ಅನಂತ ಬೆಂಬಲದಿಂದ ಪ್ರಹ್ಲಾದರು ಬಿಜೆಪಿ ಗೆಲ್ಲಿಸಬಲ್ಲರೇ?
ಬೆಂಗಳೂರು, ಮಾ.22: ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಧಾರವಾಡದ ಸಂಸದ ಪ್ರಹ್ಲಾದ್ ವೆಂಕಟೇಶ ಜೋಶಿ ನೇಮಕಗೊಂಡಿದ್ದಾರೆ. ಸದಾನಂದ ಗೌಡ, ಕೆಎಸ್ ಈಶ್ವರಪ್ಪ ಅವರನ್ನು ಹೊರತುಪಡಿಸಿದರೆ ಬಿಜೆಪಿ ಆಯ್ಕೆ ಉತ್ತಮ ಎನ್ನಬಹುದು. ಆದರೆ, ಆಯ್ಕೆ ಹಿಂದಿನ ರಾಜಕೀಯ ಲೆಕ್ಕಾಚಾರಗಳು ಎಷ್ಟರಮಟ್ಟಿಗೆ ಕಮಲ ಪಾಳಯಕ್ಕೆ ಲಾಭ ತರಲಿದೆ. ಕಟ್ಟ ಕಡೆಯ ನಗು ಸಂಸದ ಅನಂತಕುಮಾರ್ ಅವರದ್ದೇ ಆಗಿರುತ್ತದೆಯೇ? ಉದುರುವ ಕಮಲ ದಳ ಫಿಕ್ಸ್ ಮಾಡಲು ಸಾಧ್ಯವೇ? ಮುಂದೆ ಓದಿ...
"ಮುಂದಿನ ರಾಜ್ಯಾಧ್ಯಕ್ಷರಾಗುವುದು ಸದಾನಂದ ಗೌಡರ ಹಣೆಯಲ್ಲಿ ಬರೆದಿಲ್ಲ. ಯಾರೇ ಅಧ್ಯಕ್ಷರಾದರೂ ಅವರ ಜುಟ್ಟು ಜನಿವಾರ ಅನಂತ ಕುಮಾರ್ ಅವರ ಕೈಲಿರುತ್ತದೆ" ಎಂಬ ಲೇಖನ ನಮ್ಮಲ್ಲೇ ಪ್ರಕಟವಾಗಿತ್ತು. ಅದರಂತೆ ಜೋಶಿ ಅವರ ನೇಮಕವೂ ಆಗಿದೆ. ನಾನು ಯಾರ ಅಡಿಯಾಳು ಅಲ್ಲ, ಸರ್ವಸ್ವತಂತ್ರ ಅಧ್ಯಕ್ಷ, ಪಕ್ಷದ ಹಿರಿಯ ನಾಯಕರೇ ನನಗೆ ಹೈಕಮಾಂಡ್ ಎಂದು ಜೋಶಿ ಅವರು ನಿರೀಕ್ಷೆಯಂತೆ ಘೋಷಿಸಿದ್ದಾರೆ.
ಆದರೆ, ಜೋಷಿ ಆಯ್ಕೆ ನಂತರ ಎದ್ದಿರುವ ಕೆಲವು ಪ್ರಶ್ನೆಗಳು ಇಂತಿದೆ: ಸದಾನಂದ ಗೌಡರ ಹೆಸರು ಮುಂಚೂಣಿಯಲ್ಲಿದ್ದರೂ, ಈಶ್ವರಪ್ಪ ಅವರನ್ನೇ ಮುಂದುವರೆಸಲು ಹೈಕಮಾಂಡ್ ಸಿದ್ದವಿದ್ದರೂ ಪ್ರಹ್ಲಾದ್ ಜೋಶಿ ಆಯ್ಕೆಯಾಗಿದ್ದು ಏಕೆ?
ಉತ್ತರ ಕರ್ನಾಟಕ ಭಾಗಕ್ಕೆ ಪ್ರಾಶಸ್ತ್ಯ ನೀಡುವ ನಿಟ್ಟಿನಲ್ಲಿ ಜೋಶಿ ಆಯ್ಕೆ ಸಮರ್ಥನೀಯ. ಆದರೆ, ಮುಂದಿನ ಸಿಎಂ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹಾಗೂ ಜೋಶಿ ಅವರು ಒಂದೇ ವಠಾರದವರು ಎಂಬುದು ಹೈಕಮಾಂಡ್ ಗೆ ಗೊತ್ತಾಗಲಿಲ್ಲವೇ?
ಬಿಜೆಪಿ ಪಾಳಯದಲ್ಲಿ ಅಸಮಾಧಾನ, ಆಕ್ರೋಶಕ್ಕೆ ದಾರಿ ಮಾಡಿಕೊಡಬಹುದಾದ ಆಯ್ಕೆ. ಸಂಸದ ಅನಂತ್ಕುಮಾರ್ ಕೈಗೆ ಅಧಿಕಾರ ಕೊಟ್ಟಂತೆ ಆಗುವುದಿಲ್ಲವೇ? ಕಮಲ ದಳ ವಿದಳನ ತಡೆಗಟ್ಟಲು ಸಾಧ್ಯವೆ? ಎಲ್ಲಕ್ಕೂ ಉತ್ತರ ಮುಂದಿನ ಚಿತ್ರಸರಣಿಯಲ್ಲಿ ನೋಡಿರಿ

