ಬಿಜೆಪಿಯಿಂದ ಸಚಿವ ರೇಣುಕಾಚಾರ್ಯ ಉಚ್ಚಾಟನೆ

ಯಡಿಯೂರಪ್ಪ ಅವರ ಮಾನಸ ಪುತ್ರ, ಹಾಲಿ ಬಿಜೆಪಿ ಸಚಿವ ಎಂಪಿ ರೇಣುಕಾಚಾರ್ಯ ಅವರಿಗೆ ಜೋಶಿ ಬಿಜೆಪಿಯಿಂದ ಗೇಟ್ ಪಾಸ್ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡಗೆ ಹಲವು ಬಾರಿ ಹಣ ನೀಡಿದ್ದಾಗಿ ಗಂಭೀರ ಆಪಾದನೆ ಮಾಡಿದ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಅವರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.
ಹಾಗೆ ನೋಡಿದರೆ ಬಿಜೆಪಿಯಿಂದ ಕೆಜೆಪಿಗೆ ವಲಸೆ ಹೋಗಲು ಸ್ವತಃ ಅಬಕಾರಿ ಸಚಿವರೇ ಸಿದ್ಧತೆ ನಡೆಸಿದ್ದರು. ಅದೀಗ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಗಿದೆ. ರಂಗೀನ್ ನಾಯಕ ರೇಣುಕಾಚಾರ್ಯಗೆ ರಂಗಿನ ಹಬ್ಬದ ಗಿಫ್ಟ್ ಕೊಟ್ಟಂತಿದೆ.
ಬಿಎಸ್ ಯಡಿಯೂರಪ್ಪ ಬಿಜೆಪಿಯಿಂದ ಹೊರಬಂದ ದಿನದಿಂದಲೇ ರೇಣುಕಾಚಾರ್ಯ ಬಿಜೆಪಿ ಬಿಡುವುದು ನಿಕ್ಕಿಯಾಗಿತ್ತು. ಆ ಬಗ್ಗೆ ಯಡಿಯೂರಪ್ಪ ಸೇರಿದಂತೆ ಯಾರಿಗೂ ಅನುಮಾನವಿರಲಿಲ್ಲ. ತೀರಾ ಕೊನೆ ಕೊನೆಯ ದಿನಗಳಲ್ಲಿ ಸ್ಪಷ್ಟವಾಗಿಯೇ ಬಿಜೆಪಿ ಬಿಡುವ ಸಂದೇಶ ರವಾನಿಸತೊಡಗಿದರು.
ಈ ಬಗ್ಗೆ ಮಂಗಳವಾರ ತಡ ರಾತ್ರಿ ಬಿಜೆಪಿ ನಾಯಕರು ಸಮಾಲೋಚನೆ ನಡೆಸಿ ಅಶಿಸ್ತಿಗೆ ತಕ್ಕ ಪಾಠ ಕಲಿಸುವ ನಿರ್ಧಾರ ಕೈಗೊಂಡರು. ತಕ್ಷಣವೇ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, 'ರಾಜ್ಯ ನಾಯಕರ ವಿರುದ್ಧ ಮಾಧ್ಯಮಗಳಲ್ಲಿ ಅತ್ಯಂತ ಹಗುರವಾಗಿ ಮಾತನಾಡಿದ್ದೀರಿ. ನಿಮ್ಮ ಈ ವರ್ತನೆಯು ಪಕ್ಷದ ಶಿಸ್ತಿನ ಸ್ಪಷ್ಟ ಉಲ್ಲಂಘನೆಯಾಗಿದ್ದು, ಪಕ್ಷ ಚಟುವಟಿಕೆಯಾಗಿರುವ ಕಾರಣ ನಿಮ್ಮನ್ನು ತಕ್ಷಣದಿಂದ ಜಾರಿಯಾಗುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಅವಧಿಗೆ ಉಚ್ಚಾಟಿಸಲಾಗಿದೆ' ಎಂದು ಆದೇಶಿಸಿ ಪತ್ರ ಬರೆದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications