ಶಂಕಿತ ಉಗ್ರರ ಶಂಕೆ ದೂರಾದ ಮೇಲೆ ಗತಿಯೇನು?

ಅದೇ ರೀತಿ ಭಯೋತ್ಪಾದಕ ಸ್ಫೋಟಗಳ ಆರೋಪದ ಮೇಲೆ ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಿ ಅವರ ಜೀವನ ಹಾಗೂ ವೃತ್ತಿಗೆ ಫುಲ್ ಸ್ಟಾಪ್ ಇಡುವ ಕಾರ್ಯ ನಡೆದಿದೆ. ಇದು ಬೇಕೆಂತಲೇ ಮಾಡಿದ ಕೃತ್ಯ ಎನ್ನುವಂತಿಲ್ಲ. ಅಸಲಿ ಆರೋಪಿಗಳನ್ನು ಹಿಡಿಯುವಾಗ ಶಂಕಿತರನ್ನು ವಿಚಾರಿಸುವುದು ತನಿಖೆಯ ಕ್ರಮ. ಆದರೆ, ಶಂಕಿತರಿಗೆ ಅವರು ಮೊದಲು ಮಾಡುತ್ತಿದ್ದ ವೃತ್ತಿ, ಅವರಿಗಿದ್ದ ಇಮೇಜ್ ಮತ್ತೆ ಯಾರು ನೀಡುತ್ತಾರೆ.
ಕಳ್ಳತನ ಅಥವಾ ಯಾವುದೇ ಸಣ್ಣ ಪ್ರಮಾಣದ ದುಷ್ಕೃತ್ಯ ಎಸಗಿ ಜೈಲಿಗೆ ಹೋಗಿ ಬಂದರೆ ಗುಂಪಿಗೆ ಸೇರದ ವ್ಯಕ್ತಿಯಾಗಿ ಎಲ್ಲರೂ ನೋಡುವ ಕಾಲ ಇರುವಾಗ. ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗಿಯಾಗಿದ್ದ ವ್ಯಕ್ತಿ ಶಂಕಿತ ಉಗ್ರ ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದ ಎಂದ ಮೇಲೆ ಮುಗಿಯಿತು.
2008ರ ಜೈಪುರ ಸರಣಿ ಸ್ಫೋಟಗಳ ಬಳಿಕ ರಶೀದ್ ಹುಸೈನ್ ಎಂಬ ಇಂಜಿನಿಯರ್ ಒಬ್ಬನ ಬಂಧನದ ಹಿನ್ನೆಲೆಯಲ್ಲಿ ಆತನನ್ನು ಇನ್ಫೋಸಿಸ್ ಸಂಸ್ಥೆ ಉಚ್ಚಾಟಿಸಿತ್ತು. ಆತನ ಮೇಲಿನ ಆರೋಪ ಮುಕ್ತವಾದ ಮೇಲೆ ಆತನಿಗೆ ರೂ. 20 ಲಕ್ಷ ಪರಿಹಾರ ನೀಡಲು ರಾಜಸ್ಥಾನ ಹೈಕೋರ್ಟ್ನಲ್ಲಿ ಇನ್ಫಿ ಒಪ್ಪಿಕೊಂಡಿದೆ. [ಬಂಧಿತ ಶಂಕಿತ ಉಗ್ರರ ಪಟ್ಟಿ ]
2008ರ ಮೇ 13ರಂದು ಸುಮಾರು 60 ಮಂದಿಯ ಸಾವಿಗೆ ಕಾರಣವಾದ ಸರಣಿ ಸ್ಫೋಟಗಳ ಸಂಬಂಧ ವಿಚಾರಣೆಗಾಗಿ ಜೈಪುರ ಪೊಲೀಸರು ರಶೀದ್ರನ್ನು ವಶಕ್ಕೆ ತೆಗೆದುಕೊಂಡಿದ್ದರು. ರಶೀದ್ರನ್ನು 10 ದಿನ ವಶದಲ್ಲಿರಿಸಿಕೊಂಡ ಪೊಲೀಸರು ಆತನ ವಿರುದ್ಧ ಯಾವುದೇ ಸಾಕ್ಷ ದೊರೆಯದ ಕಾರಣ ಬಿಡುಗಡೆಗೊಳಿಸಿದ್ದರು.
ಸ್ಫೋಟದ ಸಂಬಂಧ ರಶೀದ್ನನ್ನು ಬಂಧಿಸಲಾಗಿರಲಿಲ್ಲ ಅಥವಾ ಆರೋಪ ಪಟ್ಟಿ ಸಲ್ಲಿಸಲಾಗಿರಲಿಲ್ಲ. ಆದರೆ, ಆತನನ್ನು ವಶಪಡಿಸಿಕೊಂಡ ವಾರದೊಳಗೆ ಯಾವುದೇ ಶೋಕಾಷ್ ನೋಟಿಸ್ ನೀಡದೆ ರಶೀದ್ನನ್ನು ತನ್ನ ಸಂಸ್ಥೆಯಿಂದ ಇನ್ಫೋಸಿಸ್ ಉಚ್ಚಾಟಿಸಿತ್ತು. ಆತ ಅದರ ಜೈಪುರ ಕಚೇರಿಯಲ್ಲಿ ಹಿರಿಯ ನೆಟ್ವರ್ಕ್ ಎಂಜಿನಿಯರ್ ಆಗಿದ್ದರು.
ರಶೀದ್ ಸುಮ್ಮನಿರದೆ 2008ರಲ್ಲಿ ತನ್ನ ಉಚ್ಚಾಟನೆ ಯನ್ನು ಸ್ಥಳೀಯ ಕಾರ್ಮಿಕ ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಮೂರು ವರ್ಷಗಳ ವಿಚಾರಣೆಯ ಬಳಿಕ 2011ರ ಮಾರ್ಚ್ನಲ್ಲಿ ಅದು ಆತನ ಪರ ತೀರ್ಪು ನೀಡಿತು. ಹಾಗೂ ಉಚ್ಚಾಟನಾ ಆದೇಶವನ್ನು ರದ್ದುಪಡಿಸಿತು. ಆದರೆ, ಮೂರು ವರ್ಷದ ಅವಧಿಯಲ್ಲಿ ಕಳೆದುಕೊಂಡ ವೃತ್ತಿ ಜೀವನ ಮತ್ತೆ ಯಾರು ದೊರೆಕಿಸಿಕೊಡುತ್ತಾರೋ ಗೊತ್ತಿಲ್ಲ.
ಬೆಂಗಳೂರಿನ ಶಂಕಿತರು: ಲಷ್ಕರ್ ಇ ತೋಯ್ಬಾ, ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿಕ್ ಸಂಘಟನೆ ಸಂಪರ್ಕಿತರನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದರು. 20 ರ ತಂಡ 150ಕ್ಕೂ ವಿದ್ಯಾರ್ಥಿಗಳ ತಲೆಯಲ್ಲಿ ವಿಷಬೀಜ ಬಿತ್ತಿರುವ ಆತಂಕದ ಸಂಗತಿ ಹೊರ ಬಿದ್ದಿತ್ತು.
ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಭಟ್ಕಳ, ಮಹಾರಾಷ್ಟ್ರ, ಹೈದರಾಬಾದ್ ಮುಂತಾದೆಡೆ ಜಾಲ ಹೊಂದಿದ್ದ ಈ ಬಂಧಿತರು ನಗರ ಅನೇಕ ಕಾಲೇಜಿನ ಅಯ್ದ ವಿದ್ಯಾರ್ಥಿಗಳನ್ನು ಉಗ್ರವಾದದತ್ತ ಕರೆದೊಯ್ಯುತ್ತಿದ್ದರು ಎನ್ನಲಾಗಿತ್ತು. ಕಾನೂನಿನಲ್ಲಿ ಕ್ರೈಂ ಬಗ್ಗೆ ಯೋಚನೆ ಮಾಡುವುದಕ್ಕೆ ಶಿಕ್ಷೆಯಿಲ್ಲ. ಕ್ರೈಂ ಮಾಡಿದರೆ ಮಾತ್ರ ಶಿಕ್ಷೆ ಇದೆ.
ಶಂಕಿತರಲ್ಲಿ ಪತ್ರಕರ್ತ ಮತಿ ಉರ್ ರೆಹಮಾನ್ ಸಿದ್ಧಿಕಿ ಬಿಡುಗಡೆಗೊಂಡ ಮೇಲೆ ತನಗಾದ ನೋವನ್ನು ತೋಡಿಕೊಂಡಿದ್ದಾರೆ. ಡಿಆರ್ ಡಿಒದಲ್ಲಿ ಜ್ಯೂ. ವಿಜ್ಞಾನಿಯಾಗಿದ್ದ 25 ಇಜಾಜ್ ಮಹಮ್ಮದ್ ಮಿರ್ಜಾ ಕಥೆಯೂ ಇದರಿಂದ ಹೊರತಲ್ಲ. ಭಾರತದ ಆಡಳಿತ ವ್ಯವಸ್ಥೆಯಲ್ಲಿ ಶಂಕಿತರ ಶಂಕೆ ದೂರಾದ ಮೇಲೆ ಅವರನ್ನು ಎಲ್ಲರಂತೆ ನಡೆಸಿಕೊಳ್ಳುವ, ಅವರಿಗೆ ತಪ್ಪಿ ಹೋದ ವೃತ್ತಿ ಬದುಕನ್ನು ಮತ್ತೆ ಕಟ್ಟಿ ಕೊಡುವ ಕಾರ್ಯ ಸರ್ಕಾರವೇ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಬೆಲೆ ಇರುವುದಿಲ್ಲ. ಅಂದಹಾಗೆ, ನೂರು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ. ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದು ಬರೀ ಸಿನಿಮಾ ಡೈಲಾಗ್ ಆಗಬಾರದು ಅಲ್ವ.












Click it and Unblock the Notifications