ಸ್ವತಂತ್ರ ಅಭ್ಯರ್ಥಿಯಾಗಿ ಹಾಲಾಡಿ ಶೆಟ್ಟಿ ಸ್ಪರ್ಧೆ
ಹಾಲಾಡಿಯವರ ಬೆಂಬಲಿಗರು ಇಂದು ಅವರನ್ನು ಭೇಟಿಯಾಗಿ ಮುಂದಿನ ಚುನಾವಣೆಯಲ್ಲಿ ತಮ್ಮ ನಿಲುವಿನ ಬಗ್ಗೆ ತಿಳಿಸಲು ಕೋರಿದಾಗ, ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರವನ್ನು ಹಾಲಾಡಿ ಪ್ರಕಟಿಸಿದ್ದಾರೆ ಎಂದವರ ಬೆಂಬಲಿಗರು ತಿಳಿಸಿದ್ದಾರೆ.
ಈಗ ಬಿಜೆಪಿಯಲ್ಲೇ ಇರುವ ಹಾಲಾಡಿಯ ಬೆಂಬಲಿಗರು ಪಕ್ಷದ ಬಾಹ್ಯ ಬೆಂಬಲ ವನ್ನು ಪಡೆದು ಸ್ಪರ್ಧಿಸುವ ಸಲಹೆ ನೀಡಿದಾಗ ಅದನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ ಅವರು, ''ಬಿಜೆಪಿಯೊಂದಿಗೆ ಯಾವುದೇ ಸಂಬಂಧ ಇರಿಸಿಕೊಳ್ಳುವ ಇರಾದೆ ತನಗಿಲ್ಲ. ತಾನು ಸ್ವತಂತ್ರವಾಗಿ ಸ್ಪರ್ಧಿಸಿ ಜಯಿಸುವ ವಿಶ್ವಾಸವಿದೆ. ನೀವು ಯಾರನ್ನು ಬೆಂಬಲಿ ಸುತ್ತೀರಿ ಎನ್ನುವುದು ನಿಮಗೆ ಬಿಟ್ಟದ್ದು, ನಾನೇನು ಒತ್ತಾಯಿಸುವುದಿಲ್ಲ'' ಎಂದರೆಂದು ಅವರು ಬೆಂಬಲಿಗರು ತಿಳಿಸಿದ್ದಾರೆ.
ಕುಂದಾಪುರದ ವಾಜಪೇಯಿ ಗೋಳಿನ ಕಥೆ ಫ್ಲಾಶ್ ಬ್ಯಾಕ್: ಎಂದೇ ಖ್ಯಾತರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದನ್ನು ಖಂಡಿಸಿ ಶುಕ್ರವಾರ (ಜು.13, 2012) ಕುಂದಾಪುರ ತಾಲೂಕ್ ಬಂದ್ ಯಶಸ್ವಿಯಾಗಿ ಆಚರಿಸಲಾಗಿತ್ತು.
ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಮೊದಲಿಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು. ಆದರೆ, ಅಂತಿಮ ಗಳಿಗೆಯಲ್ಲಿ ಎಂಎಲ್ ಸಿ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಸ್ಥಾನ ಕಲ್ಪಿಸಲಾಯಿತು. ಇದರಿಂದ ತೀವ್ರವಾಗಿ ನೊಂದ ಮೃದು ಮನಸ್ಸಿನ ನಾಯಕ ಹಾಲಾಡಿ ಶೆಟ್ಟಿ ಅವರು ಕಣ್ಣೀರಿಟ್ಟಿದ್ದರು.
ಉಡುಪಿ ಕ್ಷೇತ್ರದ ಶಾಸಕ ರಘುಪತಿಭಟ್, ಸಚಿವ ಸಂಪುಟ ವಿಸ್ತರಣೆ ವೇಳೆ ಮೋಸದ ರಾಜಕೀಯ ಮಾಡಲಾಗಿದೆ. ಹಾಲಾಡಿ ಶ್ರೀನಿವಾಸಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿ ವಂಚನೆ ಮಾಡಲಾಗಿದೆ. ಹೀಗಾಗಿ ನಾವು ಶಾಸಕರಾಗಿ ಮುಂದುವರೆಯುವುದರಲ್ಲಿ ಅರ್ಥವಿಲ್ಲ. ಈ ಕೂಡಲೇ ನಾವಿಬ್ಬರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ಘೋಷಿಸಿದರು.
ಮಾಜಿ ಸಚಿವ ಬಿ.ನಾಗರಾಜಶೆಟ್ಟಿ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ನಂತರ ಬಿಜೆಪಿ ಸರ್ಕಾರದ ಧೋರಣೆ ಖಂಡಿಸಿದ ಕುಂದಾಪುರ ಪುರಸಭೆ, ತಾಲೂಕು ಪಂಚಾಯತ್, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ರಾಜೀನಾಮೆ ನೀಡಿದ್ದರು.
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮಗೆ ಸಚಿವ ಸ್ಥಾನ ನೀಡುವ ಖಚಿತ ಭರವಸೆಯನ್ನು ವರಿಷ್ಟರು ನೀಡಿದ್ದರು. ನಿನ್ನೆ ಸಂಜೆ ಸಹ ನನಗೆ ಸಚಿವ ಸ್ಥಾನ ನೀಡಲಾಗಿದ್ದು ಬೆಂಗಳೂರಿಗೆ ಬರುವಂತೆ ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ನಾನು ಬೆಂಗಳೂರಿಗೆ ಆಗಮಿಸಿದ್ದೆ. ಆದರೆ, ಸಚಿವ ಸ್ಥಾನ ನೀಡುವ ಸಂಬಂಧ ಅಧಿಕೃತ ಪತ್ರ ಬರಲಿ ಎಂದು ಕಾದು ಕುಳಿತಿದ್ದ ತಮಗೆ ಭಾರೀ ನಿರಾಶೆ ಉಂಟಾಯಿತು ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ದುಃಖ ತೋಡಿಕೊಂಡಿದ್ದರು.