ಪ್ರಹ್ಲಾದ್ ಜೋಶಿ ಹೇಳಿದ ಮೂರು ಮಂಗಗಳ ಕಥೆ

ಧಾರವಾಡದಲ್ಲಿ ಮಂಗಳವಾರ ಸಂಜೆ ಬಿಜೆಪಿಯ ವಿಜಯ ಸಂಕಲ್ಪ ಸಮಾವೇಶ ಆಯೋಜಿಸಲಾಗಿತ್ತು. ಅಧ್ಯಕ್ಷರಾದ ಮೇಲೆ ಮೊದಲ ಬಾರಿ ತವರು ಕ್ಷೇತ್ರದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಕೇಂದ್ರ ಸರ್ಕಾರದ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸುತ್ತಿದ್ದರು.
ಮಾತಿನ ಭರದಲ್ಲಿ ಭಾರತದ ನ್ಯಾಯಾಂಗ ವ್ಯವಸ್ಥೆ ಗಾಂಧೀಜಿಯವರ ಕಣ್ಣು ಮುಚ್ಚಿಕೊಂಡ ಮಂಗವಿದ್ದಂತೆ ಎಂದು ಬಿಟ್ಟರು. ಈ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಜೋಶಿ ವಕೀಲ ಸಮುದಾಯದ ಆಕ್ರೋಶಕ್ಕೆ ತುತ್ತಾದರು. ಜೋಶಿಯವರು ವಕೀಲ ಸಮುದಾದವರ ಕ್ಷಮೆ ಯಾಚಿಸಬೇಕು ಎಂದು ಧಾರವಾಡ ವಕೀಲರ ಸಂಘ ಒತ್ತಾಯಿಸಿತು. ಸದ್ಯ ಪತ್ರಿಕಾ ಹೇಳಿಕೆ ನೀಡಿ ಜೋಶಿ ಸ್ಪಷ್ಟೀಕರಣ ನೀಡಿದ್ದಾರೆ. ಆದರೆ, ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ವಕೀಲರು ಆಗ್ರಹಿಸುತ್ತಿದ್ದಾರೆ.
ಜೋಶಿ ಹೇಳಿದ ಮಂಗಗಳ ಕಥೆ :ನಮ್ಮ ದೇಶದ ಆಡಳಿತ ಮಹಾತ್ಮ ಗಾಂಧಿಯವರು ಉಲ್ಲೇಖಿಸಿದ್ದ ಮೂರು ಮಗಂಗಳ ಸ್ಥಿತಿಯಂತಾಗಿದೆ. ಕೇಂದ್ರ ಸರ್ಕಾರ ಕಿವಿ ಮುಚ್ಚಿಕೊಂಡ ಮಂಗ ಜನರ ಸಂಕಷ್ಟ ಕೇಳುವುದಿಲ್ಲ. ದೇಶದ ಪ್ರಧಾನಿ ಮನಮೋಹನ್ ಸಿಂಗ್ ಬಾಯಿ ಮುಚ್ಚಿಕೊಂಡಿರುವ ಮಂಗ, ದೇಶದ ನ್ಯಾಯಾಂಗ ವ್ಯವಸ್ಥೆ ಕಣ್ಣು ಮುಚ್ಚಿಕೊಂಡಿರುವ ಮಂಗ ಎಂದು ಜೋಶಿ ಟೀಕಿಸಿದ್ದರು.
ಈ ಹೇಳಿಕೆ ಬಹಿರಂಗವಾದ ತಕ್ಷಣ ಧಾರವಾಡದ ವಕೀಲರ ಸಂಘ ಜೋಶಿ ಅವರ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ದೂರು ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿತು. ತುರ್ತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಜೋಶಿಯವರು ಕ್ಷಮೆ ಕೇಳಿದ್ದಾರೆ. ಆದರೆ, ವಕೀಲರ ಸಂಘ ಜೋಶಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸುತ್ತಿವೆ.
ನ್ಯಾಯಾಂಗ ವ್ಯವಸ್ಥೆ ಟೀಕಿಸಿದ ಜೋಶಿ ಕ್ಷಮೆ ಕೇಳಿದ್ದಾರೆ. ಆದರೆ, ದೇಶದ ಪ್ರಧಾನಿಯನ್ನು ಮಂಗಕ್ಕೆ ಹೋಲಿಸಿದ್ದಕ್ಕೆ ಕ್ಷಮೆ ಕೇಳಿಲ್ಲ. ಇದರಿಂದ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಜೋಶಿ ತುತ್ತಾಗಿದ್ದಾರೆ. ಇಂದು ಅವರ ವಿರುದ್ಧ ಪ್ರತಿಭಟನೆಗಳು ನಡೆಯುವ ಸಂಭವವಿದೆ.
ಮೈಕ್ ಸಿಕ್ಕಿದರೆ ಏನು ಮಾತನಾಡುತ್ತಿದ್ದೇವೆ ಎಂಬುದೇ ನಾಯಕರಿಗೆ ತಿಳಿಯುವುದಿಲ್ಲ. ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ತಕ್ಷಣ ಜೋಶಿ ಹೊಸ ವಿವಾದ ಸೃಷ್ಟಿಸಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಇನ್ನು ಎಂತಹ ಕಠಿಣ ಪದಗಳನ್ನು ಬಳಸುತ್ತಾರೆ ಎಂದು ಕಾದು ನೋಡಬೇಕು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications