'ಭಾರತ ಮೊದಲು' ಎಂಬುದು ನನ್ನ ಮಂತ್ರ: ಮೋದಿ
ನ್ಯೂಜೆರ್ಸಿ, ಮಾ.10: ವಾರ್ಟನ್ ವಾಣಿಜ್ಯೋದ್ಯಮ ಶಾಲೆ ಆಹ್ವಾನ ಹಿಂತೆಗೆದುಕೊಂಡ ನಂತರ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಅಮೆರಿಕದ ಎಡಿಸನ್, ನ್ಯೂಜೆರ್ಸಿ, ಶಿಕಾಗೋ, ಇಲಿನಾಯ್ಸ್ ರಾಜ್ಯಗಳಲ್ಲಿನ ಭಾರತೆಯ ಸಮುದಾಯದವರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.
ನ್ಯೂಜೆರ್ಸಿ ಎಡಿಸನ್ ನಲ್ಲಿರುವ ಟಿವಿ ಏಷ್ಯಾ ಅಡೀಟೋರಿಯಂ ಮತ್ತು ಇಲಿನಾಯ್ಸ್ ನ ರೋಲಿಂಗ್ ಮೆಡೋಸ್ 3405 ಅಲ್ಗೊನ್ ಖಿನ್ ರಸ್ತೆ ಹಾಲಿಡೇ ಇನ್ ನಲ್ಲಿ ಮೋದಿ ನೇರ ಭಾಷಣ ಪ್ರಸಾರವಾಯಿತು. ಬಿಜೆಪಿ ಅಮೆರಿಕದ ಸಾಗರೋತ್ತರ ಮಿತ್ರರ ವೆಬ್ ಸೈಟ್ ನಲ್ಲಿ ಕೂಡಾ ಎನ್ನಾರೈಗಳು ಭಾಷಣ ಓದಿದರು.
2002ರ ಗೋಧ್ರೋತ್ತರ ಹತ್ಯಾಕಾಂಡದ ಬಗ್ಗೆ ಪ್ರಶ್ನೆಯನ್ನು ಸದಾ ಎದುರಿಸುತ್ತಿರುವ ಮೋದಿ, ತಮ್ಮ ಹಿಂದಿ ಭಾಷೆಯ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪಿಸಲೇ ಇಲ್ಲ.

ಸೆಕ್ಯುಲರಿಸಂ ಎಂದರೆ ನನಗೆ "India First" ಎಂದು ಘೋಷಿಸಿದರು. ಎಲ್ಲಾ ನಾಗರೀಕರಿಗೂ ನಾನು ಇದೇ ಸಂದೇಶ ನೀಡುತ್ತೇನೆ. ನಾವು ಮಾಡುವ ಕಾರ್ಯ, ಯೋಜನೆಗಳು ದೇಶ ಮೊದಲು ನಂತರ ನಮ್ಮ ರಾಜ್ಯ, ಪಂಗಡವಾಗಿರಬೇಕು.
ಭಾರತದ ಏಳಿಗೆಯೇ ನಮ್ಮ ಸರ್ವಸ್ವವಾದಾಗ ಜಾತ್ಯಾತೀಯತೆ ಎಲ್ಲವೂ ಗೌಣವಾಗುತ್ತದೆ. ಅಸಮಾನತೆ ಶಬ್ದ ಅರ್ಥ ಕಳೆದುಕೊಳ್ಳುತ್ತದೆ ಎಂದರು.
ದೇಶದ ಶೇ 65 ರಷ್ಟು ಯುವ ಶಕ್ತಿಯ ಕೌಶಲ್ಯ ಅಭಿವೃದ್ಧಿ ಅಗತ್ಯ ಎದ್ದು ಕಾಣುತ್ತಿದೆ. ಎನ್ನಾರೈಗಳ ಸಹಾಯವಿದ್ದರೆ ಮಾತ್ರ ಕೆಲವು ಕ್ಷೇತ್ರಗಳಲ್ಲಿ ಭಾರತ ಅಭಿವೃದ್ಧಿ ಕಾಣಲು ಸಾಧ್ಯ. ಕೈಗಾರಿಕೆ ಮತ್ತು ಪ್ರವಾಸೋದ್ಯಮದಲ್ಲಿ ಇವುಗಳಲ್ಲಿ ಒಂದು ಎಂದು ಮೋದಿ ಅಭಿಪ್ರಾಯಪಟ್ಟರು.
ಅಪರೂಪಕ್ಕೆ ಯುಪಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳದೇ ಇತ್ತೀಚೆಗೆ ಮಂಡನೆಯಾದ ಬಜೆಟ್ ನಲ್ಲಿ ಹೊಸ ಆವಿಷ್ಕಾರ, ಯುವ ಜನಾಂಗದ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಗುಜರಾತಿನಲ್ಲಿ ಕೌಶಲ್ಯ ಅಭಿವೃದ್ಧಿಗೆ ಕೈಗೊಂಡ ಕ್ರಮಗಳನ್ನು ವಿವರಿಸಿದರು.
ಅಭಿವೃದ್ಧಿ ನಮ್ಮ ದಿವ್ಯ ಮಂತ್ರವಾಗಬೇಕು. ನಮ್ಮ ನಾಡು ಅಭಿವೃದ್ಧಿಯನ್ನು ಪರಕೀಯರು ಬಂದು ಮಾಡಲಾರರು. ಪರಕೀಯರು ವ್ಯಾಪರಸ್ಥರಾಗಿರುತ್ತಾರೆ ಅಷ್ಟೇ .ಗುಜರಾತ್ ಉತ್ತಮ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯಲು ಎನ್ನಾರೈಗಳ ಕೊಡುಗೆ ಅಪಾರ. ಇದೇ ರೀತಿ ಇತರೆ ರಾಜ್ಯಗಳತ್ತ ಕೂಡಾ ಎನ್ನಾರೈಗಳು ಕಣ್ಣು ಹಾಯಿಸಬೇಕು ಎಂದರು.
ಅಮೆರಿಕದಲ್ಲಿ ಈಗ ಅನೇಕ ಹೋಟೆಲ್, ಮೊಟೆಲ್ ಗಳು ಗುಜರಾತಿಗಳ ಕೈಯಲ್ಲಿರುವುದು ಸಂತಸದ ವಿಷಯ. ಇದರಂತೆ ಭಾರತಕ್ಕೂ ಅವರ ಕೊಡುಗೆ ನಿರೀಕ್ಷೆಯಿದೆ ಎಂದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications