ಕೈ ಹಿಡಿಯಲು ಐವರು ಸಜ್ಜು ಉಳಿದವರು ಅತಂತ್ರ
ನವದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೈ ಕಮಾಂಡ್ ನಾಯಕರೊಂದಿಗೆ ನಿರಂತರ ಸಮಾಲೋಚನೆ ನಡೆಸಿ ಐವರು ವಲಸಿಗರನ್ನು ಸೇರ್ಪಡೆಗೊಳಿಸಿಕೊಳ್ಳಲು ಅನುಮತಿ ಪಡೆದಿದ್ದಾರೆ. ಈ ಐವರು ಮಾ. 28ರಂದು ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷ ಸೇರಲಿದ್ದಾರೆ.
ಪಕ್ಷೇತರ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ವೆಂಕಟರಮಣಪ್ಪ, ಸುಧಾಕರ್, ಶಿವರಾಜ್ ತಂಗಡಗಿ ಮತ್ತು ಬಿಜೆಪಿ ತೊರೆದಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅಧಿಕೃತವಾಗಿ ಮಾ.28ರಂದು ಕಾಂಗ್ರೆಸ್ ಸೇರಲಿದ್ದಾರೆ. ಈ ಐವರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುವುದು ಖಚಿತವಾಗಿದೆ.
ರಾಜೂಗೌಡರಿಗೆ ಸ್ಥಳೀಯರ ವಿರೋಧ : ಐವರು ಸೇರ್ಪಡೆಗೆ ಮಾತ್ರ ಅನುಮತಿ ದೊರಕಿದ್ದು, ಉಳಿದ ವಲಸಿಗರ ಭವಿಷ್ಯ ಅತಂತ್ರವಾಗಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಜೂಗೌಡ ಸೇರ್ಪಡೆಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ಧರಮ್ ಸಿಂಗ್ ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ರಾಜುಗೌಡಗೆ ಕಾಂಗ್ರೆಸ್ ಬಾಗಿಲು ಮುಚ್ಚಲಾಗಿದೆ.
ಆಸ್ನೋಟಿಕರ್ ಗೆ ದೇಶಪಾಂಡೆ ತಡೆ : ಆನಂದ್ ಆಸ್ನೋಟಿಕರ್ ಮತ್ತೊಮ್ಮೆ ಕೈ ಹಿಡಿಯಲು ಕೆಪಿಸಿಸಿ ಮಾಜಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಕ್ಕಾಗಿ ಪಕ್ಷ ತೊರೆದು ಹೋದ ಆಸ್ನೋಟಿಕರ್ ಮತ್ತೆ ಪಕ್ಷಕ್ಕೆ ಬರುವುದು ಬೇಡ ಎಂದು ದೇಶಪಾಂಡೆ ಕೇಂದ್ರ ನಾಯಕರಿಗೆ ಒತ್ತಡ ತಂದಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಟಿಕೆಟ್ ಪಡೆದು ಮುಂದಿನ ಚುನಾವಣೆ ಎದುರಿಸುವ ಉತ್ಸಾಹದಲ್ಲಿದ್ದ ಮುಸ್ಕಿ ಶಾಸಕ ಪ್ರತಾಪ ಗೌಡ ಪಾಟೀಲ, ಶ್ರವಣಬೆಳಗೊಳ ಶಾಸಕ ಸಿ.ಎಸ್.ಪುಟ್ಟೇಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಹೈ ಕಮಾಂಡ್ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದ್ದರಿಂದ ಈ ನಾಯಕರ ಮುಂದಿನ ನಡೆ ಕುತೂಹಲ ಮೂಡಿಸಿದೆ.
ವಿಧಾನಸಭೆ ಚುನಾವಣೆ ಗೆಲ್ಲುವ ರಣತಂತ್ರ ರೂಪಿಸಿರುವ ಕಾಂಗ್ರೆಸ್ ವಲಸಿಗರ ಸೇರ್ಪಡೆಯ ನಂತರದ ಲಾಭ-ನಷ್ಟಗಳ ಕುರಿತು ಲೆಕ್ಕಾಚಾರ ನಡೆಸಿದೆ. ಮೂಲ ಕಾಂಗ್ರೆಸಿಗರ ವಿರೋಧದಿಂದಾಗಿ ವಲಸಿಗರಿಗೆ ತೀವ್ರ ಹಿನ್ನಡೆ ಉಂಟಾಗುತ್ತಿದೆ. ಇವರು ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದು ಕಾದು ನೋಡಬೇಕು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