ಮಹಿಳಾ ಎಸ್ಸೈ ಕಾಲು ಕಚ್ಚಿದ ನಡುಬೀದಿ ನಾರಾಯಣ

ಏನಾಯಿತೆಂದರೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ನೈಟ್ ರೌಂಡ್ಸ್ ನಲ್ಲಿದ್ದಾಗ ನಾಯಿಯೊಂದು ಅವರ ಬಲಗಾಲನ್ನು ಬಲವಾಗಿ ಕಚ್ಚಿ ಗಾಯಗೊಳಿಸಿದೆ. ಹಲ್ಲುಗಳು ಸರಿಯಾಗಿ ಇಳಿಬಿಟ್ಟಿದ್ದು, ಸದರಿ ಅಧಿಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಹಾಯಕ ಸಬ್ ಇನ್ಸ್ ಪೆಕ್ಟರ್ ಶ್ರೀಕಲಾ ಕೆಟಿ ಅವರು ಮಂಗಳವಾರ (ಮಾರ್ಚ್ 5) ಬೆಳಗಿನ ಜಾವ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬೀದಿ ನಾಯಿ ಕಚ್ಚಿದೆ. ಭೀಮಪ್ಪ ಎಂಬ ಪೇದೆಯ ಜತೆ ಮಹಾಕಾಳಿ ಪಡಪು (Mahakali Padupu) ಚೆಕ್ ಪಾಯಿಂಟ್ ಬಳಿ ಕರ್ತವ್ಯದಲ್ಲಿದ್ದಾಗ ಈ ಘಟನೆ ನಡೆದಿದೆ.
ಮಂಗಳೂರು ದಕ್ಷಿಣ ವಿಭಾಗದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಶ್ರೀಕಲಾ ASI ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಕಲಾ ಅವರ ಪತಿ ವಿದೇಶದಲ್ಲಿ ಕೆಲಸದಲ್ಲಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಮಗಳು 5ನೇ ತರಗತಿಯಲ್ಲಿ ಓದುತ್ತಿದ್ದರೆ ಮಗ 2ನೆಯ ತರಗತಿಯಲ್ಲಿದ್ದಾನೆ.
ಶ್ರೀಕಲಾ ಅವರು ರಾತ್ರಿ ಪಾಳಿಗಾಗಿ ದುಡಿಯಲು ಹೊರಹೋಗುವಾಗ ಮಕ್ಕಳನ್ನು ಮನೆಯಲ್ಲಿ ಕೂಡಿಹಾಕಿ ಹೊರಗಿನಿಂದ ಬೀಗ ಹಾಕಿಕೊಂಡು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದ್ದಾರೆ. 'ತುರ್ತು ಸಂದರ್ಭಗಳಲ್ಲಿ ಗಾಬರಿಪಟ್ಟುಕೊಳ್ಳದೆ ಮೊಬೈಲ್ ಫೋನಿಗೆ ಕರೆಮಾಡುವಂತೆ ಮಕ್ಕಳಿಗೆ ತಿಳಿಯಹೇಳಿ, ಒಂದು ಗುಡ್ ನೈಟ್ ಹೇಳಿ ಠಾಣೆಯತ್ತ ಹೆಜ್ಜೆ ಹಾಕುತ್ತೇನೆ' ಎನ್ನುತ್ತಾರೆ ಶ್ರೀಕಲಾ.
ಏನಾಯಿತೆಂದರೆ .... 20 ವರ್ಷದಿಂದ ಇಲಾಖೆಯಲ್ಲಿ ಸೇವೆಯಲ್ಲಿರುವ ಶ್ರೀಕಲಾ ನಿನ್ನೆ ಬೆಳಗಿನ ಜಾವ 4 ಗಂಟೆಯಲ್ಲಿ ಒತ್ತರಿಸಿ ಬರುತ್ತಿದ್ದ ನಿದ್ದೆಯನ್ನು ದೂರ ಮಾಡಲು ಚೆಕ್ ಪಾಯಿಂಟ್ ನಿಂದ ಹೊರ ಬಂದು ನಾಲ್ಕು ಹೆಜ್ಜೆ ಹಾಕಲು ಪ್ರಾರಂಭಿಸಿದ್ದಾರೆ. ಅದೇ ವೇಳೆಗೆ ಅದೆಲ್ಲಿತ್ತೋ ನಾಯಿ, ಬಂದು ಅವರ ಕಾಲನ್ನು ಬಲವಾಗಿ ಕಚ್ಚಿಬಿಟ್ಟಿದೆ.
ಮೊದಲು ಎಡಗಾಲನ್ನು ಕಚ್ಚಿ ಗಾಯಗೊಳಿಸಿದ ನಾಯಿ ಮತ್ತೆ ಅವರ ಬಲಗಾಲಿನ ಮೀನುಖಂಡವನ್ನು ಕಚ್ಚಿದೆ. ಬಲಗಾಲಿನಿಂದ ರಕ್ತ ಸೋರಿಬರುತ್ತಿದ್ದಂತೆ ಶ್ರೀಕಲಾ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಜತೆಯಲ್ಲಿದ್ದ ಪೇದೆ ಭೀಮಪ್ಪ ತಕ್ಷಣ ಶ್ರೀಕಲಾ ಅವರನ್ನು ಸಮೀಪದ ಯುನಿಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
'ಗಾಯ ಆಳವಾಗಿದೆ. Anti-rabies ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ನಾಲ್ಕು ದಿನ ಆಸ್ಪತ್ರೆಯಲ್ಲಿದ್ದು, ಕನಿಷ್ಠ 2 ವಾರ ಕಾಲ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಲಾಗಿದೆ' ಎಂದು ಶ್ರೀಕಲಾಗೆ ಚಿಕಿತ್ಸೆ ನೀಡಿರುವ ಡಾ. ಹರೀಶ್ ಅವರು ಹೇಳಿದ್ದಾರೆ.












Click it and Unblock the Notifications