ಡಿಕೆ ಶಿವಕುಮಾರ್ ಗೆ ಕಚ್ಚಿದ ಕನಕಪುರ ಬೀದಿ ನಾಯಿ
ಕನಕಪುರ,ಮಾ. 1: ಈ ಜರ್ನಲಿಸಂ ಕಲಿಯೋವರಿಗೆ ಮಧ್ಯೆ ಎಲ್ಲೋ ಹೇಳಿಕೊಡ್ತಾರಂತೆ... 'ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿಯಲ್ಲ, ಅದೇ ಮನುಷ್ಯ ನಾಯಿಗೆ ಕಡಿದರೆ ಸುದ್ದಿ'. ಬೆಂಗಳೂರಿನಂತಹ ಮಹಾನಗರದಲ್ಲಿ ಈ ಪಾಠವನ್ನು ಅಕ್ಷರಶಃ ಪಾಲಿಸಲು ಆಗೋಲ್ಲ. ಏಕೆಂದರೆ ನಾಯಿ ಕಾಟ ಹಾಗಿದೆ.
ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ನಾಯಿಯೊಂದು ರಾಜಕಾರಣಿಗೆ ಕಚ್ಚಿದರೆ ಸುದ್ದಿ ಮಾಡಬೇಕೋ ಬೇಡವೋ!? ಎಂದು ಮತದಾರನನ್ನು ಕೇಳುತ್ತಾ ಕುಳಿತುಕೊಳ್ಳಲಾಗದು ಜನಹಿತದಿಂದ ಜನನಾಯಕನಿಗೆ ನಾಯಿ ಕಚ್ಚಿದರೆ ಸುದ್ದಿ ಮಾಡಲೇಬೇಕಾಗುತ್ತದೆ.

ಅದರಲ್ಲೂ ನಮ್ಮ ಡಿಕೆ ಶಿವಕುಮಾರ್ ಅಂತಹ ವರ್ಚಸ್ವಿ ನಾಯಕನಿಗೆ ನಾಯಿ ಕಚ್ಚಿದರೆ... ರೆ ಏನುಬಂತು? ನಾಯಿ ಕಚ್ಚೇ ಬಿಟ್ಟಿದೆ!
ಏನಾಯಿತೆಂದರೆ ಕಾಂಗ್ರೆಸ್ಸಿನ ಮಾಜಿ ಸಚಿವ ಡಿಕೆಶಿ ಸಾಹೇಬರು ಪಟ್ಟಣದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರ ಭರದಲ್ಲಿದ್ದಾರೆ. ಆದರೆ ನಾಯಿಗೆ ಅದು ಗೊತ್ತಾಗಿಲ್ಲ. ರಾತ್ರಿ ವೇಳೆ ಇವಯ್ಯ ಇಲ್ಯಾಕೆ ಕಾಣಿಸಿಕೊಂಡ ಅಂತ ಗುರುವಾರ ರಾತ್ರಿ ಕಚ್ಚಿಬಿಟ್ಟಿದೆ.
ಕುಯ್ಯೋಮರ್ರೋ ಅಂತ : ವಾರ್ಡ್ ನಂಬರ್ 7ರಲ್ಲಿ ಮಾಜಿ ಪುರಸಭಾ ಉಪಾಧ್ಯಕ್ಷ ಬಸವರಾಜು ಅವರ ಮನೆ ಸಮೀಪ ಪ್ರಚಾರಕ್ಕೆ ಅಂತ ಬಂದಿದ್ದಾರೆ ಡಿಕೆಶಿ. ನೇರವಾಗಿ ಅವರ ಕಾಲಿಗೆ ಬಾಯಿ ಹಾಕಿಬಿಟ್ಟಿದೆ ನಾಯಿ ಮುಂಡೇದು. ಅದೂ ಹಲ್ಲುಗಳು ಇಳಿಬಿಟ್ಟಿವೆ ಕಣ್ರೀ...ಪಾಪ. ಕೂಡಲೇ ಮಾಜಿ ಸಚಿವರು ಸರಕಾರಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ನಾಯಿ ಕಡಿತಕ್ಕೆ ಚುಚ್ಚುಮದ್ದು ಹಾಕಿಸಿಕೊಂಡರು ಅನ್ನಿ. ಛೆ, ಪಾಪ ಹೀಗಾಗಬಾರದಿತ್ತು.
ಇಲ್ಲಿ ಅನೇಕಾನೇಕ ಡೌಟುಗಳು/ ಪ್ರಶ್ನೆಗಳು ಸುಳಿದಾಡುತ್ತಿವೆ. ದಯವಿಟ್ಟು ಗಮನಿಸಿ: ಡಿಕೆಶಿಗೆ ಕಚ್ಚಿದ ನಾಯಿಯ ಜಾತಿ ಯಾವುದು, ಜಾತಿ ನಾಯೀನಾ ಅಥವಾ ಬೀದಿ ನಾಯಿನಾ? ಅಥವಾ ಸಾಕಿದ ನಾಯೀನಾ? ಅಥವಾ ಪ್ರತಿಪಕ್ಷ ಜಾತಿ ನಾಯೀನಾ?
ಅಷ್ಟಕ್ಕೂ ಡಿಕೆಶಿಗೇ ಏಕೆ ಕಚ್ಚಿತು? ಅದೂ ಈ ಚುನಾವಣೆ ಸಂದರ್ಭದಲ್ಲಿ. ಏನಾದರೂ ಅಪಶಕುನ ಇದ್ದೀತಾ? ಪಾಪ ಡಿಕೆಶಿ ಯಾರನ್ನು ಬೈದುಕೊಂಡು ಹೋಗುತ್ತಿದ್ದರೋ ಏನೋ!?
ಇದನ್ನು ಕೇಳಿ ರಾಜ್ಯದಲ್ಲಿ ಚುನಾವಣೆಗಾಗಿ ತನುಮನಧನ ಅರ್ಪಿಸುತ್ತಾ ಬೀದಿಬೀದಿ ಸುತ್ತುತ್ತಿರುವ ಸಮಸ್ತ ಜನನಾಯಕರೂ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಯಾವ ನಾಯಿಯ ಮೂಡು ಯಾವಾಗ ಹೇಗಿರುತ್ತದೋ ಎಂದು ಆತಂಕದಿಂದ ರಸ್ತೆ ಬದಿ ಹಾದುಹೋದ ನಾಯಿಯನ್ನು ದುರುಗುಟ್ಟಿಕೊಂಡು ನೋಡಿದ್ದಾರೆ. ಹುಷಾರು ಜನನಾಯಕರೇ...












Click it and Unblock the Notifications