ಕೆಜೆಪಿ ಸೇರೋಲ್ಲ ಎಂದರು ಬಸವರಾಜ ಬೊಮ್ಮಾಯಿ

ಹಾವೇರಿ ತಾಲೂಕಿನ ಶಿಶುವಿನಾಳ ಗ್ರಾಮದಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ತೊರೆದು ಕೆಜೆಪಿ ಸೇರುವ ಯಾವುದೇ ಆಯ್ಕೆಗಳು ನನ್ನ ಮುಂದಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದರು.
ಪ್ರಾದೇಶಿಕ ಪಕ್ಷಗಳಿಗೆ ರಾಜ್ಯದಲ್ಲಿ ಮಾನ್ಯತೆ ಇಲ್ಲ ಎಂಬುದು ರಾಜ್ಯದ ಇತಿಹಾಸದಿಂದ ತಿಳಿದು ಬಂದಿದೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಜನರು ಪ್ರಾದೇಶಿಕ ಪಕ್ಷಗಳಿಗೆ ಬೆಂಬಲ ನೀಡಿಲ್ಲ. ನಾನು ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದಲ್ಲಿದ್ದೇನೆ. ಅದನ್ನು ತೊರೆದು ಯಾಕೆ ಕೆಜೆಪಿಯಂತಹ ಪ್ರಾದೇಶಿಕ ಪಕ್ಷ ಸೇರುತ್ತೇನೆ ಏಕೆ ಸೇರಬೇಕು ಎಂದು ಪ್ರಶ್ನಿಸಿದರು.
ಮುರುಗೇಶ್ ನಿರಾಣಿ ಅವರರೊಂದಿಗೆ ಆಡಳಿತದ ವಿಷಯಗಳನ್ನು ಚರ್ಚಿಸಲು ಸಭೆ ಸೇರಿದ್ದೆ. ಕೆಜೆಪಿ ಸೇರುವ ನಿರ್ಧಾರ ಮಾಡಲು ಅಲ್ಲ. ಬಿಜೆಪಿಗೆ ಉತ್ತರ ಕರ್ನಾಟಕ ಭಾಗದವರಾದ ಪ್ರಹ್ಲಾದ್ ಜೋಷಿ ಅಧ್ಯಕ್ಷರಾಗಿ ಆಯ್ಕೆ ಆಗಿರುವುದಕ್ಕೆ ಸಂತಸವಾಗಿದೆ ಎಂದ ಅವರು, ಜೋಷಿ ಅವರೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಪುನಃ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಬೊಮ್ಮಾಯಿ, ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ. ಮುಂದಿನ ಚುನಾವಣೆಯನ್ನು ಬಿಜೆಪಿ ಅಭ್ಯರ್ಥಿಯಾಗಿಯೇ ಎದುರಿಸುತ್ತೇನೆ ಎಂದರು.
ಈಗಾಗಲೇ ಯಡಿಯೂರಪ್ಪ ಪರಮಾಪ್ತ ರೇಣುಕಾಚಾರ್ಯ ಕೆಜೆಪಿಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಈಗ ಬಸವರಾಜ ಬೊಮ್ಮಾಯಿ ಸರದಿ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಯಡಿಯೂರಪ್ಪ ಅವರ ಪರಮಾಪ್ತರು ಬಿಜೆಪಿಯಲ್ಲೇ ಉಳಿದು ಯಡಿಯೂರಪ್ಪ ಅವರಿಗೆ ಕೈ ಕೊಡುತ್ತಾರಾ? ಎಂಬ ಅನುಮಾನ ಕಾಡುತ್ತಿದೆ.












Click it and Unblock the Notifications