ಬೆಂಗಳೂರು ವಿವಿ ಪ್ರೊ. ಮೈಲಾರಪ್ಪ ಕಾಂಗೈ ಅಭ್ಯರ್ಥಿ

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯೊಂದಿಗಿನ ಹಗ್ಗಜಗ್ಗಾಟದಲ್ಲಿ ರಿಜಿಸ್ಟ್ರಾರ್ ಆಗಿ ತಮ್ಮ ಸ್ಥಾನಕ್ಕೂ ಸಂಚಕಾರ ತಂದುಕೊಂಡ ಪ್ರೊ. ಬಿಸಿ ಮೈಲಾರಪ್ಪ ಬಹುತೇಕ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಾಗಿವೆ.
ಕಾಂಗ್ರೆಸ್ ಟಿಕೆಟ್ ಲಭಿಸದಿದ್ದರೆ ಜೆಡಿಎಸ್ ಹಾದಿ ತುಳಿಯಲೂ ಸಿದ್ಧವಿರುವ ಪ್ರೊ. ಬಿಸಿ ಮೈಲಾರಪ್ಪ ತಮ್ಮ ಸಮಸ್ಯೆಗಳಿಗೆಲ್ಲ ಪರಿಹಾರ ಕಂಡುಕೊಳ್ಳಲು ವಿಧಾನಸಭೆ ಪ್ರವೇಶಿಸುವ ಹಾದಿಯಲ್ಲಿದ್ದಾರೆ. ಆದರೆ 48 ವರ್ಷದ ಮೇಲೂರು ಮೈಲಾರಪ್ಪಗೆ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವವರ್ ಅವರ ಕೃಪಾಕಟಾಕ್ಷ ಒಲಿದಿದೆ ಎನ್ನಲಾಗಿದೆ.
ಅಂದಹಾಗೆ ಮಹದೇಪುರ (ಪರಿಶಿಷ್ಟ ವರ್ಗ ಮೀಸಲು) ಮೀಸಲು ಕ್ಷೇತ್ರದಿಂದ ಟಿಕೆಟ್ ಗಿಟ್ಟಿಸಲು ಕಾಂಗ್ರೆಸ್ ನಾಯಕರ ಬೆನ್ನುಬಿದ್ದಿದ್ದಾರೆ. ಅದಕ್ಕಾಗಿ ತಮ್ಮ ಸಾಧನೆಗಳನ್ನು ಬಣ್ಣಿಸುವ 27 ಪುಟಗಳ ಕಿರುಹೊತ್ತಿಗೆಯನ್ನೂ ಅವರು ಕಾಂಗ್ರೆಸ್ ಕೈಗೆ ಹಸ್ತಾಂತರಿಸಿದ್ದಾರೆ ಎಂದು ಡಿಎನ್ಎ ಆಂಗ್ಲ ದೈನಿಕ ವರದಿ ಮಾಡಿದೆ.
ಪ್ರೊ. ಬಿಸಿ ಮೈಲಾರಪ್ಪ ಅವರು ಅತ್ತ ಕಾಂಗ್ರೆಸ್ಸಿಗೆ ಅರ್ಜಿ ಸಲ್ಲಿಸುತ್ತಿದ್ದೇ ತಡ ಅದು ಅಂಗೀಕಾರವಾಗುತ್ತದೋ/ಬಿಡುತ್ತದೋ ಎಂಬುದನ್ನು ತಿಳಿದುಕೊಳ್ಳುವ ಗೋಜಿಗೂ ಹೋಗದೆ ಇತ್ತ ಮಹದೇವಪುರದಲ್ಲಿ ಕಾಂಗ್ರೆಸ್ ಝಂಡಾದೊಂದಿಗೆ ಹಾರಾಡುತ್ತಿದ್ದಾರೆ.
ಆದರೆ ಈ ಕ್ಷೇತ್ರದಲ್ಲಿ ಹಾಲಿ ಐಎಎಸ್ ಅಧಿಕಾರಿ ಕೆ ಶಿವರಾಂ ಸಹ ಕಾಂಗ್ರೆಸ್ ಟಿಕೆಟಿಗೆ ಪೈಪೋಟಿಗೆ ಬಿದ್ದಿದ್ದಾರೆ. ಇನ್ನು ಯಲ್ಲಣ್ಣ, ಎಸಿ ಶ್ರೀನಿವಾಸ್ ಮತ್ತು ರಾಜಣ್ಣ ಅವರುಗಳೂ ಟಿಕೆಟಿಗಾಗಿ ಪರದಾಡುತ್ತಿದ್ದಾರೆ.












Click it and Unblock the Notifications