ಆಯ್ಕೆ ಗೊಂದಲದಲ್ಲಿ ಜಾತಿ ಲೆಕ್ಕಾಚಾರ
ವೀರಶೈವ, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ಮತ್ತು ಒಕ್ಕಲಿಗ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧತೆ ನಡೆಸಿದ್ದು ಸಾಮೂಹಿಕ ನಾಯಕತ್ವ ಎಂದಿದ್ದು ಎಲ್ಲರಿಗೂ ಗೊತ್ತಿದೆ. ಈಗ ಉನ್ನತ ವರ್ಗದ ಜೋಶಿ ಅವರನ್ನು ಅಧ್ಯಕ್ಷ ಸ್ಥಾನಕ್ಕೇರಿಸಿದೆ. ಎಲ್ಲಾ ವರ್ಗದ ನಾಯಕರನ್ನು ಹೊಂದಿರುವುದು ಬಿಜೆಪಿಗೆ ಪ್ಲಸ್ ಪಾಯಿಂಟ್

ಆರೆಸ್ಸೆಸ್ ಅಭ್ಯರ್ಥಿ ಕಟೀಲು ಆಯ್ಕೆ ಆಗಿಲ್ಲ ಏಕೆ?
ಉತ್ತರ ಕರ್ನಾಟಕದಲ್ಲಿ ಕಟೀಳ್ ಗಿಂತ ಪ್ರಹ್ಲಾದ್ ಅವರು ಜನಪ್ರಿಯರು. ಸಾರ್ವಜನಿಕ ವಲಯದಲ್ಲಿ ಜನ ಸಂಪರ್ಕದಲ್ಲಿ ಹಾಗೂ ಉತ್ತಮ ಭಾಷಣ ಮಾಡುವುದರಲ್ಲಿ ನಳೀನ್ ಕುಮಾರ್ ಗಿಂತ ಪ್ರಹ್ಲಾದ್ ಅನುಭವಸ್ಥರು ಎಂಬ ಅಂಶ ಅವರನ್ನು ಅಧ್ಯಕ್ಷ ಪಟ್ಟಕ್ಕೇರಿಸಿತು. ಆದರೆ, ಹಿಂದುತ್ವವಾದಿ ಜೋಶಿ ಅವರೊಂದಿಗೆ ಇತ್ತೀಚೆಗೆ ದೇವರ ಮೇಲೆ ಒಲವು ತೋರಿರುವ ಶೆಟ್ಟರ್ ಸೇರಿಸಿಕೊಂಡು ಹಿಂದುತ್ವ ಕಾರ್ಡ್ ಕೂಡಾ ಬಿಜೆಪಿ ಎಸೆಯುತ್ತಿದೆ.

ಕೆಜೆಪಿ ಆರ್ಭಟ ತಡೆಯಲು ಸಾಧ್ಯವೇ?
ತುಸು ಕಷ್ಟ. ಮಠ ಮಾನ್ಯಗಳ ಬೆಂಬಲ ಪಡೆದಿರುವ ಯಡಿಯೂರಪ್ಪ ಅವರು ತಂತ್ರಗಾರಿಕೆಯಲ್ಲಿ ಬಿಜೆಪಿಗೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಗುಲ್ಬರ್ಗಾ ಭಾಗದಲ್ಲೂ ಕೆಜೆಪಿ ಸದ್ದು ಮಾಡಿದ್ದು, ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ. ವೀರಶೈವ ಮಠಗಳು ಸೇರಿದಂತೆ 500ಕ್ಕೂ ಅಧಿಕ ಕೋಟಿ ರು ಸುರಿದ ಬಿಜೆಪಿ ಸರ್ಕಾರ ಈಗ ಮತಗಳಾಗಿ ಪರಿವರ್ತಿಸುವಂತೆ ಕೇಳುತ್ತಿದೆ. ಬಿಎಸ್ ವೈ ಕೂಡಾ ಇದೆ ಮನವಿ ಹಾಕಿದ್ದಾರೆ. ವಿವರಕ್ಕೆ ಈ ಲೇಖನ ಓದಿ

