ಕೆಜೆಪಿಗೆ ಹೋಗೋಲ್ಲ : ರೇಣುಕಾಚಾರ್ಯ ಘೋಷಣೆ
ಸ್ಥಳೀಯ ಸಂಸ್ಥೆಗಳ ಚುಣಾವಣೆ ನಂತರ ರೇಣುಕಾಚಾರ್ಯ ಕೆಜೆಪಿ ಸೇರುತ್ತಾರೆ ಎಂಬ ಉಹಾಪೋಹಗಳಿಗೆ ತೆರೆಎಳೆದಿರುವ ಅವರು, ಕೆಜಪಿ ಸೇರುತ್ತೇನೆ ಎಂಬ ಮಾಧ್ಯಮಗಳ ವರದಿಗಳು ಆಧಾರ ರಹಿತವಾಗಿವೆ. ನಾನು ಬಿಜೆಪಿ ತೊರೆಯುವುದಿಲ್ಲ ಎಂದು ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ನನ್ನ ಕ್ಷೇತ್ರದ ಜನರ ಅಭಿಪ್ರಾಯಗಳು ನನಗೆ ಮುಖ್ಯ, ನಮಗೆ ನೀವು ಯಾವ ಪಕ್ಷದಲ್ಲಿದ್ದೀರಿ ಎಂಬುದು ಮುಖ್ಯವಲ್ಲ. ನಿಮ್ಮ ವೈಯಕ್ತಿಕ ಗೌರವ ಮುಖ್ಯ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.
ಆದ್ದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬೆಂಬಲಿಗರಿಗೆ ಟಿಕೆಟ್ ಕೊಡಿಸಿದ್ದೇನೆ. ಇದರ ಅರ್ಥ ನಾನು ಕೆಜೆಪಿಗೆ ಹೋಗುವುದಿಲ್ಲ. ಬಿಜೆಪಿಯಲ್ಲಿಯೇ ಉಳಿಯುತ್ತೇನೆ. ಮುಂದಿನ ಚುನಾವಣೆಗೆ ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಅಪಾರವಾದ ಗೌರವವಿದೆ. ಯಾವ ಪಕ್ಷದಲ್ಲಿದ್ದರೂ ಅವರನ್ನು ಗೌರವಿಸುತ್ತೇನೆ. ಆದರೆ, ಕೆಜೆಪಿ ಸೇರುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.
ರೇಣುಕಾಚಾರ್ಯ ಅವರ ಈ ನಿರ್ಧಾರದಿಂದ ಯಡಿಯೂರಪ್ಪ ಪಾಳೆಯಕ್ಕೆ ಜಿಗಿಯುವ ಸಚಿವರಲ್ಲಿ ಒಂದು ವಿಕೆಟ್ ಪತನಗೊಂಡಂತಾಗಿದೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ವಿಸರ್ಜನೆಯಾದ ನಂತರ ನಾಲ್ವರು ಸಚಿವರು ಕೆಜೆಪಿ ಸೇರಲಿದ್ದಾರೆ ಎಂಬ ಲೆಕ್ಕಾಚಾರಗಳು ಈಗ ಸುಳ್ಳಾಗಿವೆ.
ಇನ್ನೂ ಕೆಜೆಪಿ ಸೇರಲಿರುವ ಪಟ್ಟಿಯಲ್ಲಿರುವ ಸಚಿವರಾದ ಬಸವರಾಜ್ ಬೊಮ್ಮಾಯಿ, ಮುರುಗೇಶ್ ನಿರಾಣಿ, ಉಮೇಶ್ ಕತ್ತಿ ಮುಂತಾದವರ ನಿರ್ಧಾರವೇನು ಎಂಬುದು ಸ್ಪಷ್ಟವಾಗಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲರೂ ಕೆಜೆಪಿ ಸೇರುತ್ತಾರಾ? ಅಥವ ಯಡಿಯೂರಪ್ಪ ಜೊತೆ ಹೋಗದೆ ಬಿಜೆಪಿಯಲ್ಲೇ ಮುಂದುವರೆಯುತ್ತಾರಾ? ಎಂದು ಕಾದು ನೋಡಬೇಕು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