿಸಲು ಸಿದ್ದತೆ ನಡೆಸಿದೆ. ಏ.2 ಮತ್ತು 3ರಂದು ಬೆಂಗಳೂರಿನಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದೆ.
ರಾಜ್ಯ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಅಂತಿಮ ಪಟ್ಟಿ ಸಿದ್ಧಗೊಳ್ಳುವ ಸಂಭವವಿದೆ. ಏ.5ರ ವೇಳೆಗೆ ಅಂತಿಮ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಪಕ್ಷ ತೊರೆದು ಕೆಜೆಪಿ ಸೇರುವ ಅಭ್ಯರ್ಥಿಗಳನ್ನು ಸೋಲಿಸಲು ವಿಶೇಷ ಕಾರ್ಯತಂತ್ರ ರೂಪಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜಿಲ್ಲಾ ಪಟ್ಟಿಯೇ ಅಂತಿಮ : ಪ್ರತಿ ಚುನಾವಣೆಯಂತೆ ಬಿಜೆಪಿ ಜಿಲ್ಲಾಧ್ಯಕ್ಷರು ಕಳುಹಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಒಂದು ಹೆಸರು ಅಂತಿಮಗೊಳಿಸಲು ಬಿಜೆಪಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಇದಕ್ಕಾಗಿ ಸ್ಥಳೀಯ ಸಚಿವರ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಸಲು ಆಲೋಚಿಸಲಾಗುತ್ತಿದೆ.
ಒಟ್ಟಾರೆ ಭ್ರಷ್ಟಾಚಾರದ ಕಳಂಕದಿಂದ ಹೊರಬರಲು ಬಿಜೆಪಿ ಶತ ಪ್ರಯತ್ನ ನಡೆಸಿದೆ. ಕ್ಲೀನ್ ಇಮೇಜ್ ನೊಂದಿಗೆ ಚುನಾವಣೆ ಎದುರಿಸಿ ಮತ್ತೆ ಅಧಿಕಾರ ಹಿಡಿಯುವ ಉತ್ಸಾಹದಲ್ಲಿದೆ. ಮತದಾರರು ಯಾರ ಪರವಾಗಿ ತೀರ್ಪು ನೀಡಲಿದ್ದಾರೆ ಎಂದು ಮೇ.8ರಂದು ತಿಳಿಯಲಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications