ಸಂಜುಗೆ ಕ್ಷಮೆ: ಶಿವಸೇನೆ ನಿಲುವು ಅದಲುಬದಲು
ಆದರೆ, ಬಾಳಾ ಠಾಕ್ರೆ ಕಾಲದಲ್ಲಿ ಸಂಜುಗೆ ಫುಲ್ ಸಪೋರ್ಟ್ ಸಿಕ್ಕಿತ್ತು. ಈಗ, ಸೇನಾ ನಾಯಕ ನೀಲಂ ಗೋರೆ ಅವರು ಅಸೆಂಬ್ಲಿ ಮಾತನಾಡುತ್ತಾ ಸಂಜಯ್ ದತ್ ಗೆ ಕ್ಷಮಾದಾನ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಮಹಾರಾಷ್ಟ್ರ ವಿಧಾನಪರಿಷತ್ನ ಅಧಿವೇಶನದಲ್ಲಿ ರಾಜ್ಯದ ಕಾನೂನು ಮತ್ತು ಶಿಸ್ತು ಪರಿಸ್ಥಿತಿ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ಶಿವಸೇನೆಯ ಶಾಸಕ ನೀಲಂ ಗೋರೆ 'ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಮರುಚಿಂತಿಸುವ ಅಗತ್ಯವಿಲ್ಲ. ದತ್ತ್ ಕ್ಷಮಾದಾನ ನೀಡಿದಲ್ಲಿ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸಿದಂತಾಗುತ್ತದೆ' ಎಂದು ಹೇಳಿದರು.
ಸಂಜಯ್ದತ್ ಗೆ ಕ್ಷಮಾದಾನ ನೀಡಬೇಕೆಂದು ರಾಜ್ಯಪಾಲರನ್ನು ಕೋರುವಂತೆ ಚಿತ್ರೋದ್ಯಮದ ವಿವಿಧ ಗಣ್ಯರು ಹಾಗೂ ರಾಜಕಾರಣಿಗಳು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸುಪ್ರೀಂಕೋರ್ಟ್ ಮಾರ್ಚ್ 19ರಂದು ನೀಡಿದ ತೀರ್ಪಿನಲ್ಲಿ ಎ.ಕೆ. 56 ರೈಫಲ್ ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ ಆರೋಪದಲ್ಲಿ ಸಂಜಯ್ದತ್ ಗೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಿತ್ತು.
1993ರಲ್ಲಿ ಸಂಜಯ್ ದತ್ ಬಂಧನವಾದಾಗ ಬಾಳಾ ಠಾಕ್ರೆ ಅವರು ಬಹಿರಂಗವಾಗಿ ಸಂಜಯ್ ಪರ ನಿಂತಿದ್ದರು. ಸದಾ ಕಾಲ ಪಾಕಿಸ್ತಾನಿ ಉಗ್ರರನ್ನು ದೂಷಿಸುವ ಠಾಕ್ರೆ ಅವರ ನಡೆ ಎಲ್ಲರನ್ನು ಅಚ್ಚರಿ ಮೂಡಿಸಿತ್ತು. ಆಗಿನ ಪ್ರಧಾನಿ ನರಸಿಂಹ ರಾವ್ ಅವರಿಗೆ ಕರೆ ಮಾಡಿ ದಿವಂಗತ ಸಂಸದ ಸುನಿಲ್ ದತ್ ಪುತ್ರನಿಗೆ ತೊಂದರೆಯಾಗಬಾರದು ಎಂದು ಕೋರಿದ್ದರು ಆದರೆ, ಈಗ ಶಿವಸೇನೆ ನಿಲುವು ಬದಲಾಗಿದೆ ಎಂದು ಸಂಜಯ್ ಪರ ವಕೀಲ ಸತೀಶ್ ಮನೇಶಿಂಧೆ ಹೇಳಿದ್ದಾರೆ.
ಸಂಜಯ್ ಅವರ ಸೋದರಿ ಸಂಸದೆ ಪ್ರಿಯ ದತ್ ಕೂಡಾ ಶಿವಸೇನೆ ಹಾಗೂ ಬಾಳಾ ಠಾಕ್ರೆ ಅವರ ಬೆಂಬಲವನ್ನು ಸ್ಮರಿಸಿ, ಧನ್ಯವಾದ ಅರ್ಪಿಸಿದ್ದರು. ಆದರೆ, ಈಗ ದೇಶದ ಬಹುತೇಕ ರಾಜಕಾರಣಿಗಳು ಸಂಜಯ್ ಜೈಲು ಪಾಲಾಗುವುದನ್ನು ತಪ್ಪಿಸಲು ಮುಂದಾಗಿರುವಾಗ ಶಿವಸೇನೆ ಮಾತ್ರ ವ್ಯತಿರಿಕ್ತವಾಗಿ ವರ್ತಿಸುತ್ತಿದೆ.
1993ರ ಮುಂಬೈ ಸರಣಿ ಸ್ಫೋಟ ಘಟನೆಗೂ ಮುನ್ನ ನಾನು ದಾವೂದ್ ರನ್ನು ಭೇಟಿದ್ದು ನಿಜ ನಂತರ ಜೈಲುಶಿಕ್ಷೆ ಅನುಭವಿಸಿದ್ದೇನೆ. ಪಶ್ಚಾತ್ತಾಪ ಪಟ್ಟಿದ್ದೇನೆ ಎಂದು ಸಂಜಯ್ ಹೇಳಿದ್ದರು,
1993ರ ಸ್ಫೋಟಕ್ಕೆ ಸಂಬಂಧಿಸಿದಂತೆ ಮುಂಬೈನ ಉಗ್ರಗಾಮಿ ನಿಗ್ರಹ ಕೋರ್ಟ್ ನಲ್ಲಿ ಸುಮಾರು 50 ಜನರ ಮೇಲೆ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಕಾರಣ, ಸುಮಾರು ಆರು ವರ್ಷಗಳ ಕಾಲ ಸೆರೆಮನೆವಾಸ ಶಿಕ್ಷೆ ವಿಧಿಸಲಾಗಿತ್ತು.
ನಾಯಕನಿಂದ ಖಳನಾಯಕ್ ಪಟ್ಟಕ್ಕೇರಿದ್ದ ಸಂಜಯ್ ಒಂದು ವರ್ಷ ಶಿಕ್ಷೆ ಅನುಭವಿಸಿ ಹೊರ ಬಂದಿದ್ದರು. ನಂತರ ಸಮಾಜವಾದಿ ಪಕ್ಷ ಸೇರಿದ್ದ ಸಂಜಯ್ ದತ್ ತಮ್ಮ ತಂದೆ ಸುನಿಲ್ ದತ್ ರಂತೆ ಸಾತ್ವಿಕ ರಾಜಕಾರಣಿಯಾಗುವ ಭರವಸೆ ನೀಡಿದ್ದರು. ಅದರೆ, ಲೋಕಸಭಾ ಚುನಾವಣೆಯಲ್ಲಿ ಸಂಜಯ್ ಸ್ಪರ್ಧೆಗೆ ಲಖ್ನೋ ಕೋರ್ಟ್ ಅನುಮತಿ ನೀಡಿರಲಿಲ್ಲ.
2009ರಲ್ಲಿ ಸಮಾಜವಾದಿ ಪಕ್ಷ ಸೇರಿದ್ದ ಸಂಜಯ್ ದತ್, ಒಂದು ವರ್ಷ ಬಳಿಕ ಪಕ್ಷ ತೊರೆದಿದ್ದರು. 2012 ವರ್ಷದ ಆರಂಭದಲ್ಲಿ ಸಂಜಯ್ ದತ್ ಅವರು ಕಾಂಗ್ರೆಸ್ ಪರ ಪ್ರಚಾರಕ್ಕೆ ನಾನು ಕೂಡಾ ರೆಡಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟಿದ್ದರು.