ಕಮಲ ವಿದಳನ ತಡೆ ಸಾಧ್ಯವೇ?
ಜನಪ್ರಿಯತೆಯಲ್ಲಿ ಪ್ರಹ್ಲಾದ್ ಅವರ ಆಯ್ಕೆ ಒಪ್ಪಬಹುದಾದರೂ ಪಕ್ಷದ ಆಂತರಿಕ ಕದನ ತಡೆಗಟ್ಟಲು ಸಾಧ್ಯವಿಲ್ಲ. ಟಿಕೆಟ್ ಹಂಚಿಕೆಯಲ್ಲೇ ಜೋಶಿ ಅವರಿಗೆ ಹೊಡೆತ ಬೀಳಲಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಬಿಜೆಪಿ ಜನಪ್ರಿಯತೆ ಕುಸಿತ, ನಗರ ಭಾಗಗಳಲ್ಲಿ ಜೆಡಿಎಸ್ ಮೇಲಕ್ಕೇರುವುದನ್ನು ತಡೆಗಟ್ಟುವುದು, ಗೆದ್ದ ಭಾಗಗಳಲ್ಲೇ ಸೋಲಿನ ಭೀತಿ ಕಾಡುತ್ತಿರುವುದು ಬಿಜೆಪಿಗೆ ಮುಳುವಾಗಲಿದೆ.ಬಿಜೆಪಿಯಿಂದ ಅನೇಕ ನಾಯಕರು ದೂರಾಗುವುದನ್ನು ತಡೆಗಟ್ಟಲು ಸಾಧ್ಯವೇ ಇಲ್ಲ

ಅನಂತ್ ದೂರಾಲೋಚನೆ
ಅನಂತ್ಕುಮಾರ್ ವಿರೋಧಿ ಬಣ, ಸದಾನಂದಗೌಡ ಬೆಂಬಲಿಗರು ಈಗಾಗಲೇ ಬಂಡಾಯ ಎದ್ದಿರುವುದು ಗುಟ್ಟಾಗಿ ಉಳಿದಿಲ್ಲ.
ಏನೇ ಆಗಲಿ ರಾಜ್ಯದಲ್ಲಿ ನಾನು ಮುಖ್ಯಮಂತ್ರಿಯಾಗಲು ಅನಂತ್ ಚಿಂತಿಸಿದ್ದು, ಟಿಕೆಟ್ ಹಂಚಿಕೆ, ಬಿ ಫಾರಂ ವಿತರಣೆ ಹಿಡಿತ ಸಾಧಿಸಿದ್ದಾರೆ. ಮುಂದೆ ಬಿಜೆಪಿಗೆ ಬಹುಮತ ಬರದಿದ್ದರೆ ಜೆಡಿಎಸ್ ಸೇರಿದಂತೆ ಇತರೆ ಪಕ್ಷದ ಮೈತ್ರಿ ಸಾಧಿಸಲು ಅನಂತ್ ಯೋಜಿಸಿದ್ದಾರೆ. ಸಾಮೂಹಿಕ ನಾಯಕತ್ವ ಎಂದ ಮೇಲೆ ಶೆಟ್ಟರ್ ಅವರು ಸಿಎಂ ಅಭ್ಯರ್ಥಿ ಎಂಬುದು ಲೆಕ್ಕಕ್ಕೆ ಬರುವುದಿಲ್ಲ ಅಲ್ಲವೇ

ಸಾಮೂಹಿಕ ನಾಯಕತ್ವ ಎಂಬ ಮಂತ್ರ
ಬಿಜೆಪಿ ಬಿಟ್ಟು ಕಾಂಗ್ರೆಸ್, ಜೆಡಿಎಸ್, ಕೆಜೆಪಿ ಹೀಗೆ ಸಿಕ್ಕ ಸಿಕ್ಕ ದಾರಿಯಲ್ಲಿ ಮೂಲ ಬಿಜೆಪಿಗರು, ವಲಸಿಗರು ಹೋದರೂ ಅನಂತ್ ಚಿಂತಿಸುವುದಿಲ್ಲ.
ಸಾಮೂಹಿಕ ನಾಯಕತ್ವವಾದ್ದರಿಂದ ಒಬ್ಬರನ್ನು ದೂರುವಂತಿಲ್ಲ. ಜಗದೀಶ್ ಶೆಟ್ಟರ್ ಸಿಎಂ ಅಭ್ಯರ್ಥಿಯಾದರೂ ಅಂತಿಮ ಆಯ್ಕೆ ಹೈಕಮಾಂಡ್ ಕೈಲಿರುವುದರಿಂದ ಎಲ್ಲವೂ ಅನಂತ್ ಅಂದುಕೊಂಡಂತೆ ನಡೆಯುತ್ತಿದೆ. ಇನ್ನೇನಿದ್ದರೂ ಯಡಿಯೂರಪ್ಪ ನಿಲ್ಲಿಸಿದ ಅಭ್ಯರ್ಥಿಗಳ ವಿರುದ್ಧ ಯಾರನ್ನು ನಿಲ್ಲಿಸುತ್ತಾರೆ ಎಂಬುದಷ್ಟೆ. ಸೋಲು ಗೆಲುವು ಲೆಕ್ಕಾಚಾರ ಅನಂತ ಅವರಿಗಿಲ್ಲ.












Click it and Unblock the Notifications