ತಿಮ್ಮಕ್ಕನಿಗೆ ಕೊನೆಗೂ ಸೂರು ಕೊಟ್ಟ ಸರ್ಕಾರ

ಮಂಗಳವಾರ ಕರ್ನಾಟಕ ಗೃಹ ಮಂಡಳಿಯಲ್ಲಿ ನಡೆದ ಸಮಾರಂಭದಲ್ಲಿ, ವಸತಿ ಸಚಿವ ವಿ.ಸೋಮಣ್ಣ ನೂತನ ಮನೆಯ ಹಕ್ಕುಪತ್ರವನ್ನು ಸಾಲುಮರದ ತಿಮ್ಮಕ್ಕನಿಗೆ ನೀಡಿದರು. 30/40 ಅಡಿ ನಿವೇಶನದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಮನೆಯನ್ನು ನಿರ್ಮಿಸುವ ಸಂಪೂರ್ಣ ಖರ್ಚನ್ನು ಗೃಹ ಮಂಡಳಿಯೇ ಭರಿಸಿದೆ.
ಮಾಗಡಿ ತಾಲೂಕಿನ ಕುದೂರು ಹೋಬಳಿಯ ಹುಲಿಕಲ್ ಗ್ರಾಮದವರಾದ ನಾಡೋಜ ತಿಮ್ಮಕ್ಕನಿಗೆ ಸೂರು ಒದಗಿಸುವುದಾಗಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಭರವಸೆ ನೀಡಿದ್ದರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದಾಗ ಸರ್ಕಾರ ನೀಡಿದೆ ಭರವಸೆ ಈಡೇರಿಸಿದೆ.
ಇತ್ತೀಚೆಗಷ್ಟೆ ಅನಾರೋಗ್ಯದಿಂದ ಬಳಲುತ್ತಿದ್ದ ತಿಮ್ಮಕ್ಕ (84) ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಜ್ವರ ಮತ್ತು ಕೆಮ್ಮು ಮತ್ತು ಶ್ವಾಸಕೋಶದ ತೊಂದರೆ ಉಂಟಾಗಿ ತಿಮ್ಮಕ್ಕನಿಗೆ ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿತ್ತು. ಶುಕ್ರವಾರವಷ್ಟೆ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು.
ತಿಮ್ಮಕ್ಕನಿಗೆ ಮನೆಯ ಹಕ್ಕು ಪತ್ರ ವಿತರಿಸಿದ ವಸತಿ ಸಚಿವ ವಿ.ಸೋಮಣ್ಣ ಹಿಂದಿನ ಸರ್ಕಾರಗಳು ತಿಮ್ಮಕ್ಕನಿಗೆ ಮನೆ ನೀಡುತ್ತೇವೆ ಎಂಬ ಭರವಸೆ ಈಡೇರಿಸಿರಲಿಲ್ಲ. ಬಿಜೆಪಿ ಸರ್ಕಾರ ತಿಮ್ಮಕ್ಕನ ಸೇವೆ ಪರಿಗಣಿಸಿ ಅವರಿಗೆ ಮನೆ ನೀಡಿ ಗೌರವಿಸಿದೆ ಎಂದರು.
ವಿವೇಚನಾ ಕೋಟ ಬಳಕೆ : ಕರ್ನಾಟಕ ಗೃಹ ಮಂಡಳಿ ವಿಚೇಚನಾ ಕೋಟಾದಡಿ ಅಂಗವಿಕಲರು, ಬುದ್ಧಿಮಾಂದ್ಯರು ಮತ್ತು ಸೈನಿಕರಿಗೆ ರಿಯಾಯಿತಿ ದರದಲ್ಲಿ ನಿವೇಶನ ನೀಡಲು ಅವಕಾಶವಿದೆ.
ಅದರಂತೆ ಶ್ರೀನಗರ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕ, ಚಾಮರಾಜನಗರದ ಲೂಯಿಸ್ ಅವರಿಗೆ 40/ 60 ಅಡಿ ನಿವೇಶನ ಹಾಗೂ ಪತಂಜಲಿ ಯೋಗಗುರು ಪ್ರಕಾಶ್ ಯೋಗಿ ಅವರಿಗೆ 50/80 ಅಡಿ ನಿವೇಶನ ನೀಡಲಾಗಿದೆ ಎಂದು ಸೋಮಣ್ಣ ಹೇಳಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications