ಪತ್ರಕರ್ತರ ಕೊಲೆಗೆ ಸಂಚು ಹಾಕಿದ್ದ ಉಗ್ರ ಸೆರೆ

ಜೀವನ್ ಭೀಮಾನಗರ ನಿವಾಸಿ 23 ವರ್ಷದ ಸೈಯದ್ ತಂಜೀಮ್ ಬಂಧಿತ ಉಗ್ರನಾಗಿದ್ದಾನೆ. ಬೆಂಗಳೂರು, ಹುಬ್ಬಳ್ಳಿ, ಹೈದರಾಬಾದಿನಲ್ಲಿ 14 ಜನರನ್ನು ಉಗ್ರರನ್ನು ಬಂಧಿಸಿದ ನಂತರ ಈತ ನಾಪತ್ತೆಯಾಗಿದ್ದ ಎಂದು ಜಂಟಿ ಪೊಲೀಸ್ ಆಯುಕ್ತ ಬಿ ದಯಾನಂದ್ ಹೇಳಿದ್ದಾರೆ.
ಸೆಂಟ್ರಿಂಗ್ ಗುತ್ತಿಗೆದಾರನಾಗಿರುವ ಸೈಯದ್ ತಂಜೀಮ್ ಹಾಗೂ ಬಂಧಿತ ಉಗ್ರ ಶೋಯಬ್ ಅಹ್ಮದ್ ಮಿರ್ಜಾ ನಿಕಟವರ್ತಿಗಳಾಗಿದ್ದಾರೆ. ಬಂಧಿತ ಸೈಯದ್ ಮನೆಯನ್ನು ಪರಿಶೀಲಿಸಲಾಗಿದ್ದು, ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಯಾನಂದ್ ಹೇಳಿದರು.
ಪತ್ರಕರ್ತರ ಕೊಲೆಗೆ ಸಂಚು: ಉಗ್ರ ಶೋಯಬ್ ಅಹ್ಮದ್ ಮಿರ್ಜಾ ಹಾಕಿದ ಸ್ಕೆಚ್ ನಂತೆ ಖ್ಯಾತ ಕನ್ನಡ ಅಂಕಣಕಾರರೊಬ್ಬರನ್ನು ಕೊಲೆ ಮಾಡಲು ಸೈಯದ್ ಮುಂದಾಗಿದ್ದ.
ಅಂಕಣಕಾರರ ಮನೆ ವಿಳಾಸ, ದೈನಂದಿನ ಚಟುವಟಿಕೆ, ಅವರು ಉಪಯೋಗಿಸುವ ವಾಹನ, ಅವರ ಬಂಧು ಬಳಗ, ಸ್ನೇಹಿತ ವರ್ಗ, ಸಾಮಾಜಿಕ ಜಾಲ ತಾಣಗಳಲ್ಲಿ ಅವರ ಪರ ವಿರೋಧ ಪತ್ರಿಕ್ರಿಯೆಗಳ ಬಗ್ಗೆ ಉಗ್ರ ಸೈಯದ್ ಅಧ್ಯಯನ ನಡೆಸಿದ್ದ ಎಂದು ತಿಳಿದು ಬಂದಿದೆ.
ಟಿಂಬರ್ ಯಾರ್ಡ್ , ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಸೈಯದ್ ಗೆ ಉಗ್ರಗಾಮಿಗಳ ನಂಟು ಬೆಳೆಯಲು ಶೋಯಬ್ ಮಿರ್ಜಾ ಕಾರಣ ಎಂದು ತಿಳಿದು ಬಂದಿದೆ. ನಗರದ ವಸಂತನಗರದ ಗಲ್ಲಿಯೊಂದರಲ್ಲಿ ಅಲೆಯುತ್ತಿದ್ದ ಸೈಯದ್ ನನ್ನು ಪೊಲೀಸರು ಉಪಾಯವಾಗಿ ಬಂಧಿಸಿದ್ದಾರೆ.
ತಂಜೀಮ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ.19ರ ವಶಕ್ಕೆ ಪಡೆಯಲಾಗಿದೆ. ವಿಚಾರಣೆ ಮುಂದುವರೆದಿದೆ ಎಂದು ಉಪ ಪೊಲೀಸ್ ಆಯುಕ್ತ ದಯಾನಂದ ಹೇಳಿದ್ದಾರೆ. [ಬಂಧಿತ ಶಂಕಿತ ಉಗ್ರರ ಪಟ್ಟಿ ]
ಜೆ ಸಿ ನಗರದ ಸೈಬರ್ ಸೆಂಟರ್ ನಲ್ಲಿ ವಿದೇಶಗಳಿಗೆ ಇ ಮೇಲ್ ಮಾಡಲು ಹಾಗೂ ಉಗ್ರಗಾಮಿ ಚಟುವಟಿಕೆ ಬೆಳೆಸಲು ಬೇಕಾದ ಮಾಹಿತಿ ಸಂಗ್ರಹಿಸಲು ಸುರಕ್ಷಿತ ನೆಲೆ ಒದಗಿಸುತ್ತಾ, ಉಗ್ರರ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಉಮರ್ ಎಂಬ ಶಂಕಿತನನ್ನು ಸೆ.25 ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು.
ಬಂಧಿತ ಉಮರ್ ಉದ್ದೀನ್ ಹಾಗೂ ಪತ್ರಕರ್ತ ಮತಿ ಉರ್ ರೆಹಮಾನ್ ಸಿದ್ಧಿಕಿಯೊಂದಿಗೆ ನಿಕಟ ಸಂಪರ್ಕವಿತ್ತು ಎಂದು ವಿಚಾರಣೆಯಿಂದ ತಿಳಿದು ಬಂದಿತ್ತು.
ಬಂದಿತ ಉಗ್ರರು ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಭಟ್ಕಳ, ಮಹಾರಾಷ್ಟ್ರ, ಹೈದರಾಬಾದ್ ಮುಂತಾದೆಡೆ ಜಾಲ ಹೊಂದಿದ್ದರು. ಲಷ್ಕರ್ ಇ ತೋಯ್ಬಾ, ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿಕ್ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದರು. ಈ 20 ರ ತಂಡ 150ಕ್ಕೂ ವಿದ್ಯಾರ್ಥಿಗಳ ತಲೆಯಲ್ಲಿ ವಿಷಬೀಜ ಬಿತ್ತಿರುವ ಆತಂಕದ ಸಂಗತಿ ಖಚಿತವಾಗಿತ್ತು.












Click it and Unblock the Notifications